ಒಳಮೀಸಲಾತಿ ಕುರಿತ ಗೊಂದಲಗಳಿಗೆ ಸುಪ್ರೀಂ ಕೋರ್ಟ್ ತೆರೆ ಎಳೆದಿದ್ದು, ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ನೀಡಿದ್ದರೂ ಕೂಡ ರಾಜ್ಯ ಸರ್ಕಾರ ಒಳಮೀಸಲಾತಿ ಅನುಷ್ಠಾನಗೊಳಿಸದೆ ನಿದ್ದೆ ಮಾಡುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ದಾವಣಗೆರೆ ಜಿಲ್ಲಾ ಸಂಚಾಲಕ ಮಂಜುನಾಥ್ ಕುಂದವಾಡ ಒತ್ತಾಯಿಸಿದರು.
ದಾವಣಗೆರೆ ನಗರದ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಜಮಾಯಿಸಿದ ನೂರಾರು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ವಿಶಿಷ್ಟವಾಗಿ ತಮಟೆ ಬಾರಿಸಿ, ಘೋಷಣೆಗಳನ್ನು ಕೂಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
“ಒಳಮೀಸಲಾತಿ ಜಾರಿಗೊಳಿಸಲು ರಾಜ್ಯಗಳಿಗೆ ಸಂವಿಧಾನಬದ್ದ ಅಧಿಕಾರವಿದೆಯೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಒಳಮೀಸಲಾತಿ ಜಾರಿಗೆ ಪ್ರೊ. ಬಿ ಕೃಷ್ಣಪ್ಪನವರು ಸ್ಥಾಪಿಸಿದ್ದ ದಲಿತ ಸಂಘರ್ಷ ಸಮಿತಿ 30 ವರ್ಷಗಳಿಂದ ಹೋರಾಡುತ್ತಾ ಬಂದಿತ್ತು. ಸುಪ್ರೀಂ ತೀರ್ಪು ನಮ್ಮ ಸಂಘಟನೆ ಹೋರಾಟಕ್ಕೆ ಸಿಕ್ಕ ಅಪೂರ್ವ ಜಯವಾಗಿದೆ” ಎಂದು ಮಂಜುನಾಥ್ ಕುಂದವಾಡ ಹರ್ಷ ವ್ಯಕ್ತಪಡಿಸಿದರು.

“ಈ ಹಿಂದೆ ಅನೇಕ ನ್ಯಾಯಾಲಯಗಳು ಒಳಮೀಸಲಾತಿ ವಿಚಾರವಾಗಿ ವಿವಿಧ ತೀರ್ಪುಗಳನ್ನು ನೀಡಿದ್ದವು. ಈಗ ಅಂತಿಮವಾಗಿ ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಈ ವಿವಾದವನ್ನು ಪರಿಹರಿಸಿದ್ದು, ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿದೆ. ಇದು ಸವಾಲಿನ ಕಾರ್ಯವೈವಿಧ್ಯವಾಗಿದ್ದು, ಪರಿಶಿಷ್ಟ ಜಾತಿಯಲ್ಲಿರುವ ನೂರಾರು ಉಪಜಾತಿಗಳಿಗೆ ಸಮರ್ಪಕವಾಗಿ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು” ಎಂದು ಒತ್ತಾಯಿಸಿದರು.
“ಒಳಮೀಸಲಾತಿ ವಿಚಾರವಾಗಿ ಚುನಾವಣೆಗೆ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂವಿಧಾನ ತಿದ್ದುಪಡಿ ತರಬೇಕೆಂದು, ಅಧಿಕಾರಕ್ಕೆ ಬಂದರೆ ನಾವು ಆ ಕೆಲಸ ಮಾಡುತ್ತೇವೆಂದು ಭರವಸೆ ನೀಡಿದ್ದರು. ಆದರೆ ಈಗ ನ್ಯಾಯಾಲಯ ಅಧಿಕಾರ ನೀಡಿ ಒಂದೂವರೆ ತಿಂಗಳಾದರೂ ಅದನ್ನು ಅನುಷ್ಠಾನಗೊಳಿಸಿದೆ ಮೌನಕ್ಕೆ ಜಾರಿದ್ದಾರೆ. ಈಗ ನಡೆಯುತ್ತಿರುವ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿದು ಒಳಮೀಸಲಾತಿಯ ನಂತರವೇ ನೇಮಕಾತಿ ಪ್ರಾರಂಭಿಸಬೇಕು. ಶೀಘ್ರವೇ ಒಳಮೀಸಲಾತಿ ಅನುಷ್ಠಾನಗೊಳಿಸಿ ಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು.

“ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಜಾರಿಯ ಸಂವಿಧಾನಬದ್ದ ಅಧಿಕಾರವಿದ್ದು, ಶೀಘ್ರ ಜಾರಿಗೊಳಿಸಬೇಕು. ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ. ಬಿ ಕೃಷ್ಣಪ್ಪ ಅವರ ಜನ್ಮದಿನ ಜೂನ್ 9 ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಿ ಅವರಿಗೆ “ಕರ್ನಾಟಕ ರತ್ನ” ಪ್ರಶಸ್ತಿ ನೀಡಬೇಕು. ಬಾಕಿ ಉಳಿದಿರುವ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಒಳಮೀಸಲಾತಿ ಜಾರಿಯಾಗುವವರೆಗೂ ರಾಜ್ಯ ಸರ್ಕಾರದ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿಯಬೇಕು. ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಗುತ್ತಿಗೆ ಅಡಿ ಕಾರ್ಯನಿರ್ವಹಿಸುವ ನೌಕರರ ಕಾಯಂಗೊಳಿಸಿ ಮತ್ತು ಡಾ. ಅಂಬೇಡ್ಕರ್, ಮಹಾತ್ಮ ಗಾಂಧಿಯವರ ಭಾವಚಿತ್ರಗಳಿಗೆ ಅವಮಾನ ಮಾಡಿದ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು” ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಫೀಸ್ ಬಾಕಿ ಇರಿಸಿದ್ದಕ್ಕೆ ವಿದ್ಯಾರ್ಥಿಗಳನ್ನು ಕೋಣೆಯಲ್ಲಿ ಕೂಡಿ ಹಾಕಿಟ್ಟ ಶಾಲಾಡಳಿತ!
ಬೃಹತ್ ತಮಟೆ ಚಳವಳಿಯಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ ಸಿದ್ದರಾಮಪ್ಪ, ಜಿಲ್ಲಾ ಪದಾಧಿಕಾರಿಗಳಾದ ವಿಜಯಲಕ್ಷ್ಮಿ, ಹನುಮಂತಪ್ಪ ಅಣಜಿ, ಕುಪೇಂದ್ರಪ್ಪ, ಚಿತ್ರಲಿಂಗಪ್ಪ, ಪರಮೇಶ್, ಮಹಂತೇಶ್ ಹಾಲವರ್ತಿ, ಹನುಮಂತಪ್ಪ ಗುಮ್ಮನೂರು, ತಿಪ್ಪೇಶ್, ದೊಡ್ಡಪ್ಪ, ಲಕ್ಷ್ಮಣ್ ಕೊಡಗನೂರು, ಮಂಜುನಾಥ್ ಲೋಕಿಕೆರೆ, ಬೇತೂರು ಹನುಮಂತ, ಮಂಜುನಾಥ ನೀರ್ತಡಿ, ಅಣಜಿ ನಿಂಗಪ್ಪ, ನಾಗರಾಜ್ ಚಿತ್ತಾನಳ್ಳಿ, ನಾಗರಾಜ್, ಕೆಂಚಪ್ಪ ಈಚ್ಘಟ್ಟ , ಪ್ರಸನ್ನ ತುರ್ಚಘಟ್ಟ, ಹಾಲೇಶ್ ಕುಂದವಾಡ, ಮಹಿಳಾ ಒಕ್ಕೂಟದ ಉಮಾ, ಭವಾನಿ ಸೇರಿದಂತೆ ಇತರ ಮುಖಂಡರು, ಕಾರ್ಯಕರ್ತರು ಇದ್ದರು.