ಸರ್ವರನ್ನು ಸಮಾನವಾಗಿ ಕಾಣುವ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದರೂ ಸಂವಿಧಾನ, ಪ್ರಜಾಪ್ರಭುತ್ವದ ವಿರೋಧಿ ಕೃತ್ಯಗಳು ನಡೆಯುತ್ತಿರುವುದು ವಿಷಾದನೀಯ. ಸದ್ಯ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ರಾಯಚೂರು ಜಿಲ್ಲಾ ಘಟಕ ಕನ್ನಡ ಸಾಹಿತ್ಯ ಪರಿಷತ್ತು, ಡಿ.ದೇವರಾಜ ಅರಸು ವಿಚಾರ ವೇದಿಕೆ ವತಿಯಿಂದ ನಗರದದಲ್ಲಿ ಆಯೋಜಿಸಿದ್ದ ಸಾಹಿತಿ ಭಗತರಾಜ ನಿಜಾಮಾಕಾರಿ ಅವರ ‘ಭಗತನ ಪದಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಮಗ್ರ ಇತಿಹಾಸವನ್ನು ತಿರುಚಿ ಇಂದಿನ ಯುವ ಪೀಳಿಗಿಗೆ ವಾಟ್ಸಪ್ ಯುನಿರ್ವಸಿಟಿ ಮೂಲಕ ತಪ್ಪು ಮಾಹಿತಿ ನೀಡಿ, ವಿಷ ಬೀಜ ಬಿತ್ತುವ ಕೆಲಸಗಳು ಇಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಸಮಾಜದಲ್ಲಿ ನೈತಿಕತೆ ಕುಸಿಯುತ್ತಿದೆ. ಇತಿಹಾಸ ತಿರುಚಿ ದ್ವೇಷ ಹರಡಿಸುವುದು ಸಲ್ಲದು. ಇದಕ್ಕೆ ಕೊನೆಗಾಣಿಸುವುದು ಅವಶ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ಬಸವಪ್ರಭು ಪಾಟೀಲ ಬೆಟ್ಟದೂರು ಮಾತನಾಡಿ, ಭಗತರಾಜ ನಿಜಾಮಕಾರಿ ಬಂಡಾಯ ಸಾಹಿತ್ಯ ಹುಟ್ಟುಹಾಕಿದವರಲ್ಲಿ ಇವರೂ ಒಬ್ಬರು. ಕಷ್ಟಕರ ಜೀವನದಲ್ಲಿಯೂ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬೋಳಬಂಡೆಪ್ಪ, ಜಂಬಣ್ಣ ಅಮರಚಿಂತ, ಶಾಂತರಸ ಸಮಕಾಲೀನರು. ಜೊತೆಗೆ ಶಾಂತರಸರ ಪ್ರೀತಿಯ ಶಿಷ್ಯರಾಗಿದ್ದಾರೆ. ಭಗತನ ಪದಗಳು ಕೃತಿಯಲ್ಲಿ 128 ಗದ್ಯಗಳಿದ್ದು, ಪ್ರಸ್ತುತ ವಿದ್ಯಮಾನಗಳನ್ನೂ ಕೂಡ ಒಳಗೊಂಡಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ‘ಒತ್ತುವರಿ’ ಆರೋಪ: ದಾಖಲೆಗಳಿದ್ದರೂ ಕೃಷಿಕರ ಜಮೀನಿಗೆ ಜೆಸಿಬಿ ನುಗ್ಗಿಸಿದ ಅರಣ್ಯಾಧಿಕಾರಿ!
ಬೆಂಗಳೂರಿನ ಸಾಹಿತಿ ಹಾಗೂ ಚಿತ್ರ ಕಲಾವಿದ ಎಂ ಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರ್, ಬಷೀರ್ ಅಹ್ಮದ್ ಹೊಸಮನಿ, ಸಾಹಿತಿಗಳಾದ ಬಾಬು ಭಂಡಾರಿಗಲ್ , ಅಯ್ಯಪ್ಪಯ್ಯ ಹುಡಾ, ಆಂಜನೇಯ ಜಾಲಿಬೆಂಚಿ, ನರಸಿಂಹಲು ವಡವಾಟಿ, ನರಸಪ್ಪ, ರುದ್ರಯ್ಯ, ಬಿ.ವಿಜಯ ರಾಜೇಂದ್ರ ಉಪಸ್ಥಿತರಿದ್ದರು.
