ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಲ ಗ್ರಾಮದ ದಲಿತ ಯುವಕನ ಕೊಲೆ ಹಾಗೂ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದ ದಲಿತ ಯುವತಿಯ ದಾರುಣ ಹತ್ಯೆ ಮಾಡಲಾಗಿದೆ. ಈ ಎರಡೂ ಪ್ರಕರಣದ ಎಲ್ಲ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯಿಸಿ ದಲಿತ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಗಂಗಾವತಿ ನಗರದ ಅಂಬೇಡ್ಕರ್ ವೃತ್ತದಿಂದ ಬಾಬು ಜಗಜೀವನ್ ರಾವ್ ವೃತ್ತದವರೆಗೆ ಮೆರವಣಿಗೆ ನಡೆಸಿ ಪ್ರತಿಭಟಿಸಿದ ಪ್ರತಿಭಟನಾಕಾರರು, ಸ್ವಾತಂತ್ರ ಬಂದು 75 ವರ್ಷ ಕಳೆದರೂ ಸಹ ಇಂದಿಗೂ ದಲಿತರ ಮೇಲೆ ಆಗುತ್ತಿರುವ ಜಾತಿ ನಿಂದನೆ, ಕಿರುಕುಳ, ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದು ದುರಂತ. ಇನ್ನೆಷ್ಟು ದಲಿತ ಸಮುದಾಯದ ಜನರು ಬಲಿಯಾಗಬೇಕು. ಇದಕ್ಕೆ ಕಡಿವಾಣ ಇಲ್ಲವೇ ಎಂದು ಪ್ರಶ್ನಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಪದೇ ಪದೇ ಕಂಡು ಬಂದರೂ ಇದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಕಾಲ ಎಷ್ಟೇ ಬದಲಾದರೂ, ಆಡಳಿತಾರೂಢ ಸರ್ಕಾರಗಳು ಏನೇ ಕಾನೂನುಗಳು ತಂದರು, ಮರ್ಯಾದಾಗೇಡು ಹತ್ಯೆ ಎನ್ನುವಂತಹ ಇಂತಹ ಸಾವುಗಳಿಂದ ದೂರಾಗುವುದು ಯಾವಾಗ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾಲ್ಮೀಕಿ ಸಮುದಾಯಕ್ಕೆ ಸೇರಿದಂತಹ ಹನುಮಯ್ಯ ಎಂಬ ಯುವಕ, ಮರಿಯಮ್ಮ ಎಂಬ ಪರಿಶಿಷ್ಟ ಜಾತಿ( ಮಾದಿಗ) ಸಮುದಾಯದ ಯುವತಿಯನ್ನು ಪ್ರೀತಿಸಿ, ಮದುವೆಯಾಗಿದ್ದ ಯುವಕ, ತನ್ನ ಪ್ರೀತಿಯನ್ನೇ ಮರೆತು ಜಾತಿ ಎಂಬ ಕಾರಣಕ್ಕೆ ಕೊಲೆಗೈದಿದ್ದಾನೆ. ಮದುವೆಯಾದ ಕೆಲ ದಿನಗಳಿಂದ ಮರಿಯಮ್ಮಳ ಗಂಡ ಹಾಗೂ ಅತ್ತೆ , ಮಾವ ಇತರರು ಸೇರಿ ಯುವತಿಗೆ ಮಾನಸಿಕ ಹಿಂಸೆ ನೀಡಿ, ಹೊಡೆದು ಬಡಿದು, ಜಾತಿನಿಂದನೆ ಮಾಡಿ ಕೊನೆಗೆ ಊಟದಲ್ಲಿ ವಿಷವುಣಿಸಿ ಹತ್ಯೆ ಮಾಡಿದ್ದಾರೆ ಎಂದು ದೂರಿದರು.
ಯುವಕನ ಕುಟುಂಬವು ಗ್ರಾಮದಲ್ಲಿ ತಳ ಸಮುದಾಯಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಗುಂಡಾಗಿರಿಗಳಂತೆ ವರ್ತಿಸುವುದರಿಂದ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಪ್ರಕರಣಗಳು ದಾಖಲಾಗಿರುತ್ತದೆ. ಕಾನೂನಿನ ಭಯವಿಲ್ಲದೆ ಅಮಾಯಕರನ್ನು ಭಯದಲ್ಲಿರುವಂತೆ ವಾತಾವರಣ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಸಮಾಜದಲ್ಲಿ ಸುಧಾರಣೆ ತರಲಿಕ್ಕಾಗಿ ನೈತಿಕತೆಯ ಸ್ವಾತಂತ್ರ್ಯ ಅಭಿಯಾನ: ಅರ್ಷಿಯಾ ಬೇಗಂ
ಕೊಲೆಗೈದ 13 ಜನ ಆರೋಪಿಗಳ ಪೈಕಿಯಲ್ಲಿ ಕೇವಲ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಬಂಧಿಸಿ, ಗಲ್ಲು ಶಿಕ್ಷೆ ನೀಡಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹುಲಗೇಶ್ ದೇವರಮನಿ, ಮರಿಸ್ವಾಮಿ ಬರಗೂರು, ಐಹೊಳೆ ದೇವಣ್ಣ, ದುರ್ಗಪ್ಪ, ಅಂಬಣ್ಣ ವಟಪರ್ವಿ, ಕರಿಯಪ್ಪ ಗುಡಿಮನಿ, ದುರ್ಗಪ್ಪ, ಕನಕಗಿರಿ ಪಾಮಣ್ಣ ಅರಳಿಗನೂರ್, ಹುಸನಪ್ಪ ಹಂಚಿನಾಳ, ಅಜಯ್ ಹಾಗೂ ಕಾರ್ಯಕರ್ತರು ಇದ್ದರು.
