ಎಸ್ಸಿ ಎಸ್ಟಿ ಕಾಯ್ದೆ ಎಂದರೆ ʼಗೂಂಡಾಗಿರಿʼ ಎಂದು ಹೇಳುವ ಮೂಲಕ ರಾಜಸ್ಥಾನದ ಭರತ್ಪುರ ಜಿಲ್ಲೆಯ ವೀರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ ವಿವಾದವನ್ನು ಸೃಷ್ಟಿಸಿದ್ದಾರೆ.
ಖೇಡ್ಲಿ ಮಾಡ್ ಪೊಲೀಸ್ ಠಾಣೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ ಭರತ್ಪುರ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚವಾ ಅವರ ಸಮ್ಮುಖದಲ್ಲೇ ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಹೆಚ್ಚಿನ ಸುಳ್ಳು ಪ್ರಕರಣಗಳು ಎಸ್ಸಿ ಎಸ್ಟಿ ಕಾಯ್ದೆಯಡಿ ದಾಖಲಿಸಲಾಗಿದೆ. ಅಂತಹ ಪ್ರಕರಣಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ. ಜನರು ಸಾಮಾನ್ಯವಾಗಿ ಮದುವೆ ಅಥವಾ ಇತರ ಕಾರ್ಯಕ್ರಮಗಳಿಗೆ ಸಾಲ ಪಡೆಯುತ್ತಾರೆ. ಸಾಲ ಕೊಟ್ಟವರು ವಾಪಾಸ್ಸು ಕೇಳಿದಾಗ ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ. ಸಾಲ ಕೊಟ್ಟವನಿಗೆ ಕೊಟ್ಟ ಹಣ ಬಿಟ್ಟು ಬಿಡುವುದು ಮಾತ್ರವಲ್ಲ, ಪ್ರಕರಣದ ಇತ್ಯರ್ಥಕ್ಕೆ 5 ಲಕ್ಷದವರೆಗೆ ಕೊಡುವಂತೆ ಆಗ್ರಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಜನಗಣತಿ ಎತ್ತುವ ಹಲವು ಪ್ರಶ್ನೆಗಳು
ಗೂಂಡಾಗಿರಿ ಏನಾದರು ಇದ್ದರೆ ಅದು ಎಸ್ಸಿ ಎಸ್ಟಿ ಕಾಯ್ದೆಯಡಿಯಾಗಿದೆ. ಈ ಕಾಯ್ದೆಯ ದುರುಪಯೋಗ ಕೊನೆಗೊಳ್ಳಬೇಕು ಎಂದು ಅವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶಾಸಕ ಬಹದ್ದೂರ್ ಸಿಂಗ್ ಕೋಲಿ ವಿವಾದಾತ್ಮಕ ಹೇಳಿಕೆ ನೀಡುವುದು ಇದು ಮೊದಲಲ್ಲ. ಈ ಹಿಂದೆ ಪಕ್ಷದ ಸಭೆಯೊಂದರಲ್ಲಿ ಬಿಜೆಪಿ ಮಹಿಳಾ ನಾಯಕಿಯೊಬ್ಬರನ್ನು ‘ಕಳ್ಳಿ’ ಎಂದು ಕರೆದು ತಮ್ಮದೇ ಪಕ್ಷದೊಳಗೆ ಸಂಚಲನ ಮೂಡಿಸಿದ್ದರು.
