ಗಾಂಧೀವಾದ ಹಾಗೂ ಸಾವರ್ಕರ್ ಅವರ ಮೂಲಭೂತ ವಾದದ ಬಗ್ಗೆ ವಿಶ್ಲೇಷಣೆ ಮಾಡಿದ್ದೇನೆಯೇ ಹೊರೆತು ಸಾವರ್ಕರ್ ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡುವ ಉದ್ದೇಶ ನನ್ನದಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
ಸಾವರ್ಕರ್ ಮಾಂಸ ಹಾರಿಯಾಗಿದ್ದರು ಎಂಬ ತಮ್ಮ ಹೇಳಿಕೆಗೆ ಮಾಧ್ಯಮಗಳು ವಿವಾದದ ಸ್ವರೂಪ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಸ್ಪಷ್ಟನೆ ನೀಡಿದ ಸಚಿವರು, ತಮ್ಮ ಹೇಳಿಕೆಯನ್ನ ತಪ್ಪಾಗಿ ಅರ್ಥೈಸುವುದು ಸರಿಯಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಗಾಂಧೀಜಿಯವರು ಸಸ್ಯಹಾರಿಯಾಗಿದ್ದರು. ಹಿಂದು ಧರ್ಮ ಹಾಗೂ ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಅವರಿಗೆ ಅಪಾರವಾದ ನಂಬಿಕೆಯಿತ್ತು. ಆದರೆ ಸಾವರ್ಕರ್ ಅವರು ನಾಸ್ತಿಕರಾಗಿ ಹಿಂದು ರಾಷ್ಟ್ರ ಕಟ್ಟಲು ಹೊರಟಿದ್ದರು. ಅವರ ಮೂಲಭೂತವಾದ ನಮ್ಮ ದೇಶದ ಸಂಸ್ಕೃತಿಯಲ್ಲ. ಅದು ಯುರೋಪ್ ನಿಂದ ಬಂದಿದ್ದು. ಅಲ್ಲದೇ ಸಾವರ್ಕರ್ ಮಾಂಸಹಾರಿಯಾಗಿದ್ದರು. ಗೋ ಹತ್ಯೆಯನ್ನ ಅವರು ವಿರೋಧಿಸಿರಲಿಲ್ಲ. ಒಂದು ರೀತಿ ಅವರು ಮಾಡರ್ನಿಸ್ಟ್ ಆಗಿ ಕಾಣಿಸಿಕೊಂಡರೂ, ಅವರ ಮೂಲಭೂತವಾದ ನಮ್ಮ ದೇಶದ ಪರಂಪರೆಗೆ ವಿರುದ್ಧವಾಗಿದೆ. ಹೀಗಾಗಿ ದೇಶದಲ್ಲಿ ಗಾಂದೀವಾದ ಗೆಲ್ಲಬೇಕು ಎಂದು ಹೇಳಿಕೆ ನೀಡಿದ್ದೆ” ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಗಾಂಧೀಜಿಯ ಹಂತಕ’ | ಗೋಡ್ಸೆ ಎಂಬ ಸರಳ ಮನಸ್ಸಿನ ಹಂತಕ
“ಸಾವರ್ಕರ್ ನಾಸ್ತಿಕರು, ಮಾಂಸಹಾರಿ ಸೇವೆನೆ ಮಾಡುತ್ತಿದ್ದರು ಎಂಬುದನ್ನ ಅವರೇ ಹಲವು ಪ್ರಸಂಗಗಳಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ನಾನು ಹೊಸದಾಗಿ ಏನು ಹೇಳುತ್ತಿರುವುದಲ್ಲ. ಸಾವರ್ಕರ್ ಅವರಲ್ಲಿ ವೈಚಾರಿಕ ಚಿಂತನೆಗಳು ಇದ್ದವು. ಹಾಗೆ ನೋಡಿದರೆ ಗಾಂಧೀಜಿ ಸಂಪ್ರದಾಯಸ್ಥರು. ಹಿಂದು ಸಂಸ್ಕೃತಿ, ಧರ್ಮದ ಮೇಲೆ ಅಪಾರ ನಂಬಿಕೆಯಿಟ್ಟುಕೊಂಡಿದ್ದರು. ಆದರೆ ಗಾಂಧಿಜೀಯವರದ್ದು ಡೆಮಾಕ್ರೆಟಿಕ್ ವ್ಯಕ್ತಿತ್ವ. ಇತರ ಧರ್ಮಗಳನ್ನು ಅವರು ಗೌರವಿಸುತ್ತಿದ್ದರು” ಎಂದಿದ್ದಾರೆ.
“ಸಾವರ್ಕರ್ ಅವರದ್ದು ಮೂಲಭೂತವಾದ. ಹೀಗಾಗಿ ಸಂಪ್ರದಾಯಸ್ಥರೆಲ್ಲ ಮೂಲಭೂತವಾದಿಗಳಲ್ಲ. ಅವರಲ್ಲೂ ಅನೇಕರು ಪ್ರಜಾಪ್ರಭುತ್ವದ ಮನಸ್ಥಿತಿ ಉಳ್ಳವರಿದ್ದಾರೆ. ಹೀಗಾಗಿ ಗಾಂಧೀವಾದಕ್ಕೆ ನಾವು ಹೆಚ್ಚು ಮನ್ನಣೆ ನೀಡುವ ಮೂಲಕ ಮೂಲಭೂತವಾದದ ವಿರುದ್ಧ ಹೋರಾಟ ನಡೆಸುವ ಅಗತ್ಯತೆ ಇದೆ” ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.