ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ)ಯಡಿ ಕೂಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ತಾಲೂಕಿನ ಮೆಳ್ಳಿಗೇರಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಮಿಕರು, “ಹಲವಾರು ದಿನಗಳಿಂದ ಕೂಲಿ ಕೆಲಸಕ್ಕಾಗಿ ಗ್ರಾಮ ಪಂಚಾಯಿತಿಗೆ ಎಡತಾಕುತ್ತಿದ್ದರೂ ಅಧಿಕಾರಿಗಳು ಕೆಲಸ ನೀಡುತ್ತಿಲ್ಲ. ಸರಿಯಾದ ರೀತಿಯಲ್ಲಿ ಜಾಬ್ ಕಾರ್ಡ್ ನೀಡುತ್ತಿಲ್ಲ. ಕೂಡಲೇ ನಮಗೆ ಕೂಲಿ ಕೆಲಸ ನೀಡಬೇಕು” ಎಂದು ಒತ್ತಾಯಿಸಿದರು.
“ದಿನಗೂಲಿ ಸಿಗದೆ ಬೇರೆ ಊರಿಗೆ ಕೆಲಸ ಹರಸಿ ಹೋಗಬೇಕಾದ ಪರಿಸ್ಥಿತಿಯಿದೆ. ಇದ್ದ ಊರಿನಲ್ಲಿಯೇ ಕೆಲಸ ಮಾಡಬೇಕೆಂದರೆ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗದವರು ಮನರೇಗಾ ಕೆಲಸ ನೀಡುತ್ತಿಲ್ಲ. ಇನ್ನುಮುಂದೆ ಕೂಲಿ ಕೆಲಸ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದರು.
ಗ್ರಾಮಸ್ಥರು ಕೆಲಸ ಕೇಳಿಕೊಂಡು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆಗೆ ಕುಳಿತ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ಪಂಚಾಯಿತಿ ಇಒ ಪ್ರತಿಭಟನೆ ನೇತೃತ್ವ ಹೊತ್ತಿದ್ದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕ ಶಂಕರ ಅವರೊಂದಿಗೆ ಏಕವಚನದಲ್ಲಿ ಏರುಧ್ವನಿಯಲ್ಲಿ ಮಾತು ಬೆಳೆಸಿದರು. ಇದೇ ವೇಳೆ ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಮಹಿಳೆಯೋರ್ವಳಿಗೆ ವಿಡಿಯೋ ಮಾಡದಂತೆ ತಾಕೀತು ಮಾಡಿರುವುದು ಕಂಡುಬಂದಿದೆ.
ಇಒ ಉಮೇಶ ಸಿದ್ನಾಳ ನಡೆಗೆ ಕೋಪಗೊಂಡ ಗ್ರಾಮಸ್ಥರು, “ನೀವು ಬಡವರಿಗೆ ಕೆಲಸ ಕೊಡಿಸಲು ಬಂದಿದ್ದೀರೋ? ಅಥವಾ ನಮ್ಮನ್ನು ಹೆದರಿಸಲು ಬಂದಿದ್ದೀರೋ?” ಎಂದು ಆಕ್ರೋಶಗೊಂಡ ಕಾರ್ಮಿಕರು, ಮೊದಲು ಕೆಲಸ ನೀಡುವಂತೆ ಪಟ್ಟುಹಿಡಿದರು. ಆಗ ಗ್ರಾಮಸ್ಥರೊಂದಿಗೆ ಮಾತನಾಡಿದ ಇಒ ಶೀಘ್ರದಲ್ಲಿಯೇ ಗ್ರಾಮಸ್ಥರಿಗೆ ಕೂಲಿ ಕೆಲಸ ನೀಡುವುದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಎಸ್ಎಫ್ಐ 16ನೇ ರಾಜ್ಯ ಸಮ್ಮೇಳನ: ಪೋಸ್ಟರ್ ಬಿಡುಗಡೆ
ಗ್ರಾಮದ ಜನತೆ ಕೆಲಸಕ್ಕಾಗಿ ಒತ್ತಾಯಿಸಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುತ್ತಿದ್ದರೆ ಅಲ್ಲಿನ ಪಿಡಿಒ 12 ಗಂಟೆಯಾದರೂ ಕಚೇರಿಗೆ ಆಗಮಿಸಿರಲಿಲ್ಲ. ಈ ಬಗ್ಗೆ ಅಸಮಾಧಾನ ಹೊರಹಾಕಿದ ಪ್ರತಿಭಟನಾಕಾರರು ಅಭಿವೃದ್ಧಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸುವುದಿಲ್ಲವೆಂದು ದೂರಿದರು.
ಮೆಳ್ಳಿಗೇರಿ ಗ್ರಾಮದಲ್ಲಿ ಸದ್ಯ ಜಾಬ್ ಕಾರ್ಡ್ ಇರುವ ಜನರಿಗೆ ಶೀಘ್ರವೇ ಉದ್ಯೋಗ ನೀಡಲಾಗುವುದು. ಜಾಬ್ ಕಾರ್ಡ್ ಇಲ್ಲದಿರುವ ಜನರನ್ನು ಗುರುತಿಸಿ ಅವರಿಗೆ ಜಾಬ್ ಕಾರ್ಡ್ ವ್ಯವಸ್ಥೆ ಮಾಡಿ ಆ ನಂತರದಲ್ಲಿ ಕೆಲಸ ನೀಡಲಾಗುವುದು.
ಈರಮ್ಮ, ಶ್ರೀದೇವಿ, ಸಿದ್ದವ್ವ, ಗೀತಾ, ರಾಧಿಕಾ, ಸಿದ್ದಪ್ಪ, ಶಿವು, ಸವಿತಾ, ಶಿಲ್ಪಾ, ರವಿ, ಬಸವರಾಜು ಗ್ರಾಕೂಸ ಜಿಲ್ಲಾ ಸಂಚಾಲಕ ಶಂಕರ ಸೇರಿದಂತೆ ಇತರರು ಇದ್ದರು.