ಆಗಾಗ ಅಂದುಕೊಳ್ಳುತ್ತೇನೆ
“ನಾನು ಮೊದಲು ಹೀಗಿರಲಿಲ್ಲ”
ಭಯವಿತ್ತು, ಭವಿಷ್ಯದ ಅಳುಕಿತ್ತು.
“ಜೋಕೆ, ಪ್ರಭುತ್ವ ನಿನ್ನ ಮುಕ್ಕಿ ತಿನ್ನುತ್ತೆ
ನೀನು ಬೆಳೆಯದಂತೆ ತುಳಿತಾರೆ,
ಜೈಲಿಗೆ ಹಾಕಿಸ್ತಾರೆ, ಕೊಲ್ತಾರೆ,
ಕಿರುಕುಳ ಕೊಡ್ತಾರೆ..ʼ
ತರಹೇವಾರಿ ಜನ ಹೇಳಿದ್ದು ಬುದ್ಧಿಮಾತೋ
ಬೆದರಿಸಿ ಬಾಯಿ ಮುಚ್ಚಿಸುವ ಸಂಚೋ-
ಎರಡೂ ಹೌದು.
ನಾನಂತೂ ಬಾಯಿ ತೆರೆಯದೆ ಇದ್ದೆ-
“ಮೊದಲು ನಾನು ಹೀಗಿರಲಿಲ್ಲ”
“ನೀನು ಪತ್ರಕರ್ತ
ಭಟ್ಟಂಗಿಗಳು, ಭಕ್ತರೇ ತುಂಬಿರುವ ವೃತ್ತಿಯಲ್ಲಿ
ನೀನು ಶೋಷಿತರ ಹುಡುಗ.
ದಲಿತ, ಮುಸ್ಲಿಂ, ಒಬಿಸಿ, ಆದಿವಾಸಿ ಎನ್ನಬೇಡ,
ಸಂಘಿಗಳ ಟೀಕಿಸಬೇಡ,
ನಿನ್ನ ಮೇಲೆ ಕಣ್ಣಿಡ್ತಾರೆ,
ತುಳಿಯುತ್ತಾರೆ”
-ಅಬ್ಬಾ, ಎಷ್ಟೊಂದು ಮಾತು!
ಒಡಲಕಿಚ್ಚು ದಹಿಸುವಾಗ
ಹೊಟ್ಟೆಪಾಡಿಗೆ ಮುಚ್ಚಿಟ್ಟುಕೊಂಡೆ.
ಹೀಗೊಂದು ದಿನ ಗೌರಿಯಮ್ಮ ಸಿಕ್ಕಳು
ಅವಳಿಗೆ ತಾಕಿದ ಗುಂಡು
ನನ್ನೆದೆಯ ಹೊಕ್ಕು ನಾನು ಸಾಯಲಿಲ್ಲ
ಹುಟ್ಟಿದೆ, ಸಿಡಿದೆ,
ಚಿಮ್ಮಿದ ರಕ್ತ ಶಾಯಿಯಾಗಿ ಹೊಮ್ಮಿತ್ತು
ಗಟಾರದ ಕೊಚ್ಚೆ ನೀರ
ಭಾರೀ ಮಳೆಯೊಂದು ಕೊಚ್ಚಿತ್ತು
‘ನಾನುಗೌರಿ’ಯಾದೆ.
ಭವಿಷ್ಯದ ಭಯವೇ? ಯಾರ ಭವಿಷ್ಯ?
ದೇಶವಿರದೆ, ಪ್ರೀತಿಯಿರದೆ ಭವಿಷ್ಯವುಂಟೆ?
ಇರದುದ ಉಳಿಸಲು, ಆತಂಕ ಕರಗಿ
ಸತ್ಯದ ದಾರಿಯೊಂದು ತೆರೆದಿತ್ತು.
ಅರೆಹೊಟ್ಟೆ ಅಳುಕಲಿಲ್ಲ
ಅದಕೇಕೆ ಅಂಜಲಿ?
ನುಡಿ… ಸತ್ಯ ನುಡಿ
ಹೊರಡು ನಿನ್ನ ಹಾದಿ ಇದುವೆ.
ಗೌರಿ ಎಂಬ ಬೆಳಕು ತೆರೆದಿತ್ತು
‘ನಾನುಗೌರಿ’ಯಾದಾಗ
ಎಷ್ಟೊಂದು ಧೈರ್ಯ!
ನಾನು ಏನೆಂದು ತಿಳಿದಾಯ್ತು.
ಬೆದರಿಸಿದವರು ಬೆಚ್ಚಿದರು
ಚುಚ್ಚಿದವರು ಕೊಚ್ಚಿ ಹೋದರು
ಗೌರಿ ಎಂದರೆ ಪ್ರೇಮದ ಸುಡುಸುಡು ಪಂಜು
ಗೌರಿ ಎಂದರೆ ಪ್ರಭುತ್ವಕ್ಕೆ ಸಿಡಿಮದ್ದು
ಗೌರಿ ಎಂದರೆ ನಿರ್ಭೀತ ಮಮತೆ
ಗೌರಿ ಸಾಯಲಿಲ್ಲ
ಕೊಂದವರೆದುರು ಹುಟ್ಟಿದಳು
ನಮ್ಮೆಲ್ಲರೆದುರಲಿ.
ಆಲವ ಕಡಿಯ ಬಂದವರೆದುರು
ಸಹಸ್ರಾರು ಬೇರು
ಕಾಂಡ ಲಯವಾಗಿ ಹಬ್ಬಿದ ಬಿಳಲ ಕಂಡು
ಕೊಡಲಿಗಳಿಗೆ ಕಂಪನ.
‘ನಾನುಗೌರಿ’.
ಬೆಳಕು ತೆರೆದಾಗ
ಭಯವೇಕೆ?
‘ನಾವೆಲ್ಲ ಗೌರಿ’
ನೊಂದುಬೆಂದು ತಂಗಾಳಿ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.
ನಿಮ್ಮದು ಪ್ರಶಂಸನೀಯ ಪ್ರಯತ್ನ