ಬೀದರ್ ನಗರದ ಬಹಮನಿ ಕೋಟೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಭಾರತೀಯ ವಾಯುಪಡೆ ಸಹಯೋಗದಲ್ಲಿ ಏರ್ಪಡಿಸಿದ ಏರ್ ಶೋ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಬೀದರನ ಸೂರ್ಯಕಿರಣ ಏರೋಬ್ಯಾಟಿಕ್ ತಂಡದಿಂದ ಆಕರ್ಷಕ ಏರ್ ಶೋ ನಡೆಯಿತು. ಸೂರ್ಯಕಿರಣ ತಂಡದ ನಾಯಕ ಗುರುಪ್ರಿತಸಿಂಗ್ ದಿಲ್ಲೋನ್ ನೇತೃತ್ವದಲ್ಲಿ ನಡೆದ ಏರ್ ಶೋ ಕಾರ್ಯಕ್ರಮದಲ್ಲಿ 9 ಸೂರ್ಯಕಿರಣ ವಿಮಾನಗಳು ವಿವಿಧ ರೀತಿಯಲ್ಲಿ ಆಕರ್ಷಕ ಪ್ರದರ್ಶನ ನೀಡುವ ಮೂಲಕ ನೋಡುಗರನ್ನು ಮಂತ್ರಮುಗ್ದರನ್ನಾಗಿಸಿದವು.

ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಮೇಲಿನಿಂದ ಕೆಳಗೆ. ಪರಸ್ಪರ ಮುಖಾಮುಖಿ ಕ್ರಾಸಿಂಗ್, ಬ್ಯಾರಲ್ ರೋಲ್ ಸೇರಿದಂತೆ ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ವಿವಿಧ ವೈಮಾನಿಕ ಪ್ರದರ್ಶನ ನೋಡುಗರನ್ನು ಮೂಕವಿಸ್ಮಿತಗೊಳಿಸಿ ಆಕಾಶದಲ್ಲಿ ಚಿತ್ತಾರಗಳನ್ನು ಮೂಡಿಸಿದವು. ಬಾನಂಗಳದಲ್ಲಿ ವಿಮಾನಗಳು ಯಾವ ದಿಕ್ಕಿನಿಂದ ಹಾರುತ್ತಿವೆ ಎನ್ನುವುದನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದರು.

1996 ರಲ್ಲಿ ಆರಂಭಿಸಲಾದ ಸೂರ್ಯಕಿರಣ ಏರೋಬ್ಯಾಟಿಕ್ ತಂಡದ ವಿಮಾನಗಳು ಇಲ್ಲಿಯವರೆಗೆ ಭಾರತ ಮಾತ್ರವಲ್ಲದೆ ಶ್ರೀಲಂಕಾ, ಸಿಂಗಾಪುರ್, ದುಬೈ ಸೇರಿದಂತೆ ಇತರೆ ದೇಶಗಳಲ್ಲಿ 600 ಕ್ಕಿಂತಲೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದೆ. 9 ವಿಮಾನಗಳ ಈ ಏರ್ ಕ್ರಾಪ್ಟ್ ತಂಡ ಹೊಂದಿದೆ.
ಇಂದು (ಆ.31) ರಂದು ಬೀದರ ಕೋಟೆ ಮೇಲೆ ಏರ್ ಶೋ ಕಾರ್ಯಕ್ರಮ ನಡೆಯಲಿದ್ದು, ನಗರದ ಎಲ್ಲಾ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸರಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ಈ ಏರ್ ಶೋ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನ 3ಕ್ಕೆ ಕೋಟೆಯ ಒಳಗಡೆ ನಿಗದಿತ ಸ್ಥಳದಲ್ಲಿ ಹಾಜರಿದ್ದು, ಈ ಏರ್ ಶೋ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಏರ್ ಶೋ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನಗರದ ಸಾರ್ವಜನಿಕರು ಕುಟುಂಬ ಸಮೇತವಾಗಿ ಆಗಮಿಸಿ ವೀಕ್ಷಿಸಿದರು.