ಶಿಕ್ಷಣ, ದಾಸೋಹಕ್ಕೆ ಹುಕ್ಕೇರಿಮಠ ನಾಡಿನಲ್ಲಿ ಹೆಸರಾಗಿದ್ದು, ಜ್ಞಾನದ ಜೊತೆಗೆ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದ ಹುಕ್ಕೇರಿಮಠ ಶಿಕ್ಷಣ ಸಂಸ್ಥೆಯ ಕಾರ್ಯ ಸ್ಮರಣೀಯವಾಗಿದೆ. ಇಂತಹ ಸಂಸ್ಥೆಯಲ್ಲಿ ಕಲಿತು ಉನ್ನತ ಹಂತಕ್ಕೆ ಬೆಳೆದಿರುವ ಹಳೆಯ ವಿದ್ಯಾರ್ಥಿಗಳೇ ಈ ಸಂಸ್ಥೆಗೆ ಶಕ್ತಿಯಾಗಿದ್ದಾರೆ ಎಂದು ಹಾವೇರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಹಾವೇರಿ ಪಟ್ಟಣದ ಹುಕ್ಕೇರಿಮಠ ಶಿವಾನುಭವ ಮಂಟಪದಲ್ಲಿ ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಹುಕ್ಕೇರಿಮಠದಲ್ಲಿ ನಾನು ಕೇವಲ ಒಂದು ವರ್ಷ ಅಧ್ಯಯನ ಮಾಡಿದ್ದರೂ ಸಹ ಇಲ್ಲಿನ ಶಿಸ್ತು, ಪ್ರೀತಿ, ಸಹಕಾರ ಮನೋಭಾವ ಎಲ್ಲ ವಿದ್ಯಾರ್ಥಿಗಳನ್ನು ಒಂದೇ ಕುಟುಂಬದ ಸದಸ್ಯರನ್ನಾಗಿ ಮಾಡಿದ್ದವು. ಒಂದು ಶಿಕ್ಷಣ ಸಂಸ್ಥೆಯನ್ನು 50 ವರ್ಷಗಳ ಕಾಲ ನಡೆಸಿಕೊಂಡು ಬರುವುದು ಸುಲಭವಲ್ಲ. ಯಾವುದೇ ಅಪೇಕ್ಷೆ ಇಲ್ಲದೆ ಇಂತಹ ಕಾರ್ಯವನ್ನು ಹುಕ್ಕೇರಿಮಠ ಶಿಕ್ಷಣ ಸಂಸ್ಥೆ ಮಾಡುವ ಮೂಲಕ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ಮಾಡಿದೆ. ಇಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಸಂಸ್ಥೆಯ ಬೆನ್ನಲುಬಾಗಿ ನಿಂತುಕೊಂಡು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ” ಎಂದರು.
“ಯೋಜನೆಗಳನ್ನು ಸರಿಯಾಗಿ ಮಾಡಿಕೊಂಡರೆ ಕಾರ್ಯಕ್ರಮ ಯಶಸ್ವಿಯಾಗಿ ಮಾಡಲು ಸಾಧ್ಯವಾಗುತ್ತದೆ. ಹಾಗೆ ಕಾರ್ಯಕ್ರಮದ ಸವಿನೆನಪಿಗಾಗಿ ಮಠದಲ್ಲಿ ಹಾಸ್ಟೆಲ್ ನಿರ್ಮಿಸಿದರೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ” ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ಅವರು ಸಲಹೆ ನೀಡಿದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, “ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುತ್ತಿರುವ ಹುಕ್ಕೇರಿಮಠದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಸುವರ್ಣ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದ್ದು, ಹಳೆಯ ವಿದ್ಯಾರ್ಥಿಗಳ ಸಹಕಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೊದಲು ದಿನಾಂಕ ನಿಗದಿ ಮಾಡುವುದು ಅಗತ್ಯವಿದೆ. ಮುಂಬರುವ ಜನವರಿ ತಿಂಗಳಲ್ಲಿ ಹುಕ್ಕೇರಿಮಠದ ಜಾತ್ರೆ ನಡೆಯಲಿದ್ದು, ಜಾತ್ರೆಯ ಸಂದರ್ಭದಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜಿಸಿದರೆ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.
ನಗರದ ಹುಕ್ಕೇರಿಮಠದ ಶಿವಬಸವೇಶ್ವರ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು 2025 ಜನೆವರಿ 5ರಂದು ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಇದಕ್ಕೆ ಪೂರಕವಾಗಿ ಸಭೆಯಲ್ಲಿ ಸುವರ್ಣ ಮಹೋತ್ಸವ ಆಚರಣಾ ಸಮಿತಿ ರಚಿಸಲಾಯಿತು. ಸಮಿತಿಯ ಮಹಾಪೋಷಕರಾಗಿ ಸದಾಶಿವ ಸ್ವಾಮೀಜಿ, ಗೌರವಾಧ್ಯಕ್ಷರಾಗಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಕಾರ್ಯಾಧ್ಯಕ್ಷರಾಗಿ ಮಹೇಶ ಚಿನ್ನಿಕಟ್ಟಿ, ಅಧ್ಯಕ್ಷರಾಗಿ ಅಶೋಕ ಹಾವನೂರ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಶಿವಲಿಂಗೇಶ್ವರ ಸಂಸ್ಥೆಯ ಚೇರ್ಮನ್ ಎಸ್.ಎಸ್.ಮುಷ್ಠಿ, ಬಿಜಿಗಲ್ ವಿರಕ್ತಮಠದ ಶಿವಲಿಂಗ ಸ್ವಾಮೀಜಿ, ಪ್ರಮುಖರಾದ ಪಿ.ಡಿ.ಶಿರೂರ, ಆರ್.ಎಸ್.ಮಾಗನೂರ, ವೀರಣ್ಣ ವಳಸಂಗದ, ಮಲ್ಲಿಕಾರ್ಜುನ ಸಾತೇನಹಳ್ಳಿ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಇದ್ದರು.