ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನಸಮುದ್ರದ ಬಳಿಯ ಗಗನಚುಕ್ಕಿ ಜಲಪಾತ ಪ್ರವಾಸಿ ತಾಣವನ್ನು ಅಭಿವೃದ್ಧಿ ಮಾಡಿ, ಇದೇ ತಿಂಗಳಲ್ಲಿ ಜಲಪಾತೋತ್ಸವ ನಡೆಸಲಾಗುವುದು ಎಂದು ಶಾಸಕ ಪಿ ಎಂ ನರೇಂದ್ರಸ್ವಾಮಿ ತಿಳಿಸಿದ್ದಾರೆ.
ನಗರದ ಬೆಳಕವಾಡಿ ಸಮೀಪದ ಲಕ್ಷದ್ವೀಪ ಹೋಟೆಲ್ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, “ಗಗನಚುಕ್ಕಿ ಜಲಪಾತೋತ್ಸವವು ಎರಡು ದಿನ ನಡೆಯಲಿದೆ. ಈ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮಗಳು, ಜಾನಪದ ಕಲೆಗಳು, ರಸಮಂಜರಿ, ಹಾಸ್ಯ ಮತ್ತು ಕಾಮಿಡಿ ಕಿಲಾಡಿಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ಸಾರ್ವಜನಿಕರಿಗಾಗಿ ಆಯೋಜಿಸಲಾಗುವುದು. ಜಲಪಾತೋತ್ಸವದ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು” ಎಂದರು.
“ಮಳೆಯಿಂದ ಹಾನಿಗೊಳಗಾದ ರಸ್ತೆ ಗುಂಡಿಗಳನ್ನು ಮುಚ್ಚಿ, ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಏರ್ಪಾಟು ಮಾಡಲಾಗುವುದು. ಪಾರ್ಕಿಂಗ್ ಏರ್ಪಾಡು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟ, ನೀರಿನ ವ್ಯವಸ್ಥೆ, ವಿದ್ಯುತ್ ದೀಪಾಲಂಕಾರ, ಲೇಸರ್ ಶೋ ಸೇರಿದಂತೆ ವಿವಿಧ ಸೌಕರ್ಯಗಳನ್ನು ಒದಗಿಸಲಾಗುವುದು” ಎಂದು ತಿಳಿಸಿದರು.
“ವೇದಿಕೆಯಿಂದ ರೊಟ್ಟಿ ಕಟ್ಟೆಯವರೆಗೆ ರಸ್ತೆ ಬದಿಯಲ್ಲಿ ಜಾನಪದ ಸೊಗಡನ್ನು ತೋರುವ ಚಿತ್ರಗಳನ್ನು ಹಾಕಿ, ಪ್ರವಾಸಿಗರನ್ನು ಸ್ವಾಗತಿಸಲು ವಿಶಿಷ್ಟ ಫಲಕಗಳನ್ನು ನಿರ್ಮಿಸಲಾಗುವುದು” ಎಂದು ಶಾಸಕರು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, “ಈ ವರ್ಷ ಚೆನ್ನಾಗಿ ಮಳೆಯಾಗಿರುವುದರಿಂದ ಕನ್ನಂಬಾಡಿ ಜಲಾಶಯ ತುಂಬಿದೆ. ಇದು ಜಲಪಾತೋತ್ಸವ ನಡೆಸಲು ಸರಿಯಾದ ಹೊತ್ತಾಗಿದೆ. ಮಳೆಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಹಬ್ಬದ ದಿನಾಂಕವನ್ನು ಶೀಘ್ರದಲ್ಲೇ ನಿಗದಿ ಮಾಡಲಾಗುವುದು” ಎಂದು ತಿಳಿಸಿದರು.
“ಕೆಆರ್ಎಸ್ ಜಲಾಶಯ ತುಂಬಿದ್ದರೂ ಕೊನೆಯ ಭಾಗಕ್ಕೆ ಇನ್ನೂ ಸರಿಯಾಗಿ ನೀರು ಬಂದಿಲ್ಲ. ಅದರ ಕಡೆಗೆ ಗಮನಕೊಡದ ಚುನಾಯಿತ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಜಲಪಾತೋತ್ಸವ ಮಾಡಲು ಹೊರಟಿದ್ದಾರೆ. ಇದು ಏನನ್ನು ಸೂಚಿಸುತ್ತದೆ ಈ ನಡೆ ಸರಿಯಲ್ಲ. ಬೆಳೆಗೆ ನೀರು ಹರಿಸುವ ಬಗ್ಗೆ ಸ್ಪಷ್ಟ ನಿರ್ದೇಶನವಿಲ್ಲ. ಆದರೆ ಜಲಪಾತೋತ್ಸವಕ್ಕೆ ನೀರು ಹರಿಸಲಾಗುತ್ತಿದೆ” ಎಂದು ರೈತರು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ತುಂಗಭದ್ರಾ ಜಲಾಶಯ ಭರ್ತಿಗೆ 1.94 ಅಡಿ ಬಾಕಿ; ನೀರು ಹೊರಬಿಡುವ ಸೂಚನೆ ಕೊಟ್ಟ ಮಂಡಳಿ
ಈ ಸಭೆಯಲ್ಲಿ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಿಇಒ ಶೇಕ್ ತನ್ವೀರ್ ಆಸೀಫ್, ಎಸಿ ಶಿವಮೂರ್ತಿ, ತಹಶೀಲ್ದಾರ್ ಎನ್ ಕೆ ಲೋಕೇಶ್, ತಾ.ಪಂ.ಇಒ ಶ್ರೀನಿವಾಸ್, ಗ್ರಾ.ಪಂ.ಅಧ್ಯಕ್ಷೆ ಮಹದೇವಮ್ಮ ಸೇರಿದಂತೆ ಹಲವು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.