ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಬುಧವಾರ ರಾತ್ರಿ ಗಣಪತಿ ವಿಸರ್ಜನೆಯ ಮೆರವಣಿಗೆ ಮೇಲೆ ಪೆಟ್ರೋಲ್ ಬಾಂಬ್ ಮತ್ತು ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಮತ್ತು ದೇಶದ್ರೋಹಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಅಖಂಡ ಭಾರತ ವಿನಾಯಕ ಮಹಾಸಭಾ ಹಾಗೂ ಹಿಂದೂಪರ ಸಂಘಟನೆ ಮುಖಂಡರು ನಗರದ ಪ್ರವಾಸಿ ಮಂದಿರ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದ ಮುಸ್ಲಿಮ್ ಸಮುದಾಯವು ಕೋಮುಗಲಭೆಗಳಿಗೆ ಮುಂದಾಗಿದೆ. ರಾಜ್ಯದಲ್ಲೂ ಉತ್ತರಪ್ರದೇಶದ ಮಾದರಿ ಸರ್ಕಾರ ರಚನೆಯಾಗಬೇಕು. ಭಯೋತ್ಪಾದಕರಿಂದ ವಿಘ್ನ ವಿನಾಯಕನ ಮೂರ್ತಿಯ ಮೇಲಿನ ಹಲ್ಲೆಯು ಮುಂದೆ ನಡೆಯದ ರೀತಿಯಲ್ಲಿ ಪುಂಡರಿಗೆ ಪಾಠ ಕಲಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಾದ್ಯಂತ ಮತಾಂಧರ ಶಕ್ತಿಗಳ ಅಟ್ಟಹಾಸವು ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕಿಡಿಕಾರಿದರು.
ಕೋಲಾರದಲ್ಲೂ ಇಂತಹ ಘಟನೆಗಳು ನಡೆಯಬಹುದು. ಕಿಡಿಗೇಡಿಗಳ ಮೇಲೆ ಕೂಡಲೇ ರಾಷ್ಟ್ರ ದ್ರೋಹಿ ಪ್ರಕರಣ ದಾಖಲಿಸಬೇಕು. ರಾಷ್ಟ್ರದ್ರೋಹಿ ಕೃತ್ಯ ನಡೆಸಿದವರ ವಿರುದ್ದ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಗಲಭೆಗೆ ಕಾರಣರಾದವರನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ವಿಜಯಕುಮಾರ್ ಮಾತನಾಡಿ, ಕಲ್ಲು ತೂರಿದ ಪುಂಡರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿ ಶಿಕ್ಷಿಸಬೇಕು. ಕಲ್ಲು ತೂರಾಟವನ್ನು ಪ್ರಚೋದಿಸಿದ ಪಟ್ಟಭದ್ರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ತೆರಿಗೆ ವಂಚನೆ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ: ಡಾ.ಹೆಚ್.ವಿ.ವಾಸು
ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರಾದ ಪ್ರವೀಣ್ ಗೌಡ, ನಾಮಲ್ ಮಂಜು, ಭಜರಂಗದಳ ಬಾಬು, ಸುರೇಶ್ ರಾಜ್, ಬಾಲಾಜಿ, ಗಾಂಧಿನಗರ ಮಹೇಶ್, ಎಬಿವಿಪಿ ಹರೀಶ್, ಸಂಪತ್, ಶಶಿ, ಮುರಳಿ, ವಿನಯ್, ರವಿಕುಮಾರ್, ಶ್ರೀನಿವಾಸ್, ಸಾಯಿಮೌಳಿ ಮುಂತಾದವರು ಇದ್ದರು.