ರಾಜ್ಯದಲ್ಲಿ ಹಾಗೂ ದೇಶದಲ್ಲಿ ಸಾರ್ವಜನಿಕರು ಸಾವಿರಾರು ಕೋಟಿ ರೂಪಾಯಿ ಚಿಟ್ ಫಂಡ್ ಕಂಪೆನಿಗಳಲ್ಲಿ ಹೂಡಿರುವ ಹಣವನ್ನು ಸಾರ್ವಜನಿಕರಿಗೆ ಮರಳಿಸಲು ಹಾಗೂ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಂಡಿರುವ ಹೋರಾಟಕ್ಕೆ ದಲಿತ ಸಮರ ಸೇನೆ-ಕರ್ನಾಟಕ ವಿಜಯಪುರ ಜಿಲ್ಲಾ ಘಟಕ ಬೆಂಬಲ ನೀಡಿದೆ.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೇಣ್ಣೂರ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ, ಸಂಘಟನೆಯ ಜಿಲ್ಲಾಧ್ಯಕ್ಷ ಗೌಡಪ್ಪ ಬಸಪ್ಪ ಬಡಿಗೇರ ಮಾತನಾಡಿ, “ಸತತ 22 ದಿನಗಳಿಂದಲೂ ಹೆಚ್ಚು ಅವಧಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವ ಠೇವಣಿದಾರರ, ಅನ್ಯಾಯಕ್ಕೂಳಾಗದವರ ಸಮಸ್ಯೆಯನ್ನು ಶೀಘ್ರವೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಗೆಹರಿಸಬೇಕು. ಇಲ್ಲದಿದ್ದರೆ, ರಾಜ್ಯವ್ಯಾಪಿ ಬಂದ್ ಹೋರಾಟಕ್ಕೆ ಕರೆ ನೀಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಇಡೀ ರಾಜ್ಯ ಹಾಗೂ ದೇಶದಲ್ಲಿ ಸರ್ಕಾರದ ರದ್ದುಗೊಳಿಸಿರುವ 185 ಚಿಟ್ ಫಂಡ್ ಕಂಪೆನಿಗಳಲ್ಲಿ ಹಣ ಹೂಡಿರುವ ಸಾರ್ವಜನಿಕರ ಹಣವನ್ನು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019(BUDS Act-2019)ರ ಕಾನೂನಿನ ಅಡಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿಕೊಂಡು ಸಾರ್ವಜನಿಕರ ಹಣ ಹಿಂದಿರುಗಿಸಗಬೇಕು” ಎಂದು ಒತ್ತಾಯಿಸಿದರು.
“ಅಗ್ರಿಗೋಲ್ಡ್ ಪಿಎಸಿಎಲ್ ಸೇರಿದಂತೆ ಇನ್ನಿತರ 185 ಚಿಟ್ ಫಂಡ್ ಕಂಪೆನಿಗಳಲ್ಲಿ ಅಂದಾಜು 350 ಕೋಟಿ ರೂಪಾಯಿಗಳ ಹಣವನ್ನು ವಿಜಯಪುರದಿಂದ ಹೂಡಿಕೆ ಮಾಡಿರುವ ಸಾರ್ವಜನಿಕರು ರಾಜ್ಯವ್ಯಾಪಿ ಸಾವಿರಾರು ಕೋಟಿ ಹಣ ಹೂಡಿಕೆ ಮಾಡಿ ಕಳೆದ 10 ವರ್ಷಗಳಿಂದ ನ್ಯಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುತ್ತ ಬಂದಿರುತ್ತಾರೆ. ಆದರೆ ಈವರೆಗೆ ಸರ್ಕಾರದ ಯಾವುದೇ ಅಧಿಕಾರಿಗಳು ಕಿಂಚಿತ್ತು ಕಾಳಜಿ ಮಾಡದೇ ಇರುವುದು ಹೂಡಿಕೆದಾರರಿಗೆ ಚಿಂತೆ ಮಾಡುವಂತೆ ಮಾಡಿದೆ. ಹೂಡಿಕೆದಾರರು ಏಜೆಂಟ್ಗಳಿಗೆ ಹಣ ಕೊಡಿಸಿ ಎಂದು ನಿತ್ಯ ಕಿರಿಕಿರಿ ಮಾಡುವುದರಿಂದ ಮನನೊಂದ ಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ಕೂಡ ಕಂಡುಬಂದಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಮೈಕ್ರೋ ಫೈನಾನ್ಸ್ಗಳ ಸಾಲದ ಸುಳಿಯಲ್ಲಿ ಸಿಲುಕಿದ ಮಹಿಳೆಯರು: ಸಂಕಷ್ಟದಿಂದ ಹೊರಬರಲು ಪರದಾಟ!
“ಸರ್ಕಾರ ಕೂಡಲೇ ಚಿಟ್ ಫಂಡ್ ಕಂಪೆನಿಗಳ ಆಸ್ತಿ ಹರಾಜು ಮಾಡಿ ಹಣ ಕೊಡಿಸಬೇಕು. ಇದು ವಿಳಂಬವಾದರೆ ರಾಜ್ಯವ್ಯಾಪಿ ಕರ್ನಾಟಕ ಬಂದ್ ಕರೆ ಕೊಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರುಗಳಾದ ಶಿವು ಪತ್ರಕರ್ತರು, ಅಮೃತ್ ಮಾವಿನಹಳ್ಳಿ, ಸುಖದೇವ ಚಲವಾದಿ, ಸೋಮನಿಂಗ ರಣದೇವಿ, ಎಂ ಆರ್ ದೊಡ್ಡಮನಿ, ಪರಶುರಾಮ ಘರಸಂಗಿ, ಸಂಗಮೇಶ ಸಿಂದಗಿರಿ, ಸಚಿನ್ ಭಜಂತ್ರಿ, ಮೈಬೂಬ ಕಾಳಗಿ, ಭಜರಂಗಿ ನ್ಯೂನೆ ಹಾಗೂ ಅಪಾರ ಸಂಖ್ಯೆಯಲ್ಲಿ ಚಿಟ್ ಫಂಡ್ ಕಂಪೆನಿಗಳಿಂದ ಅನ್ಯಾಯಕ್ಕೊಳಗಾದ ಸಂತ್ರಸ್ತರು ಇದ್ದರು.