ಬಸವಾದಿ ಶರಣರನ್ನು ಅವಮಾನಿಸುವ, ಶರಣತತ್ವ ಸಿದ್ದಾಂತ ತಿರುಚುವ, ಶರಣರ ಆಶಯಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ನಿರ್ಮಾಣಗೊಂಡಿರುವ ‘ಶರಣಶಕ್ತಿ’ ಚಲನಚಿತ್ರವನ್ನು ಬಿಡುಗಡೆಗೊಳಿಸಿದಂತೆ ಆಗ್ರಹಿಸಿ ವಿಜಯಪುರದ ಶರಣ ಸಂಸ್ಕೃತಿ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಸಮುದಾಯ ಭವನದಲ್ಲಿ ಮೊದಲ ಸಭೆ ನಡೆಸಿದ ಪದಾಧಿಕಾರಿಗಳು ಚಲನಚಿತ್ರದಲ್ಲಿರುವ ಲೋಪ ದೋಷಗಳ ಕುರಿತು ಚರ್ಚಿಸಿದರು.
ನಿರ್ದೇಶಕ ದಿಲೀಪ್ ಶರ್ಮ, ನಿರ್ಮಾಪಕಿ ಆರಾಧನಾ ಕುಲಕರ್ಣಿ ನಿರ್ಮಿಸಿರುವ ಚಲನಚಿತ್ರ ‘ಶರಣರ ಶಕ್ತಿ’ ಸಂಪೂರ್ಣ ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾಗಿದ್ದು, ಕೂಡಲೇ ಸರ್ಕಾರ ಈ ಚಲನಚಿತ್ರವನ್ನು ಪ್ರದರ್ಶನಕ್ಕೆ ಅವಕಾಶ ಕೊಡಬಾರದೆಂದು ಸಂಘಟಕರು ಆಗ್ರಹಿಸಿದರು.
ಇಂಗಳೇಶ್ವರ ವಚನ ಶಿಲಾಮಂಟಪದ ಚನ್ನಬಸವ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ತತ್ವ, ಸಿದ್ಧಾಂತಕ್ಕೆ ಧಕ್ಕೆ ತರುವಂತ ಈ ಚಿತ್ರವನ್ನು ಯಾವುದೇ ಕಾರಣಕ್ಕೂ ಪ್ರದರ್ಶನಗೊಳಿಸಬಾರದು ಎಂದು ಆಗ್ರಹಿಸಿದರು. ಬ. ಬಾಗೇವಾಡಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಶರಣರಿಗೆ ಅವಮಾನ ಮಾಡುವ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದುರು. ರಾಷ್ಟ್ರೀಯ ಬಸವ ಸೇನಾ ಜಿಲ್ಲಾಧ್ಯಕ್ಷ ಡಾ. ರವಿ ಬಿರಾದಾರ ಮಾತನಾಡಿ, ಶರಣರಿಗೆ ಅವಹೇಳನ ಮಾಡಿರುವ ಈ ಚಲನಚಿತ್ರವನ್ನು ನಿರ್ಬಂಧಿಸಿ, ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಕ್ರಿಮಿನಲ್ ಮೊಕದ್ದಮೆ ಹಾಕಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ ವಿಜಯಪುರ | ಅ. 6ಕ್ಕೆ ಜನಕಲಾ ಸಾಂಸ್ಕೃತಿಕ ಮೇಳ: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮಿತಿ ಬೆಂಬಲ
ಈ ಸಂದರ್ಭದಲ್ಲಿ ವೀರೇಶಾನಂದ ಸ್ವಾಮೀಜಿ, ಮನಗೂಳಿ ವಿರಕ್ತ ಮಠದ ಸೆರೆಮಯ್ಯ ಸ್ವಾಮೀಜಿ, ಚಂದ್ರಕಲಾ ಸಾ. ಗುಣದಾಳ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ವಿ. ಸಿ. ನಾಗಠಾಣಾ, ಲಡಾಯಿ ಪ್ರಕಾಶನದ ಬಸವರಾಜ ಸುಳಿಭಾವಿ, ಜೇ ಎಸ್, ಪಾಟಿಲ, ಪ್ರಕಾಶ್ ಕಶೆಟ್ಟಿ, ಪ್ರಭುಗೌಡ ಪಾಟೀಲ, ಚನ್ನು ಕಟ್ಟಿಮನಿ, ಅನಿಲ ಹೊಸಮನಿ, ರಾಜಶೇಖರ ಯರನಾಳ, ದಾನೇಶ ಅವಟಿ ಉಪಸ್ಥಿತರಿದ್ದರು.