ಜಾತಿಯ ಗೋಡೆಗಳನ್ನು ನಮ್ಮೊಳಗೇ ಕಟ್ಟುವ ಬದಲು ಸೇತುವೆಯನ್ನು ಕಟ್ಟುವ ತುರ್ತಾಗಿ ಕೆಲಸ ಆಗಬೇಕಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಕೊಪ್ಪಳನಿಂಗಪ್ಪ, ದಲಿತ ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟದ ವತಿಯಿಂದ ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ಹಾಗೂ ಸಂಗನಹಾಲದ ದಲಿತ ಯುವಕ ಯಮನಪ್ಪನ ಕೊಲೆ ಖಂಡಿಸಿ, ಕೊಪ್ಪಳದಿಂದ ಸಂಗನಹಾಲ ಗ್ರಾಮಕ್ಕೆ ಜಾಥಾ ನಡೆಸಿ “ಸಮಾನ ಬದುಕಿನತ್ತ ಅರಿವಿನ ಜಾಥಾ ಸೌಹಾರ್ದ ಸಮಾವೇಶ”ದಲ್ಲಿ ಅವರು ಮಾತನಾಡಿದರು.
ಕೇವಲ ಮಾತಿನಲ್ಲಿ ತತ್ವಗಳನ್ನು ಹೇಳಿದರೆ ಸಾಲದು, ಕೃತಿಗಿಳಿಯಬೇಕು. ಬಸವಣ್ಣ ಎಲ್ಲರನ್ನೂ ನಮ್ಮವರೆಂದು ಹೇಳಿದರು.ಆದರೆ ನಮ್ಮವರೆಂದು ಹೇಳಿಕೊಳ್ಳಲು ಆಗದೆ ಇರುವಂತ ಸ್ಥಿತಿ ನಿರ್ಮಾಣವಾಗಿದೆ. ಜಾತಿಯ ಗೋಡೆಗಳನ್ನು ನಮ್ಮೊಳಗೇ ಕಟ್ಟುವ ಬದಲು ಸೇತುವೆಯನ್ನು ಕಟ್ಟುವ ತುರ್ತಾಗಿ ಕೆಲಸ ಆಗಬೇಕಿದೆ. ಆ ಸೇತುವೆಯನ್ನು ಕಟ್ಟಿದಾಗ ಎಲ್ಲರೂ ನೆಮ್ಮದಿಯಿಂದ ಬದುಕಲಿಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಹುಟ್ಟುವಾಗ ಇಂಥದ್ದೇ ಜಾತಿಯಲ್ಲಿ ಹುಟ್ಟಬೇಕೆಂದು ಯಾರೂ ಕೂಡ ಅರ್ಜಿ ಹಾಕಿಕೊಂಡು ಈ ಜಗತ್ತಿಗೆ ಬಂದಿಲ್ಲ. ಹುಟ್ಟಿದ ನಂತರ ನಮಗೊಂದು ಜಾತಿ ಅಂಟಿಕೊಳ್ಳುತ್ತದೆ. ಆದರೆ ಮನುಷ್ಯ ತನ್ನ ನೀತಿಯ ಮೂಲಕ ತನಗೆ ಅಂಟಿದ ಜಾತಿಯನ್ನು ಹೊದೆಡೋಡಿಸಲಿಕ್ಕೆ ಸಾಧ್ಯವಾಗುತ್ತದೆ ಎಂದರು.

ನಮ್ಮ ಹಿಂದಿನ ಅನೇಕ ಶರಣರು, ಸಂತರು, ಸಾಧುಗಳನ್ನು ನೋಡಿದಾಗ ಅವರೆಲ್ಲ ಅತ್ಯಂತ ಕೆಳ ವರ್ಗದ ಜಾತಿಯಲ್ಲಿ ಹುಟ್ಟಿದವರು. ಆದರೆ ತಮ್ಮ ಸಾಧನೆಗಳ ಮೂಲಕ ಅತ್ಯಂತ ಶ್ರೇಷ್ಠ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು. ಎಲ್ಲರ ಹುಟ್ಟಿನ ಗುಟ್ಟು ಒಂದೇ ರೀತಿ ಆಗಿರುವಾಗ, ಯಾಕೆ ಒಬ್ಬರನ್ನು ಕೀಳು, ಮತ್ತೊಬ್ಬರನ್ನು ಮೇಲು ಎಂದು ಹೇಳುವಂತಹದ್ದು. ಮೇಲು ಕೀಳು ಆಗಬೇಕಾಗಿದ್ದು ಅವರವರ ನಡವಳಿಕೆಯಿಂದ, ಬದುಕಿನ ವಿಧಾನದಿಂದ, ಶ್ರೇಷ್ಠ ಜೀವನವನ್ನು ಸಾಗಿಸಿದರೆ ಅವನು ಮೇಲಾಗುತ್ತಾನೆ ಎಂದು ಹೇಳಿದರು.
ನಾವು ವಿಚಾರವಂತರಾಗಬೇಕು, ನೀತಿವಂತವರಾಗಬೇಕು, ವಿವೇಕಿಗಳಾಗಬೇಕು. ಯಾವಾಗಲೂ ಕೂಡ ಸೌಮ್ಯತೆಯಿಂದ, ಪ್ರೀತಿಯಿಂದ ಸಾಧನೆ ಮಾಡಲು ಸಾಧ್ಯ. ದ್ವೇಷ, ಅಸೂಯೆ, ಮತ್ಸರದಿಂದ ಮತ್ತಷ್ಟು ಮತ್ಸರವೇ ಹೆಚ್ಚಾಗುತ್ತದೆ ಹೊರತು ಬೇರೇನೂ ಸಾಧಿಸಲಾಗುವುದಿಲ್ಲ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಂಘಟಕರಾದ ಬಸವರಾಜ್ ಸೂಳಿಬಾವಿ ಮಾತನಾಡಿ, ದೇವರ ಹೆಸರಿನಲ್ಲಿ ಶೋಷಣೆಗಳು, ದೌರ್ಜನ್ಯಗಳು ನಡೆಯುತ್ತಿವೆ. ನಮ್ಮೊಳಗೇ ಇರುವ ಇಂತಹವುಗಳನ್ನು ಬಿಟ್ಟು ಬಸವಣ್ಣ ಹೇಳಿರುವುದು, ಅರಿವೇ ದೇವರು ಎಂದು. ಊರಲ್ಲಿರುವ ಮನುಷ್ಯನಲ್ಲಿ ಗೋಡೆಗಳನ್ನು ಕಟ್ಟಿದ್ದಾರೆ. ಮನುಷ್ಯನಲ್ಲಿ ಭೇದ ಭಾವವನ್ನು ಒಡೆಯುವ ಕೆಲಸವಾಗುತ್ತಿದೆ. ಈ ಕೆಲಸವನ್ನು ಒಡೆತನದಲ್ಲಿ ಇರುವ ವರ್ಗ ಮಾಡಿದೆ. ಒಬ್ಬರಿಗಿಂತ ಒಬ್ಬರನ್ನು ಕೀಳಾಗಿ ಕಾಣುವ ಸಿದ್ಧಾಂತವೇ ವೈದಿಕ ಸಿದ್ಧಾಂತ. ಇದರ ವಿರುದ್ದ ಎದ್ದು ನಿಲ್ಲಬೇಕಿದೆ. ಸತ್ಯವನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಊರಿನ ನಮ್ಮ ಮನಸ್ಸಿನ ಗೋಡೆಗಳನ್ನು ಕೆಡವಬೇಕು. ಬಸವಣ್ಣ ವಿಚಾರಗಳನ್ನು ನಮ್ಮೊಳಗೇ ಇಳಿಸಿಕೊಳ್ಳಬೇಕು ಎಂದರು.
ನಾವು ಸಂಗನಹಾಲ ಊರಿಗೆ ಯಾರನ್ನೋ ಬೆಟ್ಟು ಮಾಡಿ ತೋರಿಸಲಿಕ್ಕೆ ಬಂದಿರುವುದಿಲ್ಲ. ನಮ್ಮೊಳಗಿನ ಬೆಳಕನ್ನು ತೆರೆಯಲಿಕ್ಕೆ ಬಂದಿದ್ದೇವೆ ಎಂದು ಹೇಳಿದ ಅವರು, ಕೊಪ್ಪಳದಲ್ಲಿ ವರ್ಷಕ್ಕೆ 64, ಅಂದರೆ ವಾರಕ್ಕೆ ಒಂದರಂತೆ ದೌರ್ಜನ್ಯಗಳು ನಡೆದಿರುವುದು ದಾಖಲಾದ ಪ್ರಕರಣಗಳು. ಜಿಲ್ಲಾಡಳಿತ ಏನು ಮಾಡುತ್ತಿದೆ ಎಂದು ಪ್ರಶ್ನೆ ಕೇಳುವುದರ ಮೂಲಕ ದೌರ್ಜನ್ಯಗಳನ್ನು ತಡೆಗಟ್ಟಬೇಕಿದೆ ಎಂದು ಹೇಳಿದರು. ಬಳಿಕ ಸಮಾವೇಶದಲ್ಲಿ ಹಕ್ಕೊತ್ತಾಯಗಳನ್ನು ಮಂಡಿಸಿದರು.
ಸಮಾವೇಶದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಪಿರ್ ಬಾಷಾ, ಟಿ ರತ್ನಾಕರ್, ಚಂದ್ರಶೇಖರ್ ಗೊರಬಾಳ, ಅನಿಲ್ ಹೊಸಮನಿ, ಆನಂದ ಶಿಂಗಾಡಿ, ಶ್ರೀಧರ್ ಭಟ್, ಡಿ ಎಚ್ ಪೂಜಾರ್, ಬಸವಲಿಂಗಪ್ಪ ದಾವಣಗೆರೆ, ಇಂದಿರಾ ಕೃಷ್ಣಪ್ಪ, ಅನಗವಾಡಿ ನಿಂಗಪ್ಪ ಮತೀನ್ ಕುಮಾರ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಹೋರಾಟಗಾರರು ಉಪಸ್ಥಿತರಿದ್ದರು.

SC ST ಅಂತ ಸರ್ಕಾರದಿಂದ ಬರುವ ಸವಲತ್ತು ಯಾಕೆ ಅಂತ ಕೇವಲ ಬಾಸಣದಲ್ಲಿ ಮಾತ್ರ ಇದೆ ಜಾತಿ ಬೇಡ ಮಾಡಬೇಡಿ ಅಂತ 🙏🏿🙏🏿