ಸರಕಾರದ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಘೋಷಣೆಯಾಗುವವರೆಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗೆ ಇನ್ಮುಂದೆ ಮಧ್ಯಾಹ್ನದ ಬಿಸಿಯೂಟ ಕೊಡಲಾಗುವುದು ಎಂದು ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಘೋಷಿಸಿದರು.
ಚಿಕ್ಕಬಳ್ಳಾಪುರ ನಗರ ಹೊರವಲಯದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅನನ್ಯ ಕಲಾರಂಗ, ಗೌತಮಬುದ್ಧ ಫೌಂಡೇಶನ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಂಗಭೂಮಿಯಿಂದ ಹೊರಬಂದ ಕಲೆ, ಇಂದು ಸಿನಿಮಾಗಳ ಮೂಲಕ ಕೋಟಿ ರೂ.ಗಳ ಉದ್ಯಮವಾಗಿ ಮಾರ್ಪಟ್ಟಿದೆ. ಇದರಿಂದ ಲಕ್ಷಾಂತರ ಜನರ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಇಂತಹ ಮಹನೀಯರನ್ನು ಹುಟ್ಟಿಹಾಕುವಂತ ರಂಗ ತರಬೇತಿಗಳಿಂದ ಮಕ್ಕಳಲ್ಲಿನ ಜ್ಞಾನದ ಸಬಲೀಕರಣವಾಗಲಿ ಎಂದು ಆಶಿಸಿದರು.
ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳ ಶೋಷಣೆ ನಡೆಯುತ್ತಿದೆ. ಆದರೆ ಇದೆಲ್ಲಕ್ಕೂ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಹೆಣ್ಣುಮಕ್ಕಳು ಮುನ್ನೆಲೆಗೆ ಬರಬೇಕು. ನಮ್ಮಲ್ಲಿರುವ ಶಕ್ತಿಯನ್ನ ಉಪಯೋಗಿಸಿ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬುದ್ಧ ಎಂದರೆ ಸೊನ್ನೆ. ಏನೂ ಆಗದೆ ಇರುವುದೇ ಬುದ್ಧ. ಅಂತಹ ಬುದ್ಧನನ್ನು ಕವಿಗಳು, ವಿಮರ್ಶಕರು, ಲೇಖಕರು ಅವರದ್ದೇ ದಾಟಿಯಲ್ಲಿ ವರ್ಣಿಸಿದ್ದಾರೆ. ಅದೇ ರೀತಿಯಲ್ಲಿ ಕುವೆಂಪು ಅವರು ಮಹಾರಾತ್ರಿ ನಾಟಕವನ್ನು ಬರೆದಿದ್ದಾರೆ. ಇದರಿಂದ ಜ್ಞಾನ ವಿಕಾಸಗೊಳ್ಳಲಿ ಎಂದು ಸಂದೀಪ್ ರೆಡ್ಡಿ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ವಿ.ನಾಯಕ್(ಆಮಾಸ) ಮಾತನಾಡಿ, ನಾಟಕದಲ್ಲಿ ಹಲವು ಪ್ರಕಾರಗಳಿದ್ದು, ಇದೊಂದು ವಿಶಿಷ್ಟ ಮತ್ತು ವಿಶಾಲವಾದ ಕಲೆ. ಇದೆಲ್ಲವನ್ನೂ ಒಳಗೊಳ್ಳುವುದೇ ರಂಗಭೂಮಿ. ಸಮಾಜದಲ್ಲಿ ಜೀವಪ್ರೀತಿ, ಕಾರುಣ್ಯ ಇದೆ ಎಂದರೆ ಅದಕ್ಕೆ ರಂಗಭೂಮಿ ಕಾರಣ ಎಂದು ಹೇಳಿದರು.
ಯುವಸಮೂಹ ರಂಗ ತರಬೇತಿಗಳ ಸದುಪಯೋಗಪಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು ಎಂದು ಸಲಹೆ ನೀಡಿದರು.
ಅನನ್ಯ ಕಲಾರಂಗದ ನಿರ್ದೇಶಕ ಗ.ನ.ಅಶ್ವತ್ಥ್ ಮಾತನಾಡಿ, ಜೀವನದಲ್ಲಿ ಹುಡುಕಾಟವನ್ನು ಮಾಡಿದಾಗ ನಾವು ಮನುಷ್ಯರಾಗುತ್ತೇವೆ. ಹುಟ್ಟುತ್ತಾ ವಿಶ್ವಮಾನವರಾಗಿ ಹುಟ್ಟುತ್ತೇವೆ. ಆದರೆ, ಸಮಾಜ ಬೆಳೆಯುತ್ತಾ ಜಾತಿ ಹೆಸರಿನಲ್ಲಿ ನಮ್ಮನ್ನ ಅಲ್ಪಮಾನವರನ್ನಾಗಿ ಮಾಡುತ್ತದೆ. ಇಂತಹ ಅಲ್ಪ ಮಾನವರನ್ನು ವಿಶ್ವ ಮಾನವರನ್ನಾಗಿ ಮಾಡುವ ಶಿಕ್ಷಣ ವ್ಯವಸ್ಥೆ, ಸಂಘ ಸಂಸ್ಥೆಗಳು ರೂಪುಗೊಳ್ಳಬೇಕು ಎಂದು ವಿಶ್ವಮಾನವ ಸಂದೇಶವನ್ನು ಪುನರುಚ್ಚರಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ದಿನಕ್ಕೆ 92-96 ಮಂದಿ ಅಪ್ರಾಪ್ತ ಮತ್ತು ವಯಸ್ಕ ಹೆಣ್ಣುಮಕ್ಕಳ ಅತ್ಯಾಚಾರ ಆಗುತ್ತಿದೆ. ಸಮಾಜ ಅತ್ಯಾಚಾರಕ್ಕೆ ಮುಂದಾಗಿದೆ. ಮಠಗಳಲ್ಲಿ ಇರುವವರು ಇಂದು ಜೈಲಿಗೆ ಹೋಗುತ್ತಿದ್ದಾರೆ. ಪ್ರಸ್ತುತ ನಾವೆಲ್ಲರೂ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆಯವರನ್ನ ಪೂಜಿಸಬೇಕಿದೆ ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಚಾಂದ್ ಪಾಷ ಮಾತನಾಡಿ, ಎಲ್ಲಿ ನಾರಿಯರು ಪೂಜಿಸಲ್ಪಡುವರೋ ಅಲ್ಲಿ ದೇವತೆಗಳು ಖುಷಿಯಾಗಿ ಇರುತ್ತವೆ. ಪ್ರತೀ ಸಮಾಜ ಬದಲಾವಣೆಯತ್ತ ಸಾಗುತ್ತಲೇ ಇರುತ್ತದೆ. ಶಾಶ್ವತವಾಗಿ ಉಳಿಯುವುದು ಆ ಬದಲಾವಣೆ ಮಾತ್ರವೇ. ಬದಲಾವಣೆಯ ಪ್ರೇರಕ ಶಕ್ತಿಯಾಗಿ ನೀವು ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಅತಿಥಿ ಉಪನ್ಯಾಸಕ ಎಂ.ಮುನಿರಾಜು ಮಾತನಾಡಿ, ನಾಟಕಂ ಭಾವಾನು ಕೀರ್ತನಂ, ನಾಟಕಗಳು ಭಾವನೆಗಳನ್ನು ಪ್ರದರ್ಶನ ಮಾಡುವ ಅಧ್ಭುತ ವೇದಿಕೆ. ನಿಮ್ಮ ಶಕ್ತಿಯನ್ನು ಭಾಷಾ ಮಾಧ್ಯಮದ ಮೂಲಕ ಬಳಸಿಕೊಂಡರೆ ಉತ್ತಮ ಭವಿಷ್ಯ ಸಾಧ್ಯ. ಓದಿ ಭೋಧಕನಾಗು, ಏನಾದರಾಗು ಮೊದಲು ಮಾನವನಾಗು. ಅಂತರಾತ್ಮ ಭ್ರಷ್ಟನಾಗದಂತೆ ಕಾಪಾಡಿಕೊಳ್ಳಿ ಎಂದು ಕುವೆಂಪು ಅವರ ಸಾಲುಗಳನ್ನು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಒಗ್ಗಟ್ಟಿನ ಮಂತ್ರವೇ ಮದ್ದು
ಕಾರ್ಯಕ್ರಮದಲ್ಲಿ ಸರಕಾರಿ ಪ್ರ.ದ.ಮಹಿಳಾ ಕಾಲೇಜು ಪ್ರಾಂಶುಪಾಲರಾದ ಚಂದ್ರಯ್ಯ ಜಿ.ಡಿ, ರಾಮು, ಗೌತಮ ಬುದ್ಧ ಫೌಂಡೇಶನ್ನ ಗಂಗರಾಜು ಬಿ, ಜಿ.ಆರ್.ನಾರಾಯಣ್ ಸ್ವಾಮಿ, ಕಿರಣ್, ಶ್ರೀನಿವಾಸ್, ಮಂಜುನಾಥ್ ಹಾಗೂ ನೂರಾರು ವಿದ್ಯಾರ್ಥಿನಿಯರು ಹಾಜರಿದ್ದರು.