ಐರಣಿ ಮಠದ ಸ್ವಾಮಿಗಳ ಶಿಷ್ಯರೆಂದು ಹೇಳಿಕೊಂಡು ಅಸಲಿ ನೋಟಿನ ಕೆಳಗೆ ಬಿಳಿಯ ಹಾಳೆಗಳುಳ್ಳ ಬಂಡಲ್ ನೀಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ದಾವಣಗೆರೆ ಮತ್ತು ಚಿತ್ರದುರ್ಗದ 5 ಜನ ಖದೀಮರ ತಂಡವನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, 2.80 ಲಕ್ಷ ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ 15 ಲಕ್ಷ ರು. ಮೌಲ್ಯದ 3 ಕಾರನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆಯ ಕಿರಣ್, ದಾದಾಪೀರ್, ಮಂಜುನಾಥ್, ಚಿಕ್ಕಮಗಳೂರಿನ ಇಲಿಯಾಜ್, ಚಿತ್ರದುರ್ಗದ ಮಹಾಂತೇಶ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
2023ರಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕೆಂಚನಾಲ್ ಗ್ರಾಮದ ಚಮನ್ ಸಾಬ್ ಎನ್ನುವವರಿಗೆ ವಂಚಕರು, ನಾವು ಐರಣಿ ಮಠದ ಸ್ವಾಮೀಜಿ ಶಿಷ್ಯರು. ನಮ್ಮ ಬಳಿ 100 ರೂ. ಮುಖಬೆಲೆಯ ನೋಟುಗಳಿದ್ದು ನೀವು 500 ರು. ಮುಖಬೆಲೆಯ ನೋಟುಗಳನ್ನು ನೀಡಿದರೆ ನಾವು ನಿಮಗೆ ಹೆಚ್ಚಿನ ಹಣ ನೀಡುತ್ತೇವೆಂದು ನಂಬಿಸಿ ನೋಟಿನ ಕೆಳಗೆ ಅದೇ ಸೈಜಿನ ಬಿಳಿಹಾಳೆಗಳ ಬಂಡಲ್ ನೀಡಿ ಹಣ ಪಡೆದು ಪರಾರಿಯಾಗಿದ್ದರು.
ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಸಂತೋಷ್ ಮತ್ತು ಮಂಜುನಾಥ ಜಿ. ಹಾಗೂ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಫುಟ್ಬಾಲ್ ಪಂದ್ಯದ ದ್ವೇಷ; ವಿದ್ಯಾರ್ಥಿಗಳನ್ನು ಅಪಹರಣಗೈದು ಅರೆನಗ್ನಗೊಳಿಸಿ ಹಲ್ಲೆ; ಇಬ್ಬರ ಬಂಧನ
ಕಾರ್ಯಾಚರಣೆಯಲ್ಲಿ ಹರಿಹರ ಪೊಲೀಸ್ ವೃತ್ತ ನಿರೀಕ್ಷಕರಾದ ಸುರೇಶ ಸಗರಿ, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಮಂಜುನಾಥ ಎಸ್. ಕುಪ್ಪೇಲೂರ, ಚಿದಾನಂದಪ್ಪ ಸಿಬ್ಬಂದಿ ತಿಪ್ಪೇಸ್ವಾಮಿ, ನಾಗರಾಜ. ಕರಿಯಪ್ಪ, ರಮೇಶ, ದಾದಾಪೀರ್, ಗಂಗಾಧರ, ಪ್ರಸನ್ನಕಾಂತ, ಸುರೇಶ, ಅರ್ಜುನ್ ನಂದ್ಯಾಲ, ನೀಲಮೂರ್ತಿ, ಸತೀಶ, ಎಲ್.ಡಿ. ಹನುಮಂತಪ್ಪ, ಅರ್ಜುನ ರಾಯಲ್, ಅನಿಲ್ ಕುಮಾರ್ ನಾಯ್ಕ, ರಿಜ್ವಾನ್ ನಾಸೂರ್, ಮಹೇಂದ್ರ, ನಾಗರಾಜ, ಸಿದ್ದಪ್ಪ, ಮುರುಳಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿ ರಾಘವೇಂದ್ರ ಶಾಂತರಾಜ ಅವರನ್ನು ಒಳಗೊಂಡ ತಂಡ ಭಾಗವಹಿಸಿತ್ತು.
