ಕೊಡಗು ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗಿದ್ದು, ಹಾರಂಗಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಹಾಗೂ ಕಾವೇರಿ ಸಂಕ್ರಮಣ ಸಮಯದಲ್ಲಿ ಶಾಸಕ ಡಾ ಮಂತರ್ ಗೌಡ ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರ ಶಾಸಕ ಎ ಮಂಜು, ವಿಧಾನಪರಿಷತ್ ಸದಸ್ಯ ಎಂ ಪಿ ಸುಜಾ ಕುಶಾಲಪ್ಪ ಸೇರಿದಂತೆ ಹಲವರು ಹಾರಂಗಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಭಾಗಿನ ಅರ್ಪಿಸಿದರು.
ಶಾಸಕ ಮಂತರ್ ಗೌಡ ಮಾತನಾಡಿ, “ಹಾರಂಗಿ ಎಡದಂಡೆ ಮುಖ್ಯ ನಾಲೆ ಸಂಪರ್ಕಿಸುವ 6.87 ಕಿಮೀನಿಂದ 14.75 ಕಿಮೀವರೆಗೆ ಕಾಂಕ್ರೀಟಿಕರಣ ಮಾಡಲು ಸರ್ಕಾರದಿಂದ ₹72 ಕೋಟಿ ಬಿಡುಗಡೆಯಾಗಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, ತಾಂತ್ರಿಕ ಬಿಡ್ಗೆ ಅನುಮೋದನೆ ದೊರೆತಿದೆ. ಜನವರಿ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ” ಎಂದು ಮಾಹಿತಿ ನೀಡಿದರು.
“ಹಾರಂಗಿ ಅಚ್ಚುಕಟ್ಟು ಪ್ರದೇಶ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಪರಿಸರ ಸಂರಕ್ಷಣೆ ಮಾಡಿದಲ್ಲಿ ಕಾವೇರಿ ನದಿಯನ್ನು ಉಳಿಸಲುಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ತುಂಗಭದ್ರಾ ಎಡದಂಡೆ ನಾಲೆಯ ಜಮೀನುಗಳಿಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯ
ತಲಕಾವೇರಿ ತುಲಾ ಸಂಕ್ರಮಣ ಸಮಯದಲ್ಲಿ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಯನ್ನು ಪೂಜಿಸುವ ಮೂಲಕ ನಾಡಿಗೆ ಹಾಗೂ ಕೊಡಗಿಗೆ ಒಳಿತಾಗಲೆಂದು ಪ್ರಾರ್ಥಿಸಿರುವುದಾಗಿ ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಹಾರಂಗಿ ನೀರು ಬಳಕೆದಾರರ ಸಹಕಾರ ಮಹಾಮಂಡಲದ ಅಧ್ಯಕ್ಷ ಚೌಡೇಗೌಡ, ಅಧೀಕ್ಷಕ ಎಂಜಿನಿಯರ್ ರಘುಪತಿ, ಹಾರಂಗಿ ಜಲಾಶಯದ ಇಇ ಐ ಕೆ ಪುಟ್ಟಸ್ವಾಮಿ, ತಹಶೀಲ್ದಾರ್ ಕಿರಣ್ ಗೌರಯ್ಯ, ಸಹಾಯಕ ಎಂಜಿನಿಯರ್ ಕಿರಣ್ ದೇವಯ್ಯ, ಸಿದ್ದರಾಜು, ಸೌಮ್ಯ, ಸಂಧ್ಯಾ, ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕು ಘಟಕದ ಅಧ್ಯಕ್ಷ ವಿ ಪಿ ಶಶಿಧರ, ಕೂಡುಮಂಗಳೂರು ಗ್ರಾ ಪಂ ಅಧ್ಯಕ್ಷ ಭಾಸ್ಕರ ನಾಯ್ಕ್, ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಂಜಿನಿಯರ್ಗಳು ಇದ್ದರು.