ಉಡುಪಿ ನಗರದ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿ ಬಳಿ ನಗರಸಭೆ ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ಪರಿಸರ ಸ್ನೇಹಿಯಾಗಿರುವ ಅನಿಲ ಚಿತಾಗಾರವನ್ನು ನಿರ್ಮಿಸಿದೆ. ಸಿದ್ಧಗೊಂಡು ಹಲವು ಸಮಯ ಕಳೆದಿದ್ದರೂ ಅನಿಲ ಚಿತಾಗಾರವು ಇನ್ನೂ ಉದ್ಘಾಟನೆ ಭಾಗ್ಯ ಪಡೆಯದೆ ಅನಾಥ ಸ್ಥಿತಿಯಲ್ಲಿದೆ. ಶೀಘ್ರವಾಗಿ ಲೋಕಾರ್ಪಣೆಗೊಳಿಸುವಂತೆ ಸಾರ್ವಜನಿಕ ವಲಯದಿಂದ ಆಗ್ರಹಗಳು ಸಹ ವ್ಯಕ್ತವಾಗುತ್ತಿವೆ.
ತಂತ್ರಜ್ಞಾನ ಮುಂದುವರಿದರೂ ಇನ್ನೂ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಕಟ್ಟಿಗೆಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಪದ್ಧತಿಯಂತೆ ಅಂತ್ಯಸಂಸ್ಕಾರಗಳು ನಡೆಯುತ್ತಿವೆ. ಈ ಪದ್ಧತಿಯಿಂದ ಮರಗಳ ವಿನಾಶ ಹಾಗೂ ಶವ ದಹನದಿಂದಾಗುವ ಧೂಮ, ಹಾರುವ ಬೂದಿಯಿಂದ ಸುತ್ತಮುತ್ತಲಿನ ಪರಿಸರದಲ್ಲಿ ‘ವಾಯುಮಾಲಿನ್ಯ’ ಆಗುತ್ತಿದೆ.

ಪರಿಸರ ರಕ್ಷಿಸುವ ದೃಷ್ಟಿಕೋನದಿಂದ ನಗರಸಭೆ ಶವಸಂಸ್ಕಾರಕ್ಕೆ ಆಧುನಿಕ ತಂತ್ರಜ್ಞಾನದ ಅನಿಲ ಚಿತಾಗಾರವನ್ನು ಸಾಂಪ್ರದಾಯಿಕ ಚಿತಾಗಾರದ ಸಮೀಪವೇ ಸ್ಥಾಪಿಸಿದೆ. ಈ ಪರಿಸರಸ್ನೇಹಿ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತಾದರೂ, ಇಲ್ಲಿಯವರೆಗೆ ಉದ್ಘಾಟನೆ ಆಗದಿದ್ದಕ್ಕೆ ಬೇಸರ ಕೂಡ ವ್ಯಕ್ತವಾಗಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಈ ದಿನ.ಕಾಮ್ ಜೊತೆಗೆ ಮಾತನಾಡಿದ್ದು, “ಕಟ್ಟಿಗೆಯಿಂದ ಶವ ದಹಿಸಲು ಸುಮಾರು 2 ರಿಂದ 3 ಗಂಟೆಗಳು ಬೇಕಾಗುತ್ತದೆ. ಅನಿಲ ಚಿತಾಗಾರದಲ್ಲಿ ಬಹಳ ಕಡಿಮೆ ಸಮಯದಲ್ಲಿ ಕಳೇಬರವನ್ನು ಭಸ್ಮಗೊಳಿಸಬಹುದು” ಎಂದು ತಿಳಿಸಿದರು.
“ಅನಿಲ ಚಿತಾಗಾರದಲ್ಲಿ ಶವವನ್ನು ದಹಿಸುವಾಗ ಉತ್ಪತ್ತಿಯಾಗುವ ಧೂಮವು ನೇರವಾಗಿ ಪರಿಸರದಲ್ಲಿ ಪಸರಿಸುವುದಿಲ್ಲ. ಈ ಚಿತಾಗಾರವು ಧೂಮದಲ್ಲಿನ ರಾಸಾಯನಿಕ ಹಾಗೂ ಧೂಮವನ್ನು ನಿಯಂತ್ರಿಸಿಕೊಂಡು, ಶುದ್ದೀಕರಿಸಿದ ಧೂಮವನ್ನು ಚಿಮಿಣಿಯ ಮೂಲಕ ಹೊರಹಾಕಿಸುವ ನೂತನ ವ್ಯವಸ್ಥೆ ಹೊಂದಿರುತ್ತದೆ. ಪರಿಸರಸ್ನೇಹಿಯಾಗಿ ಅನಿಲ ಚಿತಾಗಾರವು ಕೆಲಸ ನಿರ್ವಹಿಸುತ್ತದೆ. ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿರುವ ಅನಿಲ ಚಿತಾಗಾರವನ್ನು ನಗರಾಡಳಿತ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಶೀಘ್ರವೇ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕು” ಎಂದು ಆಗ್ರಹಿಸಿದ್ದಾರೆ.
