ದೇಶದ ಕೆಲವು ರಾಜ್ಯಗಳ ಜೈಲು ಕೈಪಿಡಿಗಳು ಜಾತಿ ಆಧಾರಿತ ತಾರತಮ್ಯವನ್ನು ಪ್ರೋತ್ಸಾಹಿಸುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ , ‘ಎಲ್ಲ ಜಾತಿಗಳ ಕೈದಿಗಳನ್ನು ಮಾನವೀಯ ರೀತಿಯಲ್ಲಿ ಮತ್ತು ಏಕರೂಪವಾಗಿ ಪರಿಗಣಿಸಬೇಕು’ ಎಂದು ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠವು ವಿಚಾರಣೆ ನಡೆಸಿ, ಜೈಲು ನಿಯಮಗಳ ಪ್ರಕಾರ, ಕೆಳವರ್ಗದ ಕೈದಿಗಳನ್ನು ಜಾತಿ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ನಿರ್ದೇಶಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹರಿಯಾಣದಲ್ಲಿ ಆಡಳಿತ ವಿರೋಧಿ ಗಾಳಿ- ಇಳಿಜಾರಿನಲ್ಲಿ ಬಿಜೆಪಿ
ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿನ ಜೈಲು ಕೈಪಿಡಿಗಳು ಕೈದಿಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪ್ರೋತ್ಸಾಹಿಸುತ್ತಿವೆ ಎಂದು ಆರೋಪಿಸಿ ಸುಕನ್ಯಾ ಶಾಂತ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ರಾಜ್ಯಗಳ ಜೈಲು ಕೈಪಿಡಿಗಳು ತಮ್ಮ ಜೈಲುಗಳಲ್ಲಿನ ಕೆಲಸದ ಹಂಚಿಕೆಯಲ್ಲಿ ತಾರತಮ್ಯವನ್ನು ತೋರಿಸುತ್ತವೆ ಮತ್ತು ಕೈದಿಗಳ ಜಾತಿಯ ಆಧಾರದ ಮೇಲೆ ಅವರಿಗೆ ಜೈಲಿನಲ್ಲಿ ಸ್ಥಳವನ್ನು ನೀಡಲಾಗುತ್ತದೆ. ಉದಾಹರಣೆಗೆ ಪಶ್ಚಿಮ ಬಂಗಾಳದ ಜೈಲು ಸಂಹಿತೆಯು‘ಜಾತಿ ಆಧಾರದ ಮೇಲೆ ಜೈಲಿನಲ್ಲಿ ಕೆಲಸವನ್ನು ನೀಡಬೇಕು. ಅಡುಗೆ ಕೆಲಸವನ್ನು ಉನ್ನತ ಜಾತಿಯವರು ಮಾಡಬೇಕು ಮತ್ತು ಇತರ ಜಾತಿಗಳ ಜನರು ಕಸಗುಡಿಸುವಂತಹ ಉಳಿದ ಕೆಲಸಗಳನ್ನು ಮಾಡಬೇಕು’ ಎಂದು ಹೇಳುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದರು.
