- ಕಾನೂನು ಸುವ್ಯವಸ್ಥೆ ಕುಸಿದು ಅನೈತಿಕ ಪೊಲೀಸ್ ಗಿರಿ ರಾರಾಜಿಸುತ್ತಿದೆ
- ದಸಂಸ ಐಕ್ಯ ಹೋರಾಟ ಚಾಲನ ಸಮಿತಿ ಕಾಂಗ್ರೆಸ್ಗೆ ಷರತ್ತುಬದ್ಧ ಬೆಂಬಲ
ದಲಿತರು, ದಮನಿತರು, ರೈತರು, ಅಲ್ಪಸಂಖ್ಯಾತರು ಸೇರಿದಂತೆ ಜನವಿರೋಧಿ ಬಿಜೆಪಿ ಸರ್ಕಾರವನ್ನು ಸೋಲಿಸಿ ಮನೆಗೆ ಕಳಿಸಬೇಕಾಗಿದ್ದು, ಕಾಂಗ್ರೆಸ್ಗೆ ಬೆಂಬಲ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮನವಿ ಮಾಡಿದರು.
ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಿಜೆಪಿ ಮತ್ತು ಮೋದಿ ಸರ್ಕಾರ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ. ದೇಶದಲ್ಲಿ ಅತ್ಯಂತ ಸಮರ್ಥ ಜನ ಚಳವಳಿಗಳಲ್ಲಿ ದಲಿತ ಸಂಘರ್ಷ ಸಮಿತಿಯು ವಿಶಿಷ್ಟವಾಗಿ ನಿಲ್ಲುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಾರತದ ಸಂವಿಧಾನ ನಮ್ಮ ದಲಿತ ಸಂಘರ್ಷ ಸಮಿತಿಯ ಜೀವಾಳ ಮತ್ತು ಅಂಬೇಡ್ಕರ್ ಸಿದ್ಧಾಂತವೇ ನಮ್ಮ ಸಿದ್ಧಾಂತ” ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ನೋಟು ರದ್ಧತಿ, ಜಿಎಸ್ಟಿ ಜಾರಿಗೊಳಿಸಿ ಜನರು ನರಳುವಂತೆ ಆಯಿತು. ಬೆಲೆ ಏರಿಕೆ, ಕೋಮುದಳ್ಳುರಿ, ಭಯೋತ್ಪಾದನೆ ವಿಪರೀತ ಜಾತಿ ದೌರ್ಜನ್ಯಗಳಿಂದ ಬಡವರು ನೋವು ತಿಂದರು. ಕಳೆದ ಒಂಬತ್ತು ವರ್ಷಗಳಲ್ಲಿ ದೇಶದ ಜನಸಾಮಾನ್ಯರು ನರಕ ನೋಡಿದ್ದಾರೆ. ಅದರಲ್ಲೂ ದಲಿತರು ರೌರವ ನರಕ ಅನುಭವಿಸಿದ್ದಾರೆ ಎಂದು ಹೇಳಿದರು.
ದೇಶ ಮತ್ತು ರಾಜ್ಯದಲ್ಲಿ ಕಾನೂನು, ಶಾಂತಿ ಸುವ್ಯವಸ್ಥೆ ಕುಸಿದು ಬಿದ್ದು ಅನೈತಿಕ ಪೊಲೀಸ್ ಗಿರಿ ರಾರಾಜಿಸುತ್ತಿದೆ. ಕಾರ್ಯಾಂಗದಲ್ಲಿ ಸಂಘ ಪರಿವಾರದ ಮನಸ್ಥಿತಿಗಳು ಸ್ವಜನ ಪಕ್ಷಪಾತಿಗಳಾಗಿದ್ದಾರೆ. ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳೆಲ್ಲವೂ ಆಡಳಿತ ಬಿಜೆಪಿ ಸರ್ಕಾರದ ಅಣತಿಯಂತೆ ವರ್ತಿಸುತ್ತಿವೆ ಎಂದು ಟೀಕಿಸಿದರು.
ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಹಾಗೂ ಜನದ್ರೋಹಿ ಆರ್.ಎಸ್.ಎಸ್ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ಗೆ ಷರತ್ತುಬದ್ಧ ಬೆಂಬಲ ನೀಡಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಚಾಲನ ಸಮಿತಿ ತೀರ್ಮಾನಿಸಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು ಜಿಲ್ಲೆ | ಬಿಜೆಪಿಗೆ ಮುಳುವಾಗಲಿದೆಯೇ ಬಂಡಾಯ– ಆಡಳಿತ ವಿರೋಧಿ ಅಲೆ?
ಜನಪರ ಚಿಂತಕ ಮತ್ತು ಹಿರಿಯ ದಲಿತ ಮುಖಂಡ ಕೆ ದೊರೆರಾಜ್ ಮಾತನಾಡಿ, ಬಿಜೆಪಿ ಸರ್ಕಾರ ದಲಿತ, ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ದೇಶ ಮತ್ತು ರಾಜ್ಯದಲ್ಲಿ ಸಾಮರಸ್ಯವನ್ನು ಹಾಳು ಮಾಡುತ್ತಿದೆ. ಅಷ್ಟೇ ಅಲ್ಲ ಆರ್.ಎಸ್.ಎಸ್ ಮತ್ತು ಬಿಜೆಪಿ ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಇಂತಹ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳನ್ನು ಕಿತ್ತೊಗೆಯಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಜನಪರ ಚಿಂತಕ ಕೆ ದೊರೈರಾಜ್, ಮುಖಂಡರಾದ ಎಂ ಸೋಮಶೇಖರ್, ಎನ್ ವೆಂಕಟೇಶ್ ಕೋಲಾರ, ಡಾ. ಡಿ ಮುರಳೀಧರ್, ಜೈಮೂರ್ತಿ, ಡಿ ಭಾರತ್ ಕುಮಾರ್ ಬೆಲ್ಲದಮಡು, ರಾಮಾಂಜನೇಯ ಇದ್ದರು.