ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜರ್ಮಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ “ನೀರಿನ ಅಭಾವ” ಉಂಟಾಗಿದ್ದು, ಇಡೀ ಜರ್ಮಲಿ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿದೆ.
ನಾಡಹಬ್ಬದ ಸಂಭ್ರಮದಲ್ಲಿ ನಾಡಿನ ಜನತೆ ಹಾಗೂ ಸರ್ಕಾರ ಸಂಭ್ರಮದಲ್ಲಿ ಮಿಂದೇಳುತ್ತಿದ್ದರೆ, ಇಲ್ಲಿ ಮಾತ್ರ ನೀರಿಗಾಗಿ ಹಾಹಾಕಾರ ನಿರ್ಮಾಣವಾಗಿದೆ. ಇದು ಜರ್ಮಲಿ ಗ್ರಾಮ ಪಂಚಾಯಿತಿ ಅಧಿಕಾರಿ ನೇತೃತ್ವದಲ್ಲಿ, ಜರ್ಮಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ದಸರಾ ಹಬ್ಬದ ಪ್ರಯುಕ್ತ, ಜರ್ಮಲಿ ಗ್ರಾಮದ ಗ್ರಾಮಸ್ಥರಿಗೆ ನೀಡಿರುವ ಭಾರೀ ಬಂಪರ್ ಕೊಡುಗೆಯಾಗಿದೆ. ಅದಕ್ಕೆ ಪ್ರತಿಯಾಗಿ ಇಡೀ ಗ್ರಾಮಕ್ಕೆ ಗ್ರಾಮವೇ, ಗ್ರಾ.ಪಂ ಅಧಿಕಾರಿ ನಿರ್ಲಕ್ಷ್ಯ ಧೋರಣೆಗೆ ಛೀಮಾರಿ ಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿಯೇ ನೀರಿಗಾಗಿ ಹಾಹಾಕಾರ ಎದ್ದಿದೆ. ಇಂತಹ ಮಳೆಗಾಲದಲ್ಲಿಯೂ ನೀರಿಗೆ ಅಭಾವವಾದರೆ ಇನ್ನು ಬೇಸಿಗೆಯಲ್ಲಿ ಗ್ರಾಮಸ್ಥರ ಗತಿ ಏನು?.

“ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 13 ಮಂದಿ ಸದಸ್ಯರಿದ್ದು, ಕೇಂದ್ರ ಸ್ಥಾನ ಜರ್ಮಲಿಯಲ್ಲಿ ನಾಲ್ಕು ಮಂದಿ ಸದಸ್ಯರಿದ್ದಾರೆ. ಅವರು ಹೆಸರಿಗೆ ಮಾತ್ರ ಸದಸ್ಯರಾಗಿದ್ದು, ಸೀಲು ಸಹಿಗಷ್ಟೇ ಸೀಮಿತವಾಗಿದ್ದಾರೆ. ಗ್ರಾಮದ ಸೇವೆ ಸಮಾಜ ಸೇವೆಯ ಹೆಸರಲ್ಲಿ ಗೆದ್ದುಬಂದು, ಬಳಿಕ ಗ್ರಾಮಸ್ಥರ ಪಾಲಿಗೆ ಅವರು ಬೆದುರು ಗೊಂಬೆಗಳಾಗಿದ್ದಾರೆ. ಕೇವಲ ಉತ್ಸವ ಮೂರ್ತಿಗಳಿದ್ದ ಹಾಗಾಗಿದೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸುಮಾರು 500ಕ್ಕೂ ಹೆಚ್ಚು ಮನೆಗಳಿರುವ ಗ್ರಾಮ, 3000ಕ್ಕೂ ಹೆಚ್ಚು ಜನಸಂಖ್ಯೆಯನ್ನೊಳಗೊಂಡಿದೆ. 500 ಮನೆಗಳಿಗೆ ಒಂದೇ ಬೋರ್ವೆಲ್. ಅದೂ ಕೂಡ ಕೆಟ್ಟು ವಾರವಾಗಿದೆ. ಈ ಕುರಿತು ಗ್ರಾ.ಪಂ ಅಧಿಕಾರಿ ಗಮನಕ್ಕೆ ಇದ್ದರೂ ಯಾವುದೇ ಪ್ರಯೋಜವಾಗಿಲ್ಲ” ಎಂದು ಗ್ರಾಮಸ್ಥರು ದೂರಿದ್ದಾರೆ.

“ದಸರಾ ಹಬ್ಬದ ಸಂದರ್ಭದಲ್ಲಿಯೇ ಗ್ರಾಮಕ್ಕೆ ಇಂತಹ ವಿಷಮ ಪರಿಸ್ಥಿತಿ ಎದುರಾಗಿದೆ. ಕಿಲೋ ಮೀಟರ್ಗಿಂತಲೂ ಹೆಚ್ಚು ದೂರವಿರೋ ಖಾಸಗೀ ಪಂಪ್ಸೆಟ್ನಿಂದ ನೀರು ಹೊತ್ತುತರುವ ದುಃಸ್ಥಿತಿ ನಿರ್ಮಾಣವಾಗಿದೆ. ʼಮುಖಂಡʼರು ಎನಿಸಿಕೊಂಡವರು ನಾಮಕಾವಸ್ಥೆಗೆ ಸೀಮಿತವಾಗಿದ್ದಾರೆ. ಕೇವಲ ಪ್ರಚಾರಕ್ಕೆ, ಒಣ ಬಿಂಕ-ಬಿನ್ನಾಣಕ್ಕೆ ಮಾತ್ರ ಮುಖಂಡರುಗಳಿದ್ದಾರೆ” ಎಂದು ಗ್ರಾಮದ ಮಹಿಳೆಯರು ಅರೋಪಿಸಿದ್ದಾರೆ.

ಕರ್ತವ್ಯದ ನೆಪದಲ್ಲಿ ಸರ್ಕಾರಿ ಸಂಬಳ ಪಡೆಯೋ ಗ್ರಾ.ಪಂ ಅಧಿಕಾರಿ ಸೌಲಭ್ಯಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ನಿರ್ಲಕ್ಷ್ಯ ತೋರಿರುವುದು ಖಂಡನೀಯ. ಇದರ ಪರಿಣಾಮ ಗ್ರಾಮದ ಮಹಿಳೆಯರು, ಮಕ್ಕಳು, ವೃದ್ಧರು, ಯುವಕರೆಲ್ಲರೂ ಸೇರಿ ಕಿಲೋ ಮೀಟರ್ ದೂರದ ಖಾಸಗಿ ಪಂಪ್ಸೆಟ್ನಿಂದ ನೀರು ಹೊತ್ತು ತರುತ್ತಿದ್ದಾರೆ. ಗ್ರಾಮಸ್ಥರು ತಾವು ಆಯ್ಕೆ ಮಾಡಿ ಕಳುಹಿಸಿರುವ ಜನಪ್ರತಿನಿಧಿಗಳ ಹೊಣೆಗೇಡಿತನಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಕರ್ತವ್ಯದ ನೆಪದಲ್ಲಿ ತಿಂಗಳೊಂದಕ್ಕೆ ಹತ್ತಾರು ಸಾವಿರ ರೂಪಾಯಿ ಸಂಬಳ ಜತೆಗೆ ಗಿಂಬಳ ಪೀಕೋ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯ ನಿರ್ಲಕ್ಷ್ಯ ದೋರಣೆಗೆ ಛೀಮಾರಿ ಹಾಕುತ್ತಿದ್ದಾರೆ.

ಜರ್ಮಲಿ ಗ್ರಾಮ ಪಂಚಾಯಿತಿಗೆ ಖಾಯಂ ಅಧಿಕಾರಿ ಇಲ್ಲವಾಗಿದೆ. ನಾಡಹಬ್ಬ ದಸರಾ ಹಬ್ಬದ ಸಂದರ್ಭದಲ್ಲಿಯೇ ಗ್ರಾಮಕ್ಕೆ ಸಮರ್ಪಕವಾಗಿ ನೀರು ಪೂರೈಸುವಲ್ಲಿ ವಿಫಲವಾಗಿದ್ದು, ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ಗ್ರಾಪಂ ಅಧಿಕಾರಿಗೆ ನೊಂದ ಗ್ರಾಮಸ್ಥರು ಮಹಿಳೆಯರು ವೃದ್ಧರು, ಛೀ ಥೂ ಎನ್ನುತ್ತಿರುವುದಂತು ನಿಜವಾಗಿದೆ.

“ತಾ.ಪಂ ಅಧಿಕಾರಿ ಉಪಯೋಗವಿಲ್ಲ. ಗ್ರಾ.ಪಂ ಅಧಿಕಾರಿ ನಾಪತ್ತೆ. ಬೋರ್ ಕೆಟ್ಟು ವಾರವಾದರೂ ಗ್ರಾ.ಪಂ ಅಧಿಕಾರಿ ನಿರೀಗಾಗಿ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ವಾರವಾದರೂ ಗ್ರಾ.ಪಂ ಅಧಿಕಾರಿ ಪತ್ತೆಯೇ ಇಲ್ಲ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಗ್ರಾ.ಪಂ ಅಧಿಕಾರಿ ನಿರ್ಲಕ್ಷ್ಯ ದೋರಣೆಯವರಾಗಿದ್ದು, ಅವರನ್ನು ಕೂಡಲೇ ಬೇರೆಡೆಗೆ ವರ್ಗಾಯಿಸಿ ಸೂಕ್ತ ನಿಷ್ಠಾವಂತ ಅಧಿಕಾರಿಯನ್ನು ಶೀಘ್ರವೇ ನೇಮಿಸಬೇಕು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಸ್ತು ಸ್ಥಿತಿಯನ್ನರಿತು ನೀರಿನ ಬವಣೆ ನಿವಾರಿಸಲು ಅಗತ್ಯಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು
“ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ, ಮೌಖಿಕವಾಗಿ ದೂರು ನೀಡಲಾಗಿದೆಯಾದರೂ ಪ್ರಯೋಜನವಾಗಿಲ್ಲ. ನೀರಿನ ಅಭಾವ ಸೃಷ್ಠಿಯಾಗಿ ವಾರವಾದರೂ ಕೂಡ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಗ್ರಾಮಕ್ಕೆ ಭೇಟಿ ಕೊಟ್ಟಿಲ್ಲ” ಎಂದು ಗ್ರಾಮದ ಹಿರಿಯರು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪೇಮೆಂಟ್ ಸೀಟು ಮಾರಾಟ ನಿಲ್ಲಿಸಿ-ಯುಬಿಡಿಟಿ ಉಳಿಸಿ’ ಘೋಷದಡಿ ಅ.16ರಂದು ಬಂದ್ಗೆ ಕರೆ
“ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಒಂದೆರೆಡು ದಿನದಲ್ಲಿ ನೀರಿನ ಅಭಾವವನ್ನು ನೀಗಿಸುವ, ಖಾಯಂ ಪರಿಹಾರ ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು, ಕೂಡ್ಲಿಗಿ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಗ್ರಾಮಸ್ಥರು ಈ ಮೂಲಕ ಎಚ್ಚರಿಸಿದ್ದಾರೆ.
ವರದಿ : ವಿ ಜಿ ವೃಷಭೇಂದ್ರ ಕೂಡ್ಲಿಗಿ