ಪಠ್ಯಾಧಾರಿತ ನಾಟಕಗಳು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಿವೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಪಿಯುಸಿ ಪಠ್ಯಾಧಾರಿತ ಬೋಳೇಶಂಕರ ಮತ್ತು ಕೃಷ್ಣೆಗೌಡರ ಆನೆ ನಾಟಕ ಪ್ರದರ್ಶನದ ಸಾನ್ನಿಧ್ಯ ವಹಿಸಿ ಅವರು
ಮಾತನಾಡಿದರು.
ʼನಾಲ್ಕು ಗೋಡೆಯ ಕೊಠಡಿ ಒಳಗೆ ಒಬ್ಬ ಶಿಕ್ಷಕ ಪಾಠ ಮಾಡುವುದಕ್ಕಿಂತ, ಆ ಪಾಠವನ್ನು ನಾಟಕ ಚಟುವಟಿಕೆಯ ಮೂಲಕ ಹೇಳುವುದರಿಂದ ವಿದ್ಯಾರ್ಥಿಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಇದರಿಂದ ಅವರ ಕಲಿಕೆಯಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದುʼ ಎಂದರು.
ʼಸಾಹಿತಿ, ನಾಟಕಕಾರ ಡಾ.ಚಂದ್ರಶೇಖರ ಕಂಬಾರ ರಚನೆಯ ಬೋಳೇಶಂಕರ ಮತ್ತು ಪೂರ್ಣಚಂದ್ರ ತೇಜಸ್ವಿ ರಚಿಸಿದ ಕೃಷ್ಣೆಗೌಡರ ಆನೆ ನಾಟಕದ ಮೂಲಕ ಕಲಬುರಗಿಯ ರಂಗ ಕಲಾ ತಂಡದ ಕಲಾವಿದರು ಪಠ್ಯಾಧಾರಿತ ವಿಷಯಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬೇರೂರುವಂತೆ ಅಭಿನಯಿಸಿದ್ದಾರೆʼ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ʼರಂಗಾ ಕಲಾ ತಂಡದ ಕಲಾವಿದರು ಪದವಿ, ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿಕೊಂಡು ಕಲಾ ರಂಗದಲ್ಲಿ ಆಸಕ್ತಿ
ಬೆಳೆಸಿಕೊಂಡಿರುವುದು ಮಾದರಿ ಎನಸಿದೆʼ ಎಂದು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ಸಿಎಂ ರಾಜೀನಾಮೆ ನೀಡಲಿ, ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ಆರ್ ಅಶೋಕ್ ಆಗ್ರಹ
ಕಾರ್ಯಕ್ರಮದಲ್ಲಿ ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಮಹಾಲಿಂಗ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಕಲ್ಯಾಣರಾವ ಪಾಟೀಲ್ ಇದ್ದರು. ಉಪಪ್ರಾಚಾರ್ಯ ಸಿದ್ರಾಮ ಗೊಗ್ಗಾ ಪ್ರಾರ್ಥನೆ ಗೀತೆ ನಡೆಸಿ ಕೊಟ್ಟರು. ಮಧುಕರ ಗಾಂವಕರ್ ನಿರೂಪಿಸಿ, ವಂದಿಸಿದರು.