ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, “ಯೋಗೇಶ್ವರ್ ಮೊದಲಿಂದಲೂ ಎಲ್ಲ ಪಕ್ಷಗಳ ಜೊತೆ ಲಿಂಕ್ ಇಟ್ಟುಕೊಂಂಡವರು. ಕಾಟಾಚಾರಕ್ಕೆ ಬಿಜೆಪಿ ಜೊತೆ ಇದ್ದರು ಅನ್ನಿಸುತ್ತೆ” ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಸಿ ಪಿ ಯೋಗೇಶ್ವರ್ ಅವರು ಬಿಜೆಪಿಯ ಕಟ್ಟಾಳು ಅಲ್ಲ. ಆದರೂ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ನಮ್ಮ ನಂಬಿಕೆಗೆ ಅಪಚಾರ ಮಾಡಿ ಕಾಂಗ್ರೆಸ್ ಸೇರಿದ್ದಾರೆ” ಎಂದು ಟೀಕಿಸಿದರು.
“ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ. ಅವರು ಕಾಂಗ್ರೆಸ್ ಸೇರಿದ್ದು, ನಮ್ಮ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಆಗಲ್ಲ. ಪಕ್ಷ ತೊರೆದು ಬಹಳಷ್ಟು ಜನ ಹೋಗಿದ್ದಾರೆ. ಲಕ್ಷಣ್ ಸವದಿ ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ಮಂತ್ರಿ ಮಾಡಿದ್ದಾರಾ? ಜಗದೀಶ್ ಶೆಟ್ಟರ್ ಅವರು ಹೋಗದಿದ್ದರು, ಯಾವ ಸ್ಥಾನ ಕೊಟ್ಟಿದ್ದರು” ಎಂದು ಪ್ರಶ್ನಿಸಿದರು.
“ಸಿ ಪಿ ಯೋಗೇಶ್ವರ್ ಗುರುತು ಸೈಕಲ್. ಬಿಎಸ್ಪಿ ಎಲ್ಲ ಮುಗಿಸಿಕೊಂಡು ನಮ್ಮ ಪಕ್ಷಕ್ಕೆ ಬಂದವರು. ಅವರು ಸೈದ್ಧಾಂತಿಕವಾಗಿ ನಮ್ಮ ಪಕ್ಷದಲ್ಲಿ ಇದ್ದವರಲ್ಲ. ಚನ್ನಪಟ್ಟಣದಲ್ಲಿ ಬಿಜೆಪಿ ಮತ ಅಲ್ಲೇ ಇರುತ್ತೆ. ನಾನು, ಪ್ರಲ್ಹಾದ್ ಜೋಶಿ ಅವರು ಜೆಡಿಎಸ್ಗೆ ಟಿಕೆಟ್ ಅಂತ ಅವರಿಗೆ ಹೇಳಿದ್ದೇವೆ. ಕುಮಾರಸ್ವಾಮಿ ಅವರು ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಿ ಎಂದು ಹೇಳಿದ್ದರು. ಆದರೆ, ಸಿ ಪಿ ಯೋಗೇಶ್ವರ್ ಒಪ್ಪಲಿಲ್ಲ” ಎಂದು ವಿವರಿಸಿದರು.
“ಯೋಗೇಶ್ವರ್ ನಡೆ ಪಕ್ಷಕ್ಕೆ ದ್ರೋಹ ಬಗೆದಂತೆ. ರಾಜ್ಯದ ಎಲ್ಲ ಬಿಜೆಪಿ ನಾಯಕರು ಅವರ ಪರವಾಗಿ ಇದ್ದೆವು. ಬಿಜೆಪಿ ಚಿಹ್ನೆ, ಜೆಡಿಎಸ್ ಚಿಹ್ನೆ ಅಂತಲ್ಲ. ಎನ್ಡಿಎ ಗೆಲ್ಲುವುದು ಮುಖ್ಯ. ಎನ್ಡಿಎನಲ್ಲಿ ಅವರಿಗೆ ಸೀನಿಯಾರಿಟಿ ಇತ್ತು. ಈಗ ಹೋಗಿ ಲಾಸ್ಟ್ನಲ್ಲಿ ಕೂತಿದ್ದಾರೆ” ಎಂದು ಹರಿಹಾಯ್ದರು.