- ಖರ್ಗೆ ಕುಟುಂಬ ಹತ್ಯೆಗೆ ಸಂಚು; ಸೂಕ್ತ ತನಿಖೆ ನಡೆಸಿ ಕ್ರಮಕ್ಕೆ ಆಗ್ರಹ
- ದೊಡ್ಡ ನಾಯಕರಿಗೆ ಹೀಗಾದರೆ ಹಳ್ಳಿಗಳಲ್ಲಿನ ದಲಿತರ ಪರಿಸ್ಥಿತಿ ಏನು?
ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯಾಧ್ಯಕ್ಷ ಕೃಷ್ಣಪ್ಪ, ಭೀಮ್ ಪ್ರಜಾಸಂಘದ ರಾಜ್ಯಾಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ್, ಕರ್ನಾಟಕ ಸಮಗ್ರ ಸೈನಿಕ ದಳ ಮಹಿಳಾ ಅಧ್ಯಕ್ಷೆ ಕಮಲಮ್ಮ, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸೇರಿದಂತೆ ರಾಜ್ಯದ ಹಲವು ದಲಿತ ಸಂಘಟನೆಗಳ ಮುಖಂಡರು ಶನಿವಾರ ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಧರ್ಮಸೇನಾ ಅವರು ದಲಿತ ಮುಖಂಡರನ್ನು ಕಾಂಗ್ರೆಸ್ ಸ್ವಾಗತಿಸಿದರು.
ಬಳಿಕ ಮಾತನಾಡಿದ ಧರ್ಮಸೇನಾ, “ಇಂದು ದಲಿತರೆಲ್ಲರೂ ಒಗ್ಗೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಲಿತರ ಏಳಿಗೆ, ಅಭಿವೃದ್ಧಿಗೆ ಕಂಟಕ, ಅಪಾಯ ಎದುರಾದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಿ ದಲಿತರಿಗೆ ಚೈತನ್ಯ ತುಂಬಿದೆ. ಇನ್ನು ಪರಮೇಶ್ವರ್ ಅವರನ್ನು ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದೆ. ಆ ಮೂಲಕ ದಲಿತರಿಗೆ ಕಾಂಗ್ರೆಸ್ನಲ್ಲಿ ಉತ್ತಮ ಸ್ಥಾನಮಾನ ನೀಡಿ ಸಮುದಾಯಕ್ಕೆ ಶಕ್ತಿ ತುಂಬಲಾಗಿದೆ” ಎಂದು ತಿಳಿಸಿದರು.
“ರಾಜ್ಯದಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಸುಮಾರು 20 ಸಾವಿರ ಸಂಘಟನೆಗಳಿವೆ. ನಾನು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷನಾಗಿ ನೇಮಕಗೊಂಡ ನಂತರ ದಲಿತರ ನಡೆ ಕಾಂಗ್ರೆಸ್ ಕಡೆ ಎಂಬ ಕಾರ್ಯಕ್ರಮದ ಮೂಲಕ ಸ್ಥಳೀಯ ಮಟ್ಟದಲ್ಲಿ ಒಬ್ಬರೇ ಆದರೂ ಅವರನ್ನು ನಿರ್ಲಕ್ಷಿಸದೇ ದಲಿತ ಸಮುದಾಯದವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರಬೇಕು ಎಂದು ನಮ್ಮ ಘಟಕದ ಎಲ್ಲಾ ಪದಾಧಿಕಾರಿಗಳಿಗೆ ಸೂಚನೆ ನೀಡಿದೆ” ಎಂದು ಹೇಳಿದರು.
“ಕಳೆದ ಒಂದು ವರ್ಷದಿಂದ ಇದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ದಲಿತರಿಗಾಗಿ ಕಾಂಗ್ರೆಸ್ ಈಗಾಗಲೇ 10 ವಿಶೇಷ ಕಾರ್ಯಕ್ರಮವನ್ನು ಪ್ರಕಟಿಸಿದೆ. ಇದರ ಹೊರತಾಗಿ ದಲಿತರ ಸಮಸ್ಯೆ ಏನೇ ಇದ್ದರೂ ಅದನ್ನು ಬಗೆಹರಿಸಲು ಕಾಂಗ್ರೆಸ್ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರುತ್ತಿರುವ ಎಲ್ಲರನ್ನು ಪಕ್ಷಕ್ಕೆ ತುಂಬುಹೃದಯದಿಂದ ಸ್ವಾಗತಿಸುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯಿಂದ ಖರ್ಗೆ ಕುಟುಂಬ ಹತ್ಯೆಗೆ ಸಂಚು, ಮೋದಿ ಮೌನಕ್ಕೆ ಶರಣು : ಸುರ್ಜೇವಾಲ ಗಂಭೀರ ಆರೋಪ
ಖರ್ಗೆ ಹತ್ಯೆಗೆ ಸಂಚು : ಖಂಡನೀಯ
“ನಮ್ಮ ನೆಚ್ಚಿನ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಹತ್ಯೆಗೆ ಸಂಚು ರೂಪಿಸಿರುವ ವಿಚಾರ ಬೆಳಕಿಗೆ ಬಂದಿದ್ದು, ಇನ್ನು ಡಾ. ಜಿ ಪರಮೇಶ್ವರ್ ಅವರ ತಲೆಗೆ ಕಲ್ಲೇಟು ಬಿದ್ದಿದೆ. ಈ ದಾಳಿ ಯಾರಿಂದ ಆಗಿದೆ ಎಂದು ಪತ್ತೆಹಚ್ಚಲು ಸರ್ಕಾರ ವಿಫಲವಾಗಿದೆ. ದೊಡ್ಡ ನಾಯಕರ ಪರಿಸ್ಥಿತಿ ಹೀಗಾದರೆ ಹಳ್ಳಿಗಳಲ್ಲಿರುವ ದಲಿತರ ಪರಿಸ್ಥಿತಿ ಏನು” ಎಂದು ಪ್ರಶ್ನಿಸಿದರು.
“ಖರ್ಗೆ ಅವರ ಹತ್ಯೆಗೆ ಸಂಚು ರೂಪಿಸಿರುವ ವಿಚಾರ ಖಂಡನೀಯ. ಈ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗ ಈ ವಿಚಾರದಲ್ಲಿ ಸೂಕ್ತ ಕ್ರಮಕೈಗೊಂಡು ದಲಿತರ ರಕ್ಷಣೆ ಮಾಡಬೇಕು” ಎಂದು ಆಗ್ರಹಿಸಿದರು.