ಮಂಡ್ಯದಲ್ಲಿ ಡಿಸೆಂಬರ್ 20 ರಿಂದ ಮೂರು ದಿನ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಗೆ ಅ.13ರಂದು ಔರಾದ ಪಟ್ಟಣದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಪ್ರಭು ಬಿ.ಚವ್ಹಾಣ ಅದ್ಧೂರಿಯಾಗಿ ಸ್ವಾಗತಿಸಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ರಥದಲ್ಲಿ ಅಲಂಕೃತಗೊಂಡಿರುವ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಮಾಲಾರ್ಪಣೆ ಸಲ್ಲಿಸಿ ಗೌರವ ಸಮರ್ಪಿಸಿದರು. ಬಳಿಕ ತಮಟೆ ಬಾರಿಸುವುದರೊಂದಿಗೆ ಶಾಸಕರು ರಥಕ್ಕೆ ಚಾಲನೆ ನೀಡಿದರು.
ಬಳಿಕ ಬಸವೇಶ್ವರ ವೃತ್ತದಿಂದ ಕನ್ನಡಾಂಬೆ ವೃತ್ತದ ವರೆಗೆ ಕನ್ನಡ ಜ್ಯೋತಿ ರಥದ ಭವ್ಯ ಮೆರವಣಿಗೆ ನಡೆಯಿತು. ಕನ್ನಡ ಬಾವುಟದ ಬಣ್ಣಗಳಿರುವ ಶಾಲುಗಳನ್ನು ಧರಿಸಿದ ಕನ್ನಡಾಭಿಮಾನಿಗಳು ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡಕ್ಕೆ ಜಯವಾಗಲಿ, ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎನ್ನುವ ಕನ್ನಡಪರ ಘೋಷಣೆಗಳನ್ನು ಮೊಳಗಿಸಿದರು.
ಶಾಸಕ ಪ್ರಭು ಚವ್ಹಾಣ ಮಾತನಾಡಿ, ʼಸರ್ಕಾರಿ ಕಚೇರಿ ಮತ್ತು ಅಂಗಡಿಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಸಬೇಕೆಂದು ಸರ್ಕಾರದ ಆದೇಶವಿದೆ. ಆದರೆ, ಶೇ.100ರಷ್ಟು ಕನ್ನಡ ಬಳಕೆಯಾಗಬೇಕು. ಎಲ್ಲ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವಂತಾಗಬೇಕು. ಈ ದಿಸೆಯಲ್ಲಿ ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಕನ್ನಡ ಭಾಷೆಯನ್ನು ತಾಯಿಯಂತೆ ಪ್ರೀತಿಸಬೇಕುʼ ಎಂದು ತಿಳಿಸಿದರು.
ʼನಾನು ಕನ್ನಡದ ಪ್ರೇಮಿಯಾಗಿದ್ದು, ಕನ್ನಡದ ಕೆಲಸಗಳಿಗೆ ಸದಾ ಸಿದ್ದನಿದ್ದೇನೆ. ಗಡಿ ಭಾಗವಾಗಿರುವ ಔರಾದ(ಬಿ) ಕ್ಷೇತ್ರದಲ್ಲಿ ಮರಾಠಿ ಭಾಷೆಯ ಪ್ರಭಾವ ಹೆಚ್ಚಿದೆ. ಇಲ್ಲಿ ಕನ್ನಡ ಭಾಷೆಯನ್ನು ಬೆಳೆಸಲು ನಿರಂತರ ಪ್ರಯತ್ನ ವಹಿಸುತ್ತಿದ್ದೇನೆ. ಹಿಂದೆ ಕನ್ನಡ ಶಿಕ್ಷಕರ ಕೊರತೆಯಿತ್ತು. ನಾನು ಶಾಸಕನಾದ ನಂತರ ಕನ್ನಡ ಶಿಕ್ಷಕರನ್ನು ನಿಯೋಜಿಸಲಾಗಿದೆ. ಕನ್ನಡ ವಾತಾವರಣ ನಿರ್ಮಾಣವಾಗುತ್ತಿದೆʼ ಎಂದರು.

ʼಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ಕನ್ನಡ ಜ್ಯೋತಿ ರಥಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ. ಪ್ರಚಾರ ಕಾರ್ಯಕ್ರಮ ಗಡಿ ಭಾಗಗಳಲ್ಲಿ ವ್ಯವಸ್ಥಿತವಾಗಿ ನಡೆಯಬೇಕು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲಿʼ ಎಂದು ಶುಭ ಕೋರಿದರು.
ʼಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ʼಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸುತ್ತಿದೆ. ಅದರ ಭಾಗವಾಗಿ ಬೀದರ ಜಿಲ್ಲೆಯಲ್ಲಿಯೂ ಸಂಚರಿಸುತ್ತಿದೆ. ಸಮ್ಮೇಳನದ ಯಶಸ್ವಿಗೆ ಎಲ್ಲ ಕನ್ನಡಾಭಿಮಾನಿಗಳು ಕೈಜೋಡಿಸಬೇಕುʼ ಎಂದು ಕೋರಿದರು.
ಔರಾದ(ಬಿ) ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘೂಳೆ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಜಿಲ್ಲಾ ಸಂಚಾಲಕ ವಿಜಯಕುಮಾರ ಗೌರೆ, ತಾಲ್ಲೂಕು ಅಧ್ಯಕ್ಷ ಡಾ.ಶಾಲಿವಾನ್ ಉದಗೀರೆ, ಎಂ.ಎಸ್ ಮನೋಹರ್, ನಿಕಟಪೂರ್ವ ಅಧ್ಯಕ್ಷ ಜಗನಾಥ ಮೂಲಗೆ, ತಾಪಂ ಇಒ ಮಾಣಿಕರಾವ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ಸೇರಿದಂತೆ ಶಿವರಾಜ ಅಲ್ಮಾಜೆ, ಕೇರಬಾ ಪವಾರ್, ಅಶೋಕ ಅಲ್ಮಾಜೆ, ಸಂದೀಪ ಪಾಟೀಲ, ಜಗನಾಥ ದೇಶಮುಖ, ಅಮೃತರಾವ ಬಿರಾದಾರ, ಅಶೋಕ ಶೆಂಬೆಳ್ಳಿ, ಮಹಾನಂದ ಎಂಡೆ, ಮಲ್ಲಪ್ಪ ಗೌಡ, ರಾಘವೇಂದ್ರ ಸೇರಿದಂತೆ ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಮಲನಗರದಲ್ಲಿ ʼಕನ್ನಡ ರಥಯಾತ್ರೆʼಗೆ ಅದ್ಧೂರಿ ಸ್ವಾಗತ
ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆ ಶನಿವಾರ ಕಮಲನಗರ ತಾಲೂಕಿಗೆ ಪ್ರವೇಶಿಸಿತು.
ಭಾಲ್ಕಿ ಮೂಲಕ ತಾಲೂಕಿನ ಸಂಗಮ ಕ್ರಾಸ್ ಹತ್ತಿರ ರಥ ಪ್ರವೇಶಿಸುತ್ತಿದ್ದಂತೆ ತಾಲೂಕು ಆಡಳಿತ, ಕನ್ನಡಾಭಿಮಾನಿಗಳು,
ಗ್ರಾಮಸ್ಥರು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸ್ವಾಗತ ಕೋರಿದರು. ಖೇಡ್ ಗ್ರಾಪಂ ಅಧ್ಯಕ್ಷ ಹಣಮಂತ ದಾನಾ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಕನ್ನಡ ಭಾಷೆಗೆ ತನ್ನದೇ ಆದ ಶ್ರೇಷ್ಠ ಪರಂಪರೆ,
ಸಂಸ್ಕೃತಿ ಇದ್ದು, ಪ್ರತಿಯೊಬ್ಬರೂ ಕನ್ನಡ ಉಳಿಸಿ ಬೆಳೆಸಲು ಬದ್ಧರಾಗಿರಬೇಕು’ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ, ʼತಾಯಿ ಭಾಷೆ ಕನ್ನಡದ ಕುರಿತು ಎಲ್ಲರಲ್ಲಿ ಗೌರವ ಇರಬೇಕು. ಕನ್ನಡ ಕೇವಲ ಒಂದು ಭಾಷೆಯಲ್ಲ, ಅದೊಂದು ಸಂಸ್ಕೃತಿ ಎಂಬುದನ್ನು ಮರೆಯಬಾರದುʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಾಹಿತಿ, ಬರಹಗಾರರು ಓದುಗರಿಗೆ ನಿಷ್ಠುರವಾಗಿರಬೇಕು : ದಿನೇಶ ಅಮೀನ್ ಮಟ್ಟು
ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ಗ್ರೇಡ್-2 ತಹಸೀಲ್ದಾರ್ ರಮೇಶ ಪೆದ್ದೆ, ತಾ.ಪಂ. ಎಡಿ ಹಣಮಂತರಾಯ ಕೌಟಗೆ, ಸಿಪಿಐ ಅಮರಪ್ಪ ಎಸ್, ಪಿಎಸ್ಐ ಚಂದ್ರಶೇಖರ ನಿರ್ಣೆ, ಉಪತಹಸೀಲ್ದಾರ್ ಗೋಪಾಲಕೃಷ್ಣ, ಎಇಇ ಸುಭಾಷ, ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಎನ್.ಶಿವಣಕರ, ಕಮಲನಗರ ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನ್, ಶಿವಶಂಕರ ಟೋಕರೆ, ಪ್ರವೀಣ ಬಿರಾದಾರ, ಖೇಡ್ ಗ್ರಾಪಂ ಉಪಾಧ್ಯಕ್ಷೆ ಬಾಲಿಕಾ ಸೂರ್ಯವಂಶಿ, ಬಿಆರ್ಪಿ ಶಶಿಕಾಂತ ಬಿಡವೆ, ಇನಿಲಕುಮಾರ ಹೊಳಸಮುದ್ರೆ, ಯಶವಂತ ಬಿರಾದಾರ, ಧನರಾಜ ಭವರಾ, ಬಸವರಾಜ ಪಾಟೀಲ್, ಮಹಾದೇವ ಮಡಿವಾಳ, ಸಂತೋಷ ಸುಲಾಕೆ, ಶ್ರೀರಂಗ ಪರಿಹಾರ, ಶಿವರಾಜ ಪಾಟೀಲ್ ಭಾಗವಹಿಸಿದ್ದರು.