ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ದಲಿತ ಯುವಕನೋರ್ವ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿರುವುದಾಗಿ ವಾಟ್ಸಪ್ ಸ್ಟೇಟಸ್ ಹಾಕಿ, ಬಳಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಶಶಿಧರ ಬೆಣ್ಣೂರ(34) ಎಂದು ಗುರುತಿಸಲಾಗಿದೆ. ಇವರು ಮೂಲತಃ ತಿಕೋಟಾ ತಾಲೂಕಿನ ಕನಮಡಿ ಗ್ರಾಮದವರು ಎಂದು ತಿಳಿದುಬಂದಿದೆ.
ತಾಳಿಕೋಟೆಯ ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ತಮ್ಮ ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ವಿಜಯಪುರ ನಗರದ ಅಲ್ ಅಮೀನ್ ಎದುರಿನ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಳಿಕೋಟೆ ನಗರದಲ್ಲಿರುವ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ ಆಗಿ ಕೆಲಸ ನಿರ್ವಹಿಸುತ್ತಿದ್ದು, ತಮ್ಮ ವಾಟ್ಸಾಪ್ ಅಲ್ಲಿ ಮೂರು ಜನ ಅಧಿಕಾರಿಗಳಿಂದ ನಿರಂತರ ಕಿರುಕುಳ ಆಗುತ್ತಿದೆ ಎಂದು ಮೂವರ ಹೆಸರು ಹಾಕಿದ್ದು, ‘ನನ್ನ ಸಾವಿಗೆ ಇವರೇ ಕಾರಣ’ ಎಂದು ಉಲ್ಲೇಖಿಸಿದ್ದಾರೆ.

ಶ್ರೀದೇವಿ ಬಗಲಿ, ಈರಣ್ಣ ವಡವಡಗಿ ಹಾಗೂ ಜ್ಯೋತಿ ಕೋಳೂರಗಿ ಎಂಬುವವರ ಹೆಸರನ್ನು ಆತ್ಮಹತ್ಯೆಗೂ ಮುನ್ನ ಹಾಕಿದ್ದಾರೆ. ಆತ್ಮಹತ್ಯೆಗೆ ಶರಣಾಗಿರುವ ಶಶಿಧರ್ ಅವರಿಗೆ, ಪತ್ನಿ ಹಾಗೂ ಒಂದು ಮಗುವಿದೆ. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಈ ಘಟನೆಯ ಸಂಬಂಧ ಆಕ್ರೋಶ ಹೊರಹಾಕಿರುವ ದಲಿತ ಪರ ಸಂಘಟನೆಗಳ ಮುಖಂಡರು, ದಲಿತ ಮೇಲೆ ನಡೆಯುತ್ತಿರುವ ದೌರ್ಜನ್ಯ ಘಟನೆಗಳ ಬಗ್ಗೆ ದಲಿತ ಸಮುದಾಯ ಬಹಳ ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಇದೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಕ್ಷೌರ ಮಾಡಲು ನಿರಾಕರಿಸಿ ಇರಿದು ಕೊಂದ ಘಟನೆ ಮಾಸುವ ಮುನ್ನವೇ ನಮ್ಮ ಜಿಲ್ಲೆಯಲ್ಲಿಯೇ ಇಂತಹ ದುರಂತ ನಡೆದಿದೆ. ಕೆಲಸ ನಿರ್ವಹಿಸುವ ಸ್ಥಳದಲ್ಲಿ ಅಧಿಕಾರಿಗಳ ಕಿರುಕುಳಕ್ಕೆ ಒಬ್ಬ ದಲಿತ ನೌಕರ ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಶ್ರೀರಂಗಪಟ್ಟಣ | ಉಪನೋಂದಣಿ ಕಚೇರಿಯ ಖಾಸಗಿ ನೌಕರರ ಕಾರುಬಾರಿಗೆ ಲಗಾಮು ಹಾಕಿ: ರೈತ ಮುಖಂಡ ಕಿರಂಗೂರು ಪಾಪು
ರಾಜ್ಯದ ಎಲ್ಲ ಇಲಾಖೆಗಳಲ್ಲಿಯೂ ಕೂಡಾ ದಲಿತ ನೌಕರರ ಮೇಲೆ ನಿರಂತರವಾಗಿ ಕಿರುಕುಳ ನಡೆಯುತ್ತಲೇ ಇದೆ. ಇದಕ್ಕೆ ಕೊನೆ ಹಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಇಂತಹ ಅಮಾಯಕ ಜೀವಗಳು ಜಾತಿಯ ಕಾರಣಕ್ಕೆ ತಮ್ಮ ಜೀವಗಳನ್ನು ಬಲಿ ಕೊಡುತ್ತಿವೆ. ಇದಕ್ಕೆ ಕೊನೆ ಯಾವಾಗ? ರಾಜ್ಯ ಸರಕಾರ ಹಾಗೂ ಜಿಲ್ಲೆಯ ಪೊಲಿಸ್ ಇಲಾಖೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಬಂಧಿಸಬೇಕು. ಜೀವ ಕಳೆದುಕೊಂಡ ನೌಕರನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ದಲಿತ ಪರ ಸಂಘಟನೆಗಳು ಆಗ್ರಹಿಸಿವೆ.
