ಕಾವೇರಿ ನದಿಯನ್ನು ದೈವವಾಗಿ ಆರಾಧಿಸುವ ಬಲು ಅಪರೂಪದ ಆಚರಣೆಯಾಗಿದ್ದು, ತಲಕಾವೇರಿ ತೀರ್ಥೋದ್ಭವ ಜಾತ್ರಾ ಮಹೋತ್ಸವ ಆರಂಭವಾಗಿದೆ. ಕರ್ನಾಟಕ ನಾಡು, ನುಡಿಗೆ ಎಷ್ಟು ಮಹತ್ವ ಕೊಟ್ಟಿದಿಯೋ ಅದಷ್ಟೇ ಮಹತ್ವ ಕಾವೇರಿಗೂ ಕೊಟ್ಟಿದೆ. ಕಾವೇರಿ ನದಿಯಷ್ಟೇ ಅಲ್ಲ ಅದುವೇ ಜೀವನದಿ.
ಬಹುತ್ವದ ಸಮಾಜದಲ್ಲಿ ಜಾತಿ ಜಾತಿಗಳ ತೊಗಲನ್ನು ಹೊದ್ದಿ, ಧರ್ಮಗಳ ಅಡ್ಡವಿಟ್ಟು, ಮೌಢ್ಯಗಳ ಸರಪಳಿ ಹೊಸೆದು,
ನನ್ನವರ ನಮ್ಮವರ ನಾವೇ ನಮ್ಮ ಜೊತೆ ಕಾಣಲಾಗದ ಮಡಿವಂತಿಕೆ ಕಟ್ಟಿಟ್ಟ ಸಮಾಜದಲ್ಲಿ ಅರ್ಥಹೀನ ಆರಾಧನೆಗಳದ್ದೇ ಮೇಲುಗೈ. ನನ್ನವರು ಅಲ್ಲಿ ಹೋಗುವಂತಿಲ್ಲ, ಅಲ್ಲಿಯವರು ನಮ್ಮಲ್ಲಿ ಬರುವಂತಿಲ್ಲ. ಇಂತಹ ಸಂದಿಗ್ಧತೆಯ ನಡುವೆ ಒಂದು ನದಿ ದೈವತ್ವ ಪಡೆದು, ಜೀವನದಿಯಾಗಿದ್ದು ನಿಜಕ್ಕೂ ವಿಶೇಷ. ಅದುವೇ ʼಕಾವೇರಿʼ.
ಕಾವೇರಿ ನದಿಯಾಗಿ ಹರಿದರೂ ಕೊಡವರಿಗೆ ಆರಾಧ್ಯ ದೈವ. ಕೊಡಗರ ಪಾಲಿನ ಮನೆ ಮಗಳು, ಕುಲದೇವತೆ. ಕೊಡಗಿನ ಜನರ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿ ಭಿನ್ನವಾದದ್ದು. ಅದರಲ್ಲೂ ಸ್ಥಳೀಯ ಆರಾಧನೆಗೆ, ಪ್ರಕೃತಿಗೆ ಮೈ ಒಗ್ಗಿಸಿಕೊಂಡವರು.

ತಳದ ದೈವಾರಾಧನೆ ಕೃಷಿ ಚಟುವಟಿಕೆಯಲ್ಲಿ ಹೆಚ್ಚಾಗಿದ್ದು, ಕಾವೇರಿ ತೀರ್ಥೋದ್ಭವ ಅಕ್ಷರಶಃ ಹಬ್ಬದ ವಾತಾವರಣ. ಕಾಲ್ನಡಿಗೆಯಲ್ಲಿ ತೆರಳಿ ಕಾವೇರಮ್ಮ ತೀರ್ಥ ಸ್ವರೂಪಿಣಿಯಾಗಿ ಕಾಣಿಸಿಕೊಳ್ಳುವ ಕ್ಷಣವನ್ನು ಕಣ್ತುಂಬಿಕೊಳ್ಳುವುದು ಎಲ್ಲಿಲ್ಲದ ಹರುಷ.
ಕೊಡಗಿನ ಜನ ಕಾವೇರಿ ತೀರ್ಥೋದ್ಭವದ ನೀರನ್ನು ತೀರ್ಥ ರೂಪದಲ್ಲಿ ವರ್ಷಪೂರ್ತಿ ಮನೆಯಲ್ಲಿಟ್ಟು ಆರಾಧಿಸುವ ಪರಿಪಾಟಲು. ಕಾವೇರಿ ತೀರ್ಥಕ್ಕಾಗಿ ಮುಗಿ ಬಿದ್ದು, ಮುಡಿ ಕೊಟ್ಟು, ಕಾವೇರಿ ಮಜ್ಜನದಲ್ಲಿ ಮಿಂದೆದ್ದು ಸಂಭ್ರಮಿಸುವ ಸಮಯವೇ ತಲಕಾವೇರಿ ತೀರ್ಥೋದ್ಭವ. ದಕ್ಷಿಣ ಭಾರತದ ಪ್ರಮುಖ ನದಿ ಕಾವೇರಿ. ಬ್ರಹ್ಮಗಿರಿ ತಪ್ಪಲಿನಲ್ಲಿ ಗುಪ್ತಗಾಮಿನಿಯಾಗಿ ಹರಿದು ರುದ್ರ ರಮಣೀಯವಾದ ತಲಕಾವೇರಿ ಉಗಮಸ್ಥಾನವಾಗಿದೆ.

ಕೊಡಗು ಜಿಲ್ಲೆ, ಮಡಿಕೇರಿಯಿಂದ 46 ಕಿಮೀ ದೂರದಲ್ಲಿದೆ ಕೊಡವರ ಕುಲದೇವತೆ. ಪ್ರತಿವರ್ಷ ಅಕ್ಟೋಬರ್ ತಿಂಗಳ ತುಲಾ ಸಂಕ್ರಮಣದಂದು ಬ್ರಹ್ಮ ಕುಂಡಿಕೆಯಲ್ಲಿ ನೀರು ಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ ಕಾವೇರಿ. ಸರಿಯಾದ ದಿನ, ಸರಿಯಾದ ಸಮಯಕ್ಕೆ ಕಾವೇರಿ ತೀರ್ಥರೂಪಿಯಾಗಿ ಕಾಣಿಸಿಕೊಳ್ಳುವುದು ವಾಡಿಕೆ.
ತಲಕಾವೇರಿಯಲ್ಲಿ ಉಗಮವಾಗಿ ಮತ್ತೆ ಗುಪ್ತಗಾಮಿನಿಯಾಗಿ ಹರಿದು ಮುಂದೆ ನದಿಯಾಗಿ ಕಾಣಬಹುದು. ಸರಿ ಸುಮಾರು 765 ಕಿಮೀ ಉದ್ದ ಹರಿದು ಪೂಂಪುಹಾರ್ ಬಳಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಸುಮಾರು 300 ಅಡಿ ಎತ್ತರದ ಬ್ರಹ್ಮಗಿರಿ, ಪ್ರಕೃತಿ ಆರಾಧಕರಿಗಂತೂ ಸ್ವರ್ಗ. ಮಂಜಿನ ಮಸುಕಲ್ಲಿ, ಚುಮು ಚುಮು ಚಳಿಯಲ್ಲಿ ದೊಪ್ಪನೆ ಬೀಳುವ ಮಳೆಯ ನಡುವೆ, ಮೈ ನವಿರೇಳಿಸುವ ಗಾಳಿಯ ಸ್ಪರ್ಶ ಎಂತಹವರನ್ನೂ ಮೈಮರೆಯುವಂತೆ ಮಾಡುತ್ತದೆ.

ಬ್ರಹ್ಮಗಿರಿ ಬೆಟ್ಟದ ತುದಿಯಿಂದ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಬೆಟ್ಟ, ನೀಲಗಿರಿ ಬೆಟ್ಟ, ಉತ್ತರದ ಕುದುರೆಮುಖ ಶಿಖರ, ಪಶ್ಚಿಮ ಘಟ್ಟದ ಕರಾವಳಿ ರಸ್ತೆಗಳು ಹಾವುಗಳಂತೆ ಕಂಡು, ಅರಬ್ಬಿ ಸಮುದ್ರವನ್ನು ಕಾಣಬಹುದು. ಒಂದು ತಿಂಗಳು ನಡೆಯುವ ಜಾತ್ರಾ ಮಹೋತ್ಸವ ಆರಂಭವಾಗಿದೆ. ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ನಿನ್ನೆ ಅಂದರೆ ಗುರುವಾರ ಬೆಳಿಗ್ಗೆ 7:40ಕ್ಕೆ ತುಲಾ ಲಗ್ನದಲ್ಲಿ ತುಲಾ ಸಂಕ್ರಮಣ ಸಮಯದಲ್ಲಿ ತೀರ್ಥೋದ್ಭವವಾಗಿದೆ.
ಕೊಡಗು ಕರ್ನಾಟಕದ ಕಾಶ್ಮೀರ. ಮಂಜಿನ ನಗರಿ. ಅದರಲ್ಲೂ ಪ್ರವಾಸಿಗರನ್ನು ತನ್ನೆಡೆ ಸೆಳೆಯುವ ಪ್ರವಾಸಿ ಕೇಂದ್ರ. ಅದೇ ಕಾವೇರಿ ಕೊಡಗಿನಲ್ಲಿ ಹುಟ್ಟಿ ಹಾಸನ, ಮಂಡ್ಯ ಜಿಲ್ಲೆಗಳ ಮೂಲಕ ಹರಿದು ಮಂಡ್ಯದ ರೈತರಿಗೆ ಬೆನ್ನೆಲುಬಾಗಿ.
ಮೈಸೂರು, ಬೆಂಗಳೂರಿಗೆ ಕುಡಿಯುವ ನೀರಿನ ಆಸರೆಯಾಗಿದ್ದಾಳೆ.

ಕಾವೇರಿ ರಾಜ್ಯ ಅಷ್ಟೇ ಅಲ್ಲ. ರಾಷ್ಟ್ರ ಮಟ್ಟದಲ್ಲಿ ಕೂಡ ಎಂದಿಗೂ ಚರ್ಚೆಗೆ ಗ್ರಾಸ. ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಕಾವೇರಿಗಾಗಿ ಹೋರಾಟಗಳು ಅಂದಿನಿಂದ ಇಂದಿನವರೆಗೂ ನಡೆಯುತ್ತಲೇ ಇವೆ. ಕೇರಳದ ಕಾಲಡಿಯಲ್ಲಿ ಕಾವೇರಿ ಹರಿದರೂ ಅಲ್ಲಿಯವರ ನೆಮ್ಮದಿಗೆ ಭಂಗ ತಂದಿಲ್ಲ. ಕೊಡಗಿನ ಜನಕ್ಕೆ ನದಿಯಾಗಿ ಕಂಡಿಲ್ಲ. ಕಾವೇರಿ ಕೊಡಗಿನ ಜನರ ಪಾಲಿಗೆ ಎದೆ ಹಾಲಿಗೂ ಮಿಗಿಲು. ತೀರ್ಥರೂಪಿ, ಕುಲದೇವತೆ, ಕಾವೇರಿ ಬಗ್ಗೆ ಹೇಳಲು ಪದಗಳೇ ಸಾಲದು.
ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಇಂದಿನಿಂದ ಆರಂಭಗೊಂಡಿದ್ದು, ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಸಾವಿರಾರು ಜನ ನೆರೆದಿದ್ದಾರೆ. ಕೊಡಗಿನ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಆರತಿ ಹಿಡಿದು ಆಗಮಿಸಿದ್ದು, ಕಾವೇರಿ ಮಾತೆಗೆ ಆರತಿ ಬೆಳಗಿ ಸ್ವಾಗತಿಸಿದ್ದಾರೆ. ಕಾವೇರಿ ತವರಿನಲ್ಲಿ, ಕುಲದೇವತೆ ಕಾವೇರಿ ಜಾತ್ರೆ ಕಳೆಕಟ್ಟಿದೆ. ಭಾಗಮಂಡಲ-ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ? ಮಲೆನಾಡಿನಲ್ಲಿ ಆಚರಿಸುವ ʼಭೂಮಿ ಹುಣ್ಣಿಮೆʼಯ ಮಹತ್ವವೇನು?
ತೀರ್ಥೋದ್ಭವದ ಹಿನ್ನೆಲೆ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ಸಾಗರೋಪಾದಿಯಲ್ಲಿ ಭಕ್ತಾಧಿಗಳು ಹರಿದು ಬರುತ್ತಿದ್ದಾರೆ. ಇದಕ್ಕಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಸಿದ್ಧತೆಗಳು ಪೂರ್ಣಗೊಂಡಿವೆ. ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಲಿದ್ದು, ಭಾಗಮಂಡಲದಿಂದ ತಲಕಾವೇರಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ.
ಕೊಡಗಿನ ಎಲ್ಲ ತಾಲೂಕು ಕೇಂದ್ರಗಳಿಂದ ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಬರುವುದರಿಂದ, ಭಾಗಮಂಡಲದಿಂದ ತಲಕಾವೇರಿಯವರೆಗೆ ವಿದ್ಯುತ್ ದೀಪಗಳನ್ನು ಹಾಕಲಾಗಿದೆ. ತೀರ್ಥವನ್ನು ಪ್ಲಾಸ್ಟಿಕ್ ಕೊಡ, ಕ್ಯಾನ್, ಬಾಟಲಿಗಳಲ್ಲಿ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ. ಜಿಲ್ಲಾಡಳಿತ ಅಗತ್ಯ ವ್ಯವಸ್ಥೆ ಮಾಡಿದ್ದು, ಬರುವ ಜನರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ಭದ್ರತೆ ಒದಗಿಸಿದೆ.
