ಮಹಾರಾಷ್ಟ್ರ ಚುನಾವಣಾ ಕಣ ಗರಿಗೆದರಿದೆ. ಎಲ್ಲ ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿವೆ. ಟಿಕೆಟ್ಗಾಗಿ ಹಲವಾರು ಅಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ. ಟಿಕೆಟ್ ಸಿಗದೆ ಅಥವಾ ಟಿಕೆಟ್ಗಾಗಿ ಪಕ್ಷಾಂತರ ಪರ್ವವೂ ಇನ್ನೇನು ಅರಂಭವಾಗುವ ಸಾಧ್ಯತೆಗಳಿವೆ. ಇದೆಲ್ಲದರ ನಡುವೆ, ಪ್ರಮುಖ ಬೆಳವಣಿಗೆಯಲ್ಲಿ ಓವೈಸಿ ಅವರ ಎಐಎಂಐಎಂ ಪಕ್ಷದ ಮಹಾರಾಷ್ಟ್ರ ಕಾರ್ಯಾಧ್ಯಕ್ಷ ಅಬ್ದುಲ್ ಗಫಾರ್ ಖಾದ್ರಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ‘ಪಕ್ಷದ ಉನ್ನತ ನಾಯಕರು ಬಿಜೆಪಿಯಿಂದ ಹಣ ಪಡೆದು ಅಜೆಂಡಾಗಳನ್ನು ರೂಪಿಸುತ್ತಿದ್ದಾರೆ. ಬಿಜೆಪಿ ಗೆಲುವಿಗೆ ನೆರವಾಗಲು ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಸಂಸದ ಅಸಾದುದ್ದೀನ್ ಓವೈಸಿ ಅವರು ಎಐಎಂಐಎಂ ಪಕ್ಷವನ್ನು ಆರಂಭಿಸಿ ಸಮಯದಿಂದಲೂ, ಎಐಎಂಐಎಂ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಲಾಗಿತ್ತು. ಮುಸ್ಲಿಂ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳ ಮತಗಳನ್ನು ವಿಭಜಿಸಿ ಬಿಜೆಪಿ ಗೆಲುವಿನ ಅವಕಾಶ ಮಾಡಿಕೊಡಲು ಎಐಎಂಐಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ. ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪಗಳಿದ್ದವು. ಇದೀಗ, ಅದೇ ಪಕ್ಷದಲ್ಲಿ ಕಾರ್ಯಾಧ್ಯಕ್ಷರಾಗಿದ್ದ ಗಫಾರ್ ಖಾದ್ರಿ ಅವರು ಅದೇ ಆರೋಪ ಮಾಡಿ, ಪಕ್ಷ ತೊರೆದಿದೆ. ಅದರೊಂದಿಗೆ, ಎಐಎಂಐಎಂ ಪಕ್ಷವು ಬಿಜೆಪಿಯ ಬಿ-ಟೀಮ್ ಆಗಿ ಕೆಲಸ ಮಾಡಿದೆ ಮತ್ತು ಮಾಡುತ್ತಿದೆ ಎಂಬುದು ಬಹಿರಂಗವಾಗಿದೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಎಐಎಂಐಎಂ ಪಕ್ಷದ ಅಭ್ಯರ್ಥಿಯಾಗಿ ಎರಡು ಬಾರಿ ಸ್ಪರ್ಧಿಸಿದ್ದ ಗಫಾರ್ ಖಾದ್ರಿ, ಕಳೆದ ವಾರ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದರು. ಅಕ್ಟೋಬರ್ 8ರಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಖಾದ್ರಿ, ತಮ್ಮ ದಶಕದ ರಾಜಕೀಯ ಪಯಣ, ಪಕ್ಷಕ್ಕಾಗಿ ತಾವು ಮಾಡಿರುವ ಪ್ರಯತ್ನ, ಪ್ರಸ್ತುತ ಸ್ಥಿತಿಗತಿಗಳ ಕುರಿತು ಮಾತನಾಡಿದ್ದರು. “ಓವೈಸಿ ಅವರು ಮಹಾರಾಷ್ಟ್ರದ ಚುನಾವಣೆಗೆ ಐದು ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಆದರೆ, ಅದರಲ್ಲಿ ನನ್ನ ಹೆಸರಿಲ್ಲ. ಇದು ನನ್ನ ಪ್ರಾಮಾಣಿಕ ಕೆಲಸಗಳಿಗೆ ಕೊಟ್ಟ ಹೊಡೆತವಾಗಿದೆ” ಎಂದು ಹೇಳಿದ್ದರು.
“2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಸಮಾಜವಾದಿ ಪಕ್ಷವು ಹಲವಾರು ಕ್ಷೇತ್ರಗಳಲ್ಲಿ AIMIM ಅನ್ನು ಬೆಂಬಲಿಸಿತು. ಆದರೂ, ಸಂಭಾಜಿನಗರ ಪೂರ್ವ ಕ್ಷೇತ್ರದಲ್ಲಿ ನನ್ನ ವಿರುದ್ಧ ಸಮಾಜವಾದಿ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆ ಅಭ್ಯರ್ಥಿಯು 5,500ಕ್ಕೂ ಅಧಿಕ ಮತಗಳನ್ನು ಪಡೆದು ನಾನು ಸೋಲುವಂತೆ ಮಾಡಿದರು. ನನ್ನನ್ನು ಸೋಲಿಸುವಲ್ಲಿ ನಮ್ಮದೇ ಪಕ್ಷದ (ಎಐಎಂಐಎಂ) ನಾಯಕರ ಕೈವಾಡವಿತ್ತು. ಈಗ, ಟಿಕೆಟ್ ಕೊಡದೆ ನನ್ನನ್ನು ಮೂಲೆಗುಂಪು ಮಾಡುತ್ತಿದ್ದಾರೆ” ಎಂದು ಕ್ವಾದ್ರಿ ಆರೋಪಿಸಿದ್ದರು.
ಈ ವರದಿ ಓದಿದ್ದೀರಾ?: ಪಾತಕಿ ಲಾರೆನ್ಸ್ ಗ್ಯಾಂಗ್ ಜೊತೆ ಬಿಜೆಪಿ ನಂಟು?
ಅಂದಹಾಗೆ, ಖಾದ್ರಿ ಅವರು ಎಐಎಂಐಎಂ ಪಕ್ಷದ ಕೆಲವು ನಡೆಗಳನ್ನು ಖಂಡಿಸುತ್ತಿದ್ದರು. ಪಕ್ಷದ ಸೈದ್ಧಾಂತಿಕ ನಿಲುವುಗಳ ಬಗ್ಗೆ ಪ್ರಶ್ನೆ ಎತ್ತುತ್ತಿದ್ದರು. ಆ ಕಾರಣಕ್ಕಾಗಿಯೇ 2019ರ ಚುನಾವಣೆಯಲ್ಲಿ ಅವರನ್ನು ಸೋಲಿಸುವ ತಂತ್ರಗಳು ನಡೆದಿದ್ದವು ಎಂದು ಆರೋಪಿಸಲಾಗಿದೆ. ಇದೀಗ, ಅವರು ಪಕ್ಷವನ್ನೇ ತೊರೆದಿದ್ದಾರೆ.
ಗಮನಾರ್ಹವಾಗಿ, ಓವೈಸಿ ಅವರ ಎಐಎಂಐಎಂ ಪಕ್ಷವು ಎಲ್ಲ ರಾಜ್ಯಗಳ ಚುನಾವಣೆಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರ ರೂಪಿಸುತ್ತದೆ. ಎಲ್ಲ ರಾಜ್ಯಗಳಲ್ಲಿಯೂ ಸ್ಪರ್ಧಿಸುತ್ತದೆ. ತನಗೆ ನೆಲೆಯೇ ಇಲ್ಲದ ಕ್ಷೇತ್ರಗಳಲ್ಲಿಯೂ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ. ಓವೈಸಿ ಅವರು ಭಾರೀ ಪ್ರಚಾರಗಳನ್ನೂ ನಡೆಸುತ್ತಾರೆ. ಓವೈಸಿ ಪ್ರಚಾರ ನಡೆಸುವ ಹಲವಾರು ಕ್ಷೇತ್ರಗಳು ಬಿಜೆಪಿ ಗೆಲುವಿಗೆ ತೊಡಕಾಗುವ ಕ್ಷೇತ್ರಗಳೇ ಆಗಿರುತ್ತವೆ. ಅಂತಹ ಕ್ಷೇತ್ರಗಳಲ್ಲಿ ಓವೈಸಿ ಪ್ರಚಾರದಿಂದ ಮುಸ್ಲಿಂ ಮತಗಳು ವಿಭಜನೆಯಾಗಿ, ಬಿಜೆಪಿ ಗೆಲುವಿಗೆ ಅವಕಾಶ ದೊರೆಯುತ್ತದೆ ಎಂಬ ಆರೋಪಗಳಿವೆ. ಅದೇ ಆರೋಪವನ್ನು ಖಾದ್ರಿ ಅವರೂ ಮಾಡಿದ್ದಾರೆ.