ಕ್ಷೌರ ಮಾಡಲು ನಿರಾಕರಿಸಿ ದಲಿತ ಯುವಕನ ಕೊಲೆ ಹಾಗೂ ಅಂತರ್ಜಾತಿ ಯುವತಿಯ ವಿಷವುಣಿಸಿ ಹತ್ಯೆ ಮತ್ತು ಇತ್ತೀಚಿಗೆ ಕೊಪ್ಪಳದಲ್ಲಿ ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ‘ಸಂಗನಹಾಲ ಚಲೋ’ ಮೊದಲನೆ ದಿನದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಕೊಪ್ಪಳ ಜಿಲ್ಲಾಡಳಿತ ಭವನದಿಂದ ಸಮಾನ ಬದುಕಿನತ್ತ ಅರಿವಿನ ಜಾಥಾ ಪ್ರಾರಂಭಗೊಂಡು ಅಶೋಕ ಸರ್ಕಲ್ , ಬಸ್ ಸ್ಟ್ಯಾಂಡ್ , ದದಗಲ್ ಮೂಲಕ ಮೆರವಣಿಗೆ ಬಾಣಾವರ ಗ್ರಾಮದಲ್ಲಿ ಮೊದಲನೇ ದಿನ ಅಂತಿಮಗೊಂಡಿತು.
ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಮಾತನಾಡಿದ ಹೋರಾಟಗಾರ ಅಂಬಣ್ಣ ಅರೋಲಿಕರ್, “ಈ ಹಿಂದೆ ಸಹ ಇಡೀ ರಾಜ್ಯಾದ್ಯಂತ ವಿವಿಧ ಕಡೆ ದಲಿತರ ಮೇಲೆ ದೌರ್ಜನಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಆಯಾ ಗ್ರಾಮಕ್ಕೆ ಭೇಟಿ ನೀಡಿ, ಇದರ ವಿರುದ್ಧ ಕಟ್ಟುನಿಟ್ಟಾದ ಕ್ರಮವನ್ನು ಕೈಗೊಳ್ಳುತ್ತಿದ್ದರು. ಘಟನೆಗಳಿಗೆ ಕಾರಣಕರ್ತರಾದವರ ವಿರುದ್ಧ ಸಾಕಷ್ಟು ಕಾನೂನು ಕ್ರಮ ಜರುಗಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿ ಕಟ್ಟುನಿಟ್ಟಾಗಿ ಕಾನೂನು ಕ್ರಮ ಜರಗಿಸುವ ಮತ್ತು ಕಾನೂನಿನ ಕುರಿತು ಭಯ ಇರುವಂತೆ ನೋಡಿಕೊಳ್ಳುವ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗಿದೆ” ಎಂದರು.
ಈ ಕಾರಣಕ್ಕಾಗಿಯೇ ಈಗಲೂ ಸಹ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ದಲಿತರ ಮೇಲೆ ದೌರ್ಜನ್ಯಗಳು ಈ ಹಿಂದಿಗಿಂತ ಈ ಕಾಲದಲ್ಲಿ ಹೆಚ್ಚಾಗಿವೆ. ಇದನ್ನು ಕಾನೂನಿನ ಮೂಲಕವೇ ಕಟ್ಟುನಿಟ್ಟಾಗಿ ತಡೆಗಟ್ಟಬೇಕಿದೆ. ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸುವ ಕಟ್ಟುನಿಟ್ಟಾದ ಅಧಿಕಾರಿಗಳ ಅವಶ್ಯಕತೆ ಇದೆ. ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೆ, ಕಾನೂನು ಕ್ರಮ ಕೈಗೊಂಡರೆ ಖಂಡಿತವಾಗಿಯೂ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ, “ಈ ರೀತಿಯ ಘಟನೆಗಳು ಸಂಭವಿಸಿದಾಗ ಜಿಲ್ಲಾಮಟ್ಟದ ಅಧಿಕಾರಿಗಳು ಆ ಗ್ರಾಮಕ್ಕೆ ತೆರಳಿ ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕು ಹಾಗೂ ಅದಕ್ಕೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಾದ ಕ್ರಮವನ್ನು ಜರುಗಿಸಬೇಕು. ಮತ್ತೊಮ್ಮೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಹೀಗಾದಲ್ಲಿ ಮಾತ್ರ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತವೆ. ಇಲ್ಲವಾದಲ್ಲಿ ಇದು ನಿರಂತರವಾಗಿ ನಡೆಯುತ್ತಲೇ ಇರುತ್ತವೆ ಎಂದು ಹೇಳಿದರು.
ಮೊದಲ ದಿನದ ಕಾಲ್ನಡಿಗೆ ಜಾಥಾವು ಜಿಲ್ಲಾಧಿಕಾರಿಗಳ ಕಚೇರಿಯಿಂದ ತೆರಳಿ ಭಾನಾಪುರವನ್ನು ತಲುಪಿತು. ಬುಧವಾರ ಬೆಳಗ್ಗೆಯಿಂದ ಸಂಗನಹಾಲ ಗ್ರಾಮದವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ.
ಇದನ್ನು ಓದಿದ್ದೀರಾ? ಅನುಮತಿ ಇಲ್ಲದೆ ಬುಲ್ದೋಝರ್ ಕಾರ್ಯಾಚರಣೆಗೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಜಾಥಾದಲ್ಲಿ ಸಂಗನಹಾಲ ಚಲೋ ಸಂಚಾಲಕ ಬಸವರಾಜ್ ಸೂಳಿಬಾವಿ, ಹಿರಿಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಶ್ರೀಪಾದ ಭಟ್, ಶುಕ್ರರಾಜ್, ಟಿ ರತ್ನಾಕರ, ಧರ್ಮರಾಜ ಗೋನಾಳ, ಕರಿಯಪ್ಪ ಗುಡಿಮನಿ, ಕೆವಿಎಸ್ ದುರುಗೇಶ್, ಮುತ್ತು ಬಿಳಿಯಲಿ, ಶಶಿಕಲಾ ಮಠ, ಸಲೀಮಾ ಜಾನ, ಜನಾರ್ದನ, ಗೌರಿ ಗೋನಾಳ, ಮರಿಯಮ್ಮ, ಆನಂದ ಶಿಂಗಾಡಿ, ಖಾಸೀಮ್ ಸರ್ದಾರ, ನಿಂಗೂ ಬೇನೇಕಲ್, ಇಮಾಮ ಸಾಬ್, ನಜೀರ್ ಸಾಬ್ ಮೂಲಿಮನಿ ಇನ್ನಿತರರು ಹಾಜರಿದ್ದರು.
