ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಕುಪ್ಪಣ್ಣ ಉದ್ಯಾನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ “ದಸರಾ ಫಲಪುಷ್ಪ ಪ್ರದರ್ಶನ”ದಲ್ಲಿ ಅತ್ಯುತ್ತಮ ಉದ್ಯಾನವನ ವಿನ್ಯಾಸಗೊಳಿಸಿದ ವಿಜೇತರಿಗೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಪ್ರಶಸ್ತಿ ವಿತರಿಸಿದರು.
ಸಂಗೀತ, ಸಾಹಿತ್ಯ, ಕಲೆ, ಕೃಷಿ, ಹೈನುಗಾರಿಗೆ, ಕ್ರೀಡೆ, ಮಹಿಳೆಯರ ಕೊಡುಗೆಗಳು, ಜನರ ಜೀವನ ಕ್ರಮ ಹಾಗೂ ಮೌಲ್ಯಗಳು ಈ ಬಾರಿಯ ದಸರಾ ಸಾಂಸ್ಕೃತಿಕ ಚಳುವಳಿಯಾಗಿ ನಡೆದಿದೆ ಎಂದರು.

ರಾಜ್ಯದಲ್ಲಿ ಉತ್ತಮವಾಗಿ ಮಳೆಯಾದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ದೂರಿ ದಸರಾ ಆಚರಿಸುವಂತೆ ತಿಳಿಸಿದ್ದರು. ಅದರಂತೆ ಜನರಲ್ಲಿ ಸಹೋದರತೆ, ಸೌಹಾರ್ದತೆ, ಘನತೆಯ ಬದುಕನ್ನು ಬಿತ್ತುವಂತೆ ಈ ಬಾರಿಯ ದಸರಾವನ್ನು ಆಚರಿಸಲಾಗಿದೆ. ಧರ್ಮ, ಜಾತಿಗೂ ಮೀರಿದ ಸಮಾಜವನ್ನು ನಿರ್ಮಿಸುವ ಸಂದೇಶ ಸಾರಲಾಗಿದೆ ಎಂದು ಅಭಿಪ್ರಾಯಿಸಿದರು.
ಈ ಬಾರಿಯ ದಸರಾ ವಿಭಿನ್ನವಾಗಿತ್ತು ಎಂಬ ಉತ್ತಮ ಅಭಿಪ್ರಾಯ ಜನರಿಂದ ಕೇಳಿಬಂದಿದೆ. ದಸರಾ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿದ್ದು, ಜನರು ಕೂಡ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಜನರ ದಸರಾವಾಗಿ ಪರಿಣಮಿಸಿದೆ. ದಸರಾ ಯಶಸ್ಸಿಗೆ ಮೈಸೂರಿನ ಎಲ್ಲಾ ಜನತೆ ಕಾರಣೀಭೂತರಾಗಿದ್ದಾರೆ. ಈ ಯಶಸ್ವಿ ದಸರಾ ಆಚರಣೆ ಮೂಲಕ ರಾಜ್ಯ ಸರ್ಕಾರಕ್ಕೆ ಸಾಂಸ್ಕೃತಿಕ ಕಿರೀಟ ಇಟ್ಟಂತಾಗಿದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯಿಂದ ಫಲಪುಷ್ಟ ಪ್ರದರ್ಶನವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ. ವಿವಿಧ ಪುಷ್ಪಗಳು ಹಾಗೂ ಸಿರಿಧಾನ್ಯಗಳಿಂದ ಬಗೆಬಗೆಯ ಕಲಾ ಪ್ರಕಾರಗಳನ್ನು ರಚಿಸಿ ಜನರ ಮೆಚ್ಚುಗೆ ಗಳಿಸಲಾಗಿದೆ. ಸುಮಾರು 5 ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿರುವುದು ಸಂತೋಷದ ವಿಚಾರ ಎಂದರು.
ಗಾಜಿನಮನೆಯಲ್ಲಿ ಸಿದ್ಧಪಡಿಸಿರುವ `ಪ್ರಜಾಪ್ರಭುತ್ವ ನಡೆದು ಬಂದ ದಾರಿ’ ಎಂಬ ಪರಿಕಲ್ಪನೆಯ ವಿನ್ಯಾಸವು ಆರನೇ ಶತಮಾನದಿಂದ ಇಲ್ಲಿಯವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿತ್ತು ಎಂಬುದನ್ನು ಹೇಳುತ್ತದೆ. ಬುದ್ಧರ ಕಾಲ, ಅನುಭವ ಮಂಟಪ, ಸ್ವಾತಂತ್ರ್ಯ ಚಳುವಳಿ, ಸಂವಿಧಾನ, ಸಂಸತ್ ಭವನ ಎಲ್ಲವನ್ನು ಸುಂದರವಾಗಿ ವಿನ್ಯಾಸಗೊಳಿಸುವ ಮೂಲಕ ಪ್ರಪಂಚಕ್ಕೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ವಿವರಿಸಲಾಗಿದೆ ಎಂದು ಪ್ರಶಂಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕೆ ಎಂ ಗಾಯಿತ್ರಿ, ತೋಟಗಾರಿಕೆ ಉಪನಿರ್ದೇಶಕ ಮಂಜುನಾಥ್, ಹಿರಿಯ ಸಹಾಯಕ ನಿರ್ದೇಶಕ ಹಬೀಬಾ ನಿಶಾತ್ ಸೇರಿದಂತೆ ಹಲವರು ಇದ್ದರು.
