ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳಲ್ಲಿ ಬೀದಿ ನಾಯಿಗಳ ಸಮೀಕ್ಷೆ ಕಾರ್ಯವನ್ನು 15 ದಿನದೊಳಗಾಗಿ ಆರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಪ್ರಾಣಿ ಸಂತಾನ ನಿಯಂತ್ರಣ ಮೇಲ್ವಿಚಾರಣೆ ಮತ್ತು ಅನುಷ್ಠಾನ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಮೀಕ್ಷೆ ಸರಕಾರೇತರ ಸಂಘ ಸಂಸ್ಥೆಗಳ ಮೂಲಕ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಸಾರ್ವಜನಿಕರ ಹಾಗೂ ಪ್ರಾಣಿಗಳ ಸುರಕ್ಷತೆ ದೃಷ್ಟಿಯಿಂದ ಪ್ರಾಮಾಣಿತ ಕಾರ್ಯಾಚರಣೆ ವಿಧಾನ (ಸ್ಟಾಂಡರ್ಡ ಆಪರೇಟಿಂಗ್ ಪ್ರೋಸಿಜರ್) ಪ್ರಕಾರ ನುರಿತ ತಜ್ಞರಿಂದ ಸಮೀಕ್ಷೆ ಕೈಗೊಳ್ಳಬೇಕೆಂದು ಸೂಚಿಸಿದರು.
2018 ರ ಸಮೀಕ್ಷೆ ಪ್ರಕಾರ ಅವಳಿ ನಗರಗಳಲ್ಲಿ 26 ಸಾವಿರ ಹಾಗೂ ಜಿಲ್ಲೆಯಾದ್ಯಂತ 50 ಸಾವಿರ ಬೀದಿ ನಾಯಿಗಳು ಇರಬಹುದು ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಪಾಲಿಕೆಯಿಂದ ನಾಯಿಗಳ ಸರ್ವೆ ಹಾಗೂ ಸಂತಾನ ಚಿಕಿತ್ಸೆಗೆ ಅಗತ್ಯ ವೈಜ್ಞಾನಿಕ ಪದ್ಧತಿಯ ವಿವರಗಳನ್ನು ಟೆಂಡರ್ನಲ್ಲಿ ನಮೂದಿಸತಕ್ಕದ್ದು. ಸೂಕ್ತ ಸಂಘ-ಸಂಸ್ಥೆಗಳ ಹಾಗೂ ತಜ್ಞರ ಜೊತೆ ಚರ್ಚಿಸಿ ಸೂಕ್ತ ನಿಗಾವಹಿಸಿ ಒಂದು ವರ್ಷದೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಬಹುದು ಎಂದು ತಿಳಿಸಿದರು.
ಜಿಲ್ಲೆಯ ನಗರ ಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿಯೂ ಸಹ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಸಮೀಕ್ಷೆ ಹಾಗೂ ಸಂತಾನ ಚಿಕಿತ್ಸೆ ಕೈಗೊಳ್ಳಬೇಕು. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸೂಚಿಸಿದ ರೀತಿಯಲ್ಲಿ ನಾಯಿಗಳ ಗಣತಿಯನ್ನು ನಡೆಸತಕ್ಕದ್ದು. ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ನಾಯಿಗಳ ಸಂಖ್ಯೆಗೆ ಅನುಗುಣವಾಗಿ ಅವಶ್ಯಕ ಮೂಲ ಸೌಕರ್ಯಗಳು ಇರುವುದನ್ನು ಖಚಿತಪಡಿಸಿಕೊಳ್ಳುವುದು. ಕನಿಷ್ಠ 70 ಪ್ರತಿಶತದಷ್ಟು ನಾಯಿಗಳ ಜನನ ನಿಯಂತ್ರಣವನ್ನು ಹಂತ ಹಂತವಾಗಿ ಕೈಗೊಳ್ಳಬೇಕು ಎಂದು ಹೇಳಿದರು.
ಬೀಡಾಡಿ ದನಗಳ ಬಗ್ಗೆ ಸಹ ಕ್ರಮ ವಹಿಸುವಂತೆ, ಬೀಡಾಡಿ ದನಗಳನ್ನು ಗೋಶಾಲೆಗೆ ಸೇರಿಸಿ ದಂಡ ವಿಧಿಸುವ ಕ್ರಮದ ಬಗ್ಗೆ ಮಾಲೀಕರಲ್ಲಿ ಅರಿವು ಮೂಡಿಸುವಂತೆ ಮಾಡಬೇಕು. ಅವಳಿ ನಗರಗಳಲ್ಲಿ ಈ ಬಗ್ಗೆ ಧ್ವನಿವರ್ಧಕಗಳ ಮೂಲಕ ವ್ಯಾಪಕ ಪ್ರಚಾರ ನೀಡುವಂತೆ ತಿಳಿಸಿದರು.
ಧಾರವಾಡ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 27, 2024 ರವರೆಗೆ ರೇಬಿಸ್ ನಿರ್ಮೂಲನಾ ದಿನಾಚರಣೆಯನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಮ್ಮಿಕೊಂಡಿದ್ದು, ಉಚಿತವಾಗಿ ಸಾಕು ಹಾಗೂ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಲಾಗುವುದು. ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮ ಸ್ಥಳೀಯ ಸಂಸ್ಥೆಗಳು ಪಶುಪಾಲನಾ ಇಲಾಖೆಯ ಸಹಯೋಗದಲ್ಲಿ ಬೀದಿನಾಯಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ರೇಬಿಸ್ ರೋಗ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.