ಗೌರಿ ಹಂತಕರಿಗೆ ಸನ್ಮಾನ ಮಾಡಿದ್ದು, ಜತೆಗೆ ಚುನಾವಣೆಗಳಲ್ಲಿ ಪಕ್ಷಗಳು ಪ್ರಮುಖ ಜವಾಬ್ದಾರಿ ನೀಡುತ್ತಿರುವುದನ್ನು ಖಂಡಿಸಿ ಶಿವಮೊಗ್ಗದಲ್ಲಿ ಗೌರಿ ಸ್ಮಾರಕ ಟ್ರಸ್ಟ್ ಮತ್ತು ಗೌರಿ ಬಳಗದಿಂದ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಪ್ರಮುಖರು, “ಗೌರಿ ಹಂತಕರನ್ನು ಸನ್ಮಾನ ಮಾಡಿದವರನ್ನು ಶಿಕ್ಷೆಗೊಳಪಡಿಸಬೇಕು. ಅಲ್ಲದೆ ಗೌರಿ ಹಂತಕರ ಜಾಮೀನು ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.

“ಗೌರಿ ಹಂತಕರಿಗೆ ಶಿಕ್ಷೆಯಾಗಬೇಕೆಂದು ದೇಶ, ವಿದೇಶದಲ್ಲಿ ಆಗ್ರಹ ಕೇಳಿಬಂದಿತ್ತು. ಬಂಧಿತರ ಪೈಕಿ ಇಬ್ಬರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಪೈಕಿ ಒಬ್ಬನಿಗೆ ಸನ್ಮಾನ ನಡೆದಿದೆ. ಮತ್ತೊಬ್ಬನಿಗೆ ಚುನಾವಣೆ ಉಸ್ತುವಾರಿ ವಹಿಸಲಾಗಿದೆ. ಕರ್ನಾಟಕದಲ್ಲಿ ವೈಚಾರಿಕ ಭಿನ್ನಾಭಿಪ್ರಾಯವಿತ್ತು. ಆದರೆ ಈಗ ಒಬ್ಬನಿಗೆ ಸನ್ಮಾನ ಮಾಡಿ ಮತ್ತಷ್ಟು ಕೊಲೆಗಳಿಗೆ ಪ್ರಚೋದನೆ ನೀಡಿದಂತಾಗಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಪ್ರಗತಿಪರ ಚಿಂತಕ ಕೆ ಎಲ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಚಿಂತಕ ಚಂದ್ರೇಗೌಡ ಮಾತನಾಡಿ, “ಸಂಚು ರೂಪಿಸಿ ಗೌರಿಯ ಹತ್ಯೆ ಮಾಡಲಾಯಿತು. ಕೊಲೆ ಆರೋಪಿಗಳಿಗೆ ಸನ್ಮಾನ ಮಾಡುವುದು ಸರಿಯಲ್ಲ. ಪ್ರಪಂಚದಲ್ಲಿ ಎಲ್ಲೂ ನಡೆಯದ ಕೃತ್ಯವಿದು. ಗೌರಿಯನ್ನು ಕೊಂದಿರಬಹುದು. ಆದರೆ ಆಕೆಯ ಧ್ವನಿ ಅಡಗಿಸಲು ಸಾಧ್ಯವಿಲ್ಲ” ಎಂದರು.

“ನಾವು ಅಹಿಂಸೆ, ಗಾಂಧಿ, ಗೌರಿಯನ್ನು ಪ್ರೀತಿಸುತ್ತೇವೆ. ನಮ್ಮ ಹೋರಾಟವನ್ನು ಸರ್ಕಾರ ಗಮನಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಸಾಹಿತಿ ಉಷಾ ಒತ್ತಾಯಿಸಿದರು.

“ಆರೋಪಿಗಳು ನಿರ್ದೋಷಿಗಳೆಂದು ಬಿಡುಗಡೆಯಾಗಿರುವುದಲ್ಲ. ಐದಾರು ವರ್ಷ ಅವರಿಗೆ ಜಾಮೀನು ದೊರೆತಿರಲಿಲ್ಲ. ಮುಖ್ಯ ಸಾಕ್ಷಿಗಳ ವಿಚಾರಣೆ ಮುಗಿದ ಹಿನ್ನಲೆ ನ್ಯಾಯಾಲಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಆದರೆ ಇಂತಹವರಿಗೆ ಸನ್ಮಾನ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ಸಿದ್ದರಾಮಯ್ಯ ಸರ್ಕಾರ ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು” ವಕೀಲ ಕೆ ಪಿ ಶ್ರೀಪಾಲ್ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ; ಓರ್ವನ ಬಂಧನ: ಇನ್ನುಳಿದವರಿಗಾಗಿ ಹುಡುಕಾಟ
ಪ್ರಮುಖರಾದ ಶೃಂಗೇಶ್, ಟೆಲೆಕ್ಸ್ ರವಿಕುಮಾರ್, ಶಿವಕುಮಾರ್, ಅನಿಲ್, ಹಾಲೇಶಪ್ಪ ರಾಘವೇಂದ್ರ ಸೇರಿದಂತೆ ಹಲವರು ಇದ್ದರು.