ಅತ್ಯಂತ ಬಿಸಿಲು ಪ್ರದೇಶಗಳಾದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ಮಳೆ ಸುರಿಯುವುದೇ ಕಡಿಮೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಳೆ ಶುರುವಾದರೆ ಅತಿ ಹೆಚ್ಚು ಮತ್ತು ವಿಪರೀತ ಎನಿಸುವಷ್ಟು ಮಳೆಯಾಗುತ್ತಿದ್ದು, ಇದರಿಂದ ಹೊಲ-ಮನೆಗಳಲ್ಲಿ ನೀರು ನುಗ್ಗುತ್ತಿದ್ದು, ನಾಶ-ನಷ್ಟಗಳಿಗೆ ಕಾರಣವಾಗುತ್ತಿದೆ.
ಕಳೆದ ಶುಕ್ರವಾರ ರಾತ್ರಿ ಮತ್ತು ನಂತರದ ದಿನದಲ್ಲಿ ಸುರಿದ ಭಾರೀ ಮಳೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಹಲವು ತಾಲೂಕುಗಳಲ್ಲಿ ಅವಾಂತರ ಎದುರಾಗಿದೆ. ಹಲವು ಜಮೀನುಗಳಿಗೆ ನೀರು ನುಗ್ಗಿದ್ದು, ಊರುಗಳಲ್ಲಿನ ಮನೆಗಳಿಗೆ ಮತ್ತು ಕಾಲೋನಿಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ಥವ್ಯಸ್ಥಗೊಂಡಿದೆ.
ಶುಕ್ರವಾರ ಮತ್ತು ಶನಿವಾರ ರಾತ್ರಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಹಲವು ಭಾಗಗಳಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದು, ಕೆರೆ ಕಟ್ಟೆಗಳಲ್ಲಿ ನೀರು ತುಂಬಿವೆ. ಕೆಲವೆಡೆ ಕೆರೆಗಳು ಕೋಡಿ ಬಿದ್ದಿವೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ವ್ಯಾಪ್ತಿಯಲ್ಲಿ ಬರೋಬ್ಬರಿ 93.9 ಮಿ.ಮೀ. ಮಳೆಯಾಗಿದೆ.
ಮೊಳಕಾಲ್ಮೂರು ಮತ್ತು ಹಿರಿಯೂರು ತಾಲೂಕುಗಳಲ್ಲೂ ಮಳೆಯಿಂದ ಅವಾಂತರ ಎದುರಾಗಿದೆ. ಇದರಿಂದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರಕ್ಕೆ ಚಳ್ಳಕೆರೆ ಸಮೀಪದ ಎನ್ ದೇವರಹಳ್ಳಿ ಎ.ಕೆ ಕಾಲೋನಿಯ 8-10 ಮನೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿವೆ. ದೇವರಹಳ್ಳಿ ಕೆರೆ ಕೂಡ ಸಂಪೂರ್ಣ ಭರ್ತಿಯಾಗಿದೆ.
ಚಳ್ಳಕೆರೆ ತಾಲೂಕಿನ ಐತಿಹಾಸಿಕ ನಗರಂಗೆರೆ ಕೆರೆಗೆ ನೀರು ಹರಿದಿದ್ದು, ಕೋಡಿ ಬೀಳುವ ಹಂತದಲ್ಲಿದೆ. ತಾಲೂಕಿನ ಚಿಕ್ಕ ಮಧುರೆ ಗ್ರಾಮದಲ್ಲಿ ಹಲವು ರೈತರ ಜಮೀನುಗಳಿಗೆ ನೀರು ನುಗ್ಗಿದ್ದು, ತೊಗರಿ ಬೇಳೆ ಜಲಾವೃತವಾಗಿವೆ. ದ್ವಿದಳ ಧಾನ್ಯ ತೊಗರಿಯ ಅಪಾರ ಬೆಳೆ ನಷ್ಟಕ್ಕೆ ಕಾರಣವಾಗಿದ್ದು, ರೈತರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ದೇವರಹಳ್ಳಿ ಗ್ರಾಮದ ನಿವಾಸಿಗಳು ಮಾತನಾಡಿ, ನಮ್ಮ ಮನೆಗಳು ತಗ್ಗು ಪ್ರದೇಶದಲ್ಲಿ ಇರುವುದರಿಂದ ಮಳೆ ಬಂದಾಗ ಮನೆಗಳಿಗೆ ಪ್ರತಿ ಸಾರಿ ನೀರು ನುಗ್ಗಿ, ಮನೆಯಲ್ಲಿರುವ ಧವಸ ಧಾನ್ಯಗಳು ನೀರಲ್ಲಿ ಮುಳುಗಿ ಹೋಗುತ್ತವೆ. ಇದುವರೆಗೂ ಗ್ರಾ.ಪಂ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದರ ಬಗ್ಗೆ ಧ್ವನಿ ಎತ್ತಿ ಮಾತನಾಡುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಮಗೆ ಸಮಸ್ಯೆಯನ್ನು ಪರಿಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ಕೂರಲಾಗುವುದು ಎಂದರು.
ರಾಮಸಾಗರ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಗ್ರಾಮದ ರೈತರ ಜಮೀನುಗಳಿಗೆ ನೀರು ನುಗ್ಗಿ, ಈರುಳ್ಳಿ, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿದೆ. ಬೆಳೆ ನಷ್ಟದಿಂದಾಗಿ ಲಕ್ಷಾಂತರ ರೂಪಾಯಿ ನಷ್ಟಕ್ಕೊಳಗಾಗಿದ್ದಾರೆ. ಕೂಡಲೇ ಪರಿಹಾರವನ್ನು ನೀಡುವಂತೆ ಸರ್ಕಾರಕ್ಕೆ ರೈತರು ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮ ಲೆಕ್ಕಾಧಿಕಾರಿ ಶಂಕರ್, “ರಾಮಸಾಗರ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಮಳೆಗೆ ಸುಮಾರು 10 ಎಕರೆ ಗುಂಟೆ ಈರುಳ್ಳಿ, ಇತರ ಜಮೀನುಗಳಲ್ಲಿ ಮೆಕ್ಕೆಜೋಳ ಸಂಪೂರ್ಣವಾಗಿ ಬೆಳೆ ನಷ್ಟವಾಗಿದೆ. ರೈತರು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಸರ್ಕಾರದಿಂದ ರೈತರಿಗೆ ಪರಿಹಾರ ವ್ಯವಸ್ಥೆಯನ್ನು ಕಲ್ಪಿಸಲಾಗುವುದು” ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಳ್ಳಕೆರೆ ತಹಶೀಲ್ದಾರ್ ರೆಹಮಾನ್ ಪಾಷಾ, “ತಾಂತ್ರಿಕವಾಗಿ ಬೆಳೆ ನಷ್ಟದ ವರದಿಯನ್ನು ನಮಗೆ ಕೃಷಿ ಇಲಾಖೆಯವರು ನೀಡಬೇಕಿದ್ದು, ಅವರು ಶೀಘ್ರದಲ್ಲೇ ಕೊಡುವ ನಿರೀಕ್ಷೆ ಇದೆ. ಅದರ ಹೊರತಾಗಿಯೂ, ನಾವು ಕೂಡ ನಮ್ಮ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಅವರಿಂದಲೂ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ. ಈ ಮುಂಚೆ ಅತಿವೃಷ್ಟಿಯಿಂದ ಬೆಳೆ ನಾಶವಾಗಿದ್ದ ಎರಡು ನೂರು ಹೆಕ್ಟೇರ್ ಪ್ರದೇಶದ ಪರಿಹಾರವನ್ನು ಈಗಾಗಲೇ ಸರ್ಕಾರಕ್ಕೆ ವರದಿ ನೀಡಿ, ದಾಖಲಿಸಿದ್ದೇವೆ. ಶುಕ್ರವಾರ ಮತ್ತು ಶನಿವಾರ ಸುರಿದ ಮಳೆಯಿಂದ ಆಗಿರುವ ನಷ್ಟದ ವರದಿಯನ್ನು ಸದ್ಯದಲ್ಲೇ ತರಿಸಿಕೊಂಡು ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿಯನ್ನು ಕಳಿಸುತ್ತೇವೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಜೀವ ಕಳೆದುಕೊಳ್ಳುವ ಹಂತದಲ್ಲಿದೆ ಐತಿಹಾಸಿಕ ಮಳಖೇಡ ಕೋಟೆ
ಇದೇ ರೀತಿ ತಾಲೂಕಿನ ಹಲವು ಗ್ರಾಮಗಳಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು, ಇದರಿಂದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ಸ್ಥಳೀಯ ಆಡಳಿತ ಗಮನವಹಿಸಿ ಬೆಳೆ ನಷ್ಟವಾದ ರೈತರಿಗೆ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಸದಾ ನಷ್ಟದಿಂದ ತತ್ತರಿಸಿರುವ ರೈತರ ಸಹಾಯಕ್ಕೆ ನಿಲ್ಲಬೇಕಾಗಿದೆ ಎಂಬುದು ರೈತ ಮುಖಂಡರ ಆಗ್ರಹವಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು