“ರಾಜ್ಯದ ಚುನಾವಣೆ ಬಗ್ಗೆ ಸಮೀಕ್ಷೆಗಳು ಏನೇ ಹೇಳಲಿ, ನಾವು 115 ಸ್ಥಾನ ಪಡೆದು, ಬಿಜೆಪಿ ಸರ್ಕಾರ ರಚಿಸುತ್ತೇವೆ” ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶಿಕಾರಿಪುರದಲ್ಲಿ ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, “ಮತದಾನದ ನಂತರ ರಾಜ್ಯದ ಉದ್ದಗಲಕ್ಕೂ ನಮ್ಮ ಎಲ್ಲ ಮುಖಂಡರೊಂದಿಗೆ ಮಾತನಾಡಿದ್ದೇನೆ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ಆ ಆಧಾರದ ಮೇಲೆ ಹೇಳುವೆ; ನಾವು ಸರ್ಕಾರ ರಚಿಸುತ್ತೇವೆ” ಎಂದರು.
“ನಾನು ಪ್ರಚಾರಕ್ಕೆ ಹೋದಂತಹ ವೇಳೆ ಜನ ಬೆಂಬಲ ಸಿಕ್ಕಿದೆ. ಎಸ್ಸಿ, ಎಸ್ಟಿಗೆ ಕೊಟ್ಟಂತಹ ಮೀಸಲಾತಿ ಗಮನಿಸಿದಾಗ ಈ ಸಮೀಕ್ಷೆಗಳು ಸುಳ್ಳಾಗಲಿವೆ. ನಿಶ್ಚಿತವಾಗಿ 115ಕ್ಕೂ ಹೆಚ್ಚು ಸ್ಥಾನ ಪಡೆದು ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡುತ್ತೇವೆ” ಎಂದರು.
“ಕಾಂಗ್ರೆಸ್ ಏನೇ ಹೇಳಲಿ ಅದಕ್ಕೆ ನಾನು ಟೀಕೆ ಮಾಡುವುದಿಲ್ಲ. ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಕೊಟ್ಟಿರುವುದು ನಿಜ. ಒಂದೆರೆಡು ಸಮೀಕ್ಷೆಗಳು ನಮ್ಮ ಪರವಾಗಿಯೂ ಇವೆ. ಮತ ಎಣಿಕೆ ನಂತರ ಸಂಜೆ ಅಥವಾ ಮರುದಿನ ಬೆಳಗ್ಗೆ ಮುಂದೇನು ಮಾಡಬೇಕು ಎನ್ನುವ ಬಗ್ಗೆ ಚರ್ಚಿಸುತ್ತೇವೆ” ಎಂದು ತಿಳಿಸಿದರು.
“ನಮ್ಮನ್ನು ಬಿಟ್ಟು ಸರ್ಕಾರ ಮಾಡಲು ಆಗುವುದಿಲ್ಲ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆಚ್ಡಿಕೆ ಹಾಗೆ ಹೇಳುವುದರಲ್ಲಿ ತಪ್ಪು ಏನಿಲ್ಲ. ನೋಡೋಣ, ಫಲಿತಾಂಶ ಬಂದ ನಂತರ ತೀರ್ಮಾನ ಮಾಡೋಣ” ಎಂದರು.