ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಿರಿಯ ವೈದ್ಯರು ಮತ್ತು ಸರ್ಕಾರದ ನಡುವೆ ಸೃಷ್ಟಿಯಾಗಿದ್ದ ಬಿಕ್ಕಟ್ಟು ಶಮನವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕಿರಿಯ ವೈದ್ಯರ ಶೇ 99 ರಷ್ಟು ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಅವರು ಭರವಸೆ ಕೊಟ್ಟಿದ್ದಾರೆ.
ಕೋಲ್ಕತ್ತ ಪೊಲೀಸ್ ಆಯುಕ್ತ ವಿನೀತ್ ಗೋಯಲ್, ಆರೋಗ್ಯ ಸೇವೆಗಳ ನಿರ್ದೇಶಕ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರನ್ನು ವಜಾಗೊಳಿಸುವು ದಾಗಿ ಮಮತಾ ಸೋಮವಾರ ರಾತ್ರಿಯೇ ಘೋಷಿಸಿದ್ದಾರೆ.
ಕಿರಿಯ ವೈದ್ಯರ ಜತೆ ತಮ್ಮ ನಿವಾಸ ದಲ್ಲಿ ನಡೆಸಿದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮಾತುಕತೆಗಳು ಫಲಿಸಿವೆ’ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ವೈದ್ಯರ ನಿಯೋಗವು ‘ತಮ್ಮ ಬೇಡಿಕೆಗಳನ್ನು ಈಡೇರಿಸಲು ಮಮತಾ ಒಪ್ಪಿಕೊಂಡಿದ್ದಾರೆ. ಆದರೆ, ಅದು ಕಾರ್ಯರೂಪಕ್ಕೆ ಬರುವವರೆಗೂ ಮುಷ್ಕರ ಮುಂದುವರಿಯಲಿದೆ’ ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಮತಾ ರಾಜೀನಾಮೆ – ಭಾವನಾತ್ಮಕ ರಾಜಕೀಯವೇಕೆ?
ಬ್ಯಾನರ್ಜಿ ಅವರ ಕಾಳಿಘಾಟ್ ನಿವಾಸದಲ್ಲಿ ಮೊದಲ ಸುತ್ತಿನ ಮಾತುಕತೆ ಸುಮಾರು ಎರಡು ಗಂಟೆ ನಡೆಯಿತು. 35 ಮಂದಿ ಕಿರಿಯ ವೈದ್ಯರ ನಿಯೋಗವು ಸಿ.ಎಂ ನಿವಾಸಕ್ಕೆ ಸಂಜೆ 6:20ಕ್ಕೆ ಆಗಮಿಸಿತು. ಸಂಜೆ 6:50ರ ಸುಮಾರಿಗೆ ಪ್ರಾರಂಭವಾದ ನಿರ್ಣಾಯಕ ಮಾತುಕತೆಗಳ ಸಭೆಯು ರಾತ್ರಿ 9 ಗಂಟೆ ಸುಮಾರಿಗೆ ಕೊನೆಗೊಂಡಿತು. ಆದರೆ, ಸಭೆಯಲ್ಲಿ ಚರ್ಚೆ ಮಾಡಿದ್ದನ್ನು ಅಕ್ಷರರೂಪದಲ್ಲಿ ದಾಖಲಿಸಿ, ಆ ವಿವರಗಳನ್ನು ಎರಡೂ ಕಡೆಯವರು ಪರಿಶೀಲಿಸಿ, ಸಹಿ ಮಾಡಿ, ಪ್ರತಿಗಳನ್ನು ಹಂಚಿಕೊಳ್ಳಲು ಮತ್ತೆ ಎರಡೂವರೆ ತಾಸು ಹಿಡಿಯಿತು. ವೈದ್ಯರ ನಿಯೋಗ ಸಭೆ ಮುಗಿಸಿ, ಬ್ಯಾನರ್ಜಿ ಅವರ ನಿವಾಸದಿಂದ ಹೊರಟಾಗ ರಾತ್ರಿ 11:30 ಆಗಿತ್ತು.
ಕೆಲಸ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ವೈದ್ಯರ ಜೊತೆ ಮಾತುಕತೆ ನಡೆಸಲು ಮಮತಾ ನೇತೃತ್ವದ ಸರ್ಕಾರವು ಈವರೆಗೆ ನಡೆಸಿದ್ದ ಹಲವು ಯತ್ನಗಳು ಫಲ ನೀಡಿರಲಿಲ್ಲ. ವೈದ್ಯ ವಿದ್ಯಾರ್ಥಿನಿಯ ಹತ್ಯೆಯ ವಿಚಾರವಾಗಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆಯು ಮಂಗಳವಾರ ನಡೆಯುವ ನಿರೀಕ್ಷೆ ಇದೆ. ಈ ವಿಚಾರಣೆಗೆ ಒಂದು ದಿನ ಮೊದಲು ಸಭೆ ನಡೆದಿದೆ.
ಮಮತಾ ಜೊತೆಗಿನ ಸಭೆಯನ್ನು ನೇರಪ್ರಸಾರ ಮಾಡಬೇಕು ಹಾಗೂ ತಾವು ಕರೆಸುವ ಛಾಯಾಗ್ರಾಹಕರ ಮೂಲಕ ಸಭೆಯ ವಿಡಿಯೊ ಚಿತ್ರೀಕರಣ ನಡೆಸಲು ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ವೈದ್ಯರು ಇರಿಸಿದ್ದ ಕಾರಣ, ಸಭೆ ಆಯೋಜಿಸಲು ಈ ಹಿಂದೆ ನಡೆಸಿದ್ದ ಯತ್ನಗಳು ಫಲ ಕೊಟ್ಟಿರಲಿಲ್ಲ.
ಆದರೆ, ಸಭೆಯಲ್ಲಿ ಏನಾಯಿತು ಎಂಬುದನ್ನು ಅಕ್ಷರ ರೂಪದಲ್ಲಿ ದಾಖಲಿಸಿಕೊಳ್ಳಬಹುದು ಎಂಬ ಪ್ರಸ್ತಾವಕ್ಕೆ ವೈದ್ಯರು ಹಾಗೂ ಸರ್ಕಾರದ ಪ್ರತಿನಿಧಿಗಳು ಒಪ್ಪಿಕೊಂಡ ಕಾರಣಕ್ಕೆ ಸೋಮವಾರದ ಸಭೆ ಸಾಧ್ಯವಾಯಿತು.
ಕೆಲಸವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದನ್ನು ಸೆಪ್ಟೆಂಬರ್ 10ರ ಸಂಜೆ 5ಕ್ಕೆ ಮೊದಲು ಕೊನೆಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಕಿರಿಯ ವೈದ್ಯರು ಕೋರ್ಟ್ ಮಾತಿಗೆ ಓಗೊಟ್ಟಿರಲಿಲ್ಲ. ಸೆಪ್ಟೆಂಬರ್ 12ರಂದು ಸರ್ಕಾರದ ಜೊತೆ ಮಾತುಕತೆಗೆ ವೈದ್ಯರು ಬಂದಿದ್ದರಾದರೂ, ಸಭೆಯ ನೇರಪ್ರಸಾರಕ್ಕೆ ಸರ್ಕಾರ ಒಪ್ಪದ ಕಾರಣಕ್ಕೆ ಸಭೆ ಸಾಧ್ಯವಾಗಿರಲಿಲ್ಲ.
