ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭೀರಪ್ಪನಹಳ್ಳಿ ಅರಣ್ಯ ಪ್ರದೇಶದಲ್ಲಿ ಪ್ರೇಮಿಗಳಿಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿಂತಾಮಣಿ ತಾಲೂಕಿನ ಸೀತರಾಮಪುರ ಗ್ರಾಮದವರಾದ ನವೀನ್(22) ಮತ್ತು 15 ವರ್ಷದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳು.
ಮೃತ ನವೀನ್ ಚಾಲಕ ವೃತ್ತಿ ಮಾಡುತ್ತಿದ್ದು, ಬಾಲಕಿ ಸರಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಒಂದೇ ಗ್ರಾಮ, ಒಂದೇ ಸಮುದಾಯದವರಾದ ಇಬ್ಬರು ಪರಸ್ಪರ ಪ್ರೀತಿಯಲ್ಲಿದ್ದರು.
ವಿಷಯ ತಿಳಿದ ಬಾಲಕಿಯ ಪೋಷಕರು ಪ್ರೀತಿಯನ್ನು ನಿರಾಕರಿಸಿದ್ದರು. ಯುವಕನ ವಿರುದ್ಧ ಇದೇ ಮಾರ್ಚ್ 30ರಂದು ಶಿಡ್ಲಘಟ್ಟ ತಾಲೂಕಿನ ಬಟ್ಲಹಳ್ಳಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಕೂಡಲೇ ಆರೋಪಿ ನವೀನ್ ಪೊಲೀಸರ ಕೈಗೆ ಸಿಗದೆ ಕೆಲ ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದ. ನಂತರ ಭಟ್ಲಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಗೌನಿಪಲ್ಲಿ ಗ್ರಾಮದಲ್ಲಿದ್ದ ನವೀನ್ನನ್ನು ಹಿಡಿದು ಜೈಲಿಗೆ ಕಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಸರಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಬಿಸಿಯೂಟ; ಸಂದೀಪ್ ರೆಡ್ಡಿ
ಇದೆಲ್ಲ ಬೆಳವಣಿಗೆಗಳ ಬಳಿಕ ಮತ್ತೆ ಭೇಟಿಯಾಗಿದ್ದ ಪ್ರೇಮಿಗಳು, ಸೆ.13ರ ಸಂಜೆ ಭೀರಪ್ಪನಹಳ್ಳಿ ಅರಣ್ಯ ಪ್ರದೇಶಕ್ಕೆ ತೆರಳಿ ಒಂದೇ ಕುಣಿಕೆಗೆ ಇಬ್ಬರೂ ಕೊರಳೊಡ್ಡಿದ್ದಾರೆ. ಭಟ್ಲಹಳ್ಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.