ಒಳಮೀಸಲಾತಿಗೆ ಜಾತಿಗಣತಿ ಬೇಕು ಎನ್ನುವ ಸಿಎಂ ಸಿದ್ದರಾಮಯ್ಯ ಬಜೆಟ್ ಅನುದಾನ, ನಿಗಮ, ನೇಮಕಾತಿ, ಇತರ ಸೌಲಭ್ಯಗಳನ್ನು ಒದಗಿಸಲು ಜಾತಿಗಣತಿ ಬೇಕು ಎಂದು ಯಾಕೆ ಕೇಳಲಿಲ್ಲ ಎಂದು ಮಾಜಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಮಾದಿಗ ಮತ್ತು ಛಲವಾದಿ ಸಮುದಾಯಗಳ ಒಕ್ಕೂಟದಿಂದ ಒಳಮೀಸಲಾತಿ ಅನುಷ್ಠಾನಕ್ಕಾಗಿ ಒಗ್ಗೂಡಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾದಿಗ ಮತ್ತು ಛಲವಾದಿ ಸಮುದಾಯಗಳಿಂದ ಒಳಮೀಸಲಾತಿ ಶೀಘ್ರಜಾರಿಗೆ ಒತ್ತಾಯಿಸಿ ಒಂದೇ ವೇದಿಕೆಯಲ್ಲಿ ದಾವಣಗೆರೆ ನಗರದ ಮಧ್ಯಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಬೃಹತ್ ಮಾಲಾರ್ಪಣೆ ಮಾಡುವ ಮೂಲಕ ಹೋರಾಟ ಪ್ರಾರಂಭಿಸಿದ ಹೋರಾಟಗಾರರು ಜಯದೇವಯ್ಯ ಸರ್ಕಲ್, ಅಶೋಕ ರಸ್ತೆ, ಗಾಂಧಿ ಸರ್ಕಲ್ ಮೂಲಕ ತೆರಳಿ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ರಾಜ್ಯ ಸರ್ಕಾರಕ್ಕೆ ಒಳಮಿಸಲಾತಿ ಅನುಷ್ಠಾನಕ್ಕಾಗಿ ಒತ್ತಾಯಿಸಿದರು.

ಒಳಮೀಸಲಾತಿ ಜನಾಂಗದ 30 ವರ್ಷಗಳ ಹೋರಾಟದ ಪ್ರತಿಫಲ. ದಿಕ್ಕು ತಪ್ಪಿಸುವ ಅನೇಕ ರಾಜಕೀಯ ಪಕ್ಷಗಳ, ಸರ್ಕಾರಗಳ ದೊಂಬರಾಟದಿಂದ ಇಲ್ಲಿಯವರೆಗೆ ದಕ್ಕಿಲ್ಲ. ಪಂಜಾಬಿನಲ್ಲಿ 29 ವರ್ಷ, ಹರಿಯಾಣದಲ್ಲಿ 12 ವರ್ಷ ಒಳಮೀಸಲಾತಿಯನ್ನು ಅಲ್ಲಿನ ಶೋಷಿತರು ಅನುಭವಿಸಿದ್ದಾರೆ. ಉಷಾ ಮೇಹ್ರ ಆಯೋಗ ದೇಶಕ್ಕೆ ಒಳಮೀಸಲಾತಿ ಅವಶ್ಯಕತೆ ಇದೆ, ಕೆಲವು ಜಾತಿಗಳು ಮೀಸಲಾತಿಯಿಂದ ವಂಚಿತವಾಗಿವೆ ಎಂದು ವರದಿಕೊಟ್ಟಿತ್ತು. ಅದನ್ನು ತಿರಸ್ಕರಿಸಿದವರು ಯಾರು ಸಿದ್ದರಾಮಯ್ಯನವರೇ ಎಂದು ನಾರಾಯಣ ಸ್ವಾಮಿ ಪ್ರಶ್ನಿಸಿದರು.
ಸಾವಿರಾರು ವರ್ಷಗಳಿಂದ ನಮ್ಮನು ತುಳಿದಿದ್ದಾರೆ, ಒಳಮೀಸಲಾತಿ ಬೇಕೆಂದು ನಾವ್ಯಾರೂ ಕಲ್ಲು ಹೊಡೆದಿಲ್ಲ, ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಸಂತೋಷ್ ಹೆಗಡೆ ನೇತೃತ್ವದ ಐದು ನ್ಯಾಯಮೂರ್ತಿಗಳ ಪೀಠ ಕೊಟ್ಟ ತೀರ್ಪು ಯಾವುದೇ ಕಾರಣಕ್ಕೂ ಒಪ್ಪುವ ತೀರ್ಪಲ್ಲ. ಪಂಜಾಬ್ ವರ್ಸಸ್ ದೇವೆಂದ್ರನಾಥ್ ತೀರ್ಪಿನಲ್ಲಿ ಅಸ್ಪ್ರಶ್ಯ ಜಾತಿಗಳಿಗೆ ಸಮರ್ಪಕವಾಗಿ ನ್ಯಾಯ ಸಿಕ್ಕಿಲ್ಲ ಎಂದರೆ ವರದಿಯನ್ನು ನೀವು ಸಿದ್ದರಾಮಯ್ಯ ವಿರೋಧಿಸುತ್ತೀರಿ. ಏಳು ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂವಿಧಾನ ಪೀಠ ತೀರ್ಪು ನೀಡಿದರೂ ತಿದ್ದುಪಡಿ ಬೇಕು ಎಂದು ಮತ್ತೆ ಹೇಳುತ್ತಾರೆ. ರಾಜ್ಯದಲ್ಲಿ ಮಾದಿಗ ಮತ್ತು ಛಲವಾದಿಗಳಿಗೆ ನ್ಯಾಯ ಕೊಡದೇ ಹೋದರೆ ರಾಜಕಾರಣಿಗಳನ್ನು ನಮ್ಮ ಮನೆ ಹತ್ತಿರ ಬಿಟ್ಟು ಕೊಳ್ಳುವುದಿಲ್ಲ. ಸಿದ್ದರಾಮಯ್ಯ ಒಳಮೀಸಲಾತಿಗೆ ಜಾತಿ ಗಣತಿ ನಡೆಯಬೇಕು ಎಂದು ಕೇಳುತ್ತಾರೆ. ನಿಗಮಕ್ಕೆ, ಅನುದಾನ ನೀಡಲು ಜಾತಿ ಗಣತಿ ಬೇಕು ಎಂದು ಯಾಕೆ ಕೇಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೃತ್ತ ಡಿವೈಎಸ್ಪಿ ರುದ್ರಮುನಿ ಮಾತನಾಡಿ, ಈ ಹೋರಾಟದ ಉದ್ದೇಶ ಸುಪ್ರೀಂ ಕೋರ್ಟ್ ತೀರ್ಪನ್ನು ಕೂಡ ನಿರ್ಲಕ್ಷಿಸಿ ಅಸಡ್ಡೆ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿಗಾಗಿ ಒತ್ತಾಯಿಸಿ ಬಿಸಿ ಮುಟ್ಟಿಸುವ ಸಲುವಾಗಿದೆ. ಅಣ್ಣತಮ್ಮಂದಿರಂತಿರುವ ಛಲವಾದಿ ಮತ್ತು ಮಾದಿಗ ಸಮುದಾಯಗಳು ಒಗ್ಗೂಡಿ ಹೋರಾಟ ನಡೆಸುತ್ತಿವೆ. ಈ ತಕ್ಷಣ ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಸಂಚಾಲಕ ಮಲ್ಲೇಶ್ ಮಾತನಾಡಿ, ನಮ್ಮ ಹಕ್ಕುಗಳನ್ನು ನಾವು ರಕ್ಷಿಸಿಕೊಳ್ಳುವ ಸಲುವಾಗಿ ಈ ಹೋರಾಟವನ್ನು ಮಾಡುತ್ತಿದ್ದೇವೆ. ಒಳಮೀಸಲಾತಿ ನಮ್ಮ ಸಾಂವಿಧಾನಿಕ ಮತ್ತು ಸಾಮಾಜಿಕ ನ್ಯಾಯ. ಅದನ್ನು ಸರ್ಕಾರ ಸಂಪುಟದಲ್ಲಿ ಅನುಮೋದನೆ ಪಡೆದು ಶೀಘ್ರವೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ದಸಂಸ ರಾಜ್ಯ ಸಂಚಾಲಕ ಗುರುಮೂರ್ತಿ, ಡಾ. ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮೀಸಲಾತಿ ಕಲ್ಪಿಸಿದರು. ಅಂದಿನಿಂದಲೂ ಪರಿಶಿಷ್ಟ ಜಾತಿಯಲ್ಲಿನ ಬಲಾಢ್ಯ ಜಾತಿಗಳು ಅವಕಾಶಗಳನ್ನು ಬಾಚಿಕೊಂಡು ಅಸ್ಪ್ರಶ್ಯ ಜಾತಿಗಳಿಗೆ ಅವಕಾಶ ಸಿಗದೇ ಇನ್ನೂ ದುರ್ಬಲ, ಕೆಟ್ಟ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ದಸಂಸ , ಇತರ ಸಂಘಟನೆಗಳ ಹೋರಾಟಕ್ಕೆ ಮಣಿದ ಸರ್ಕಾರ 2004ರಲ್ಲಿ ಸದಾಶಿವ ಆಯೋಗ ರಚಿಸಿ ವರದಿ ಪಡೆದುಕೊಂಡಿದೆ. ಇದರನ್ವಯ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಮೇರೆಗೆ ಒಳಮೀಸಲಾತಿ ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿ 80 ದಿನ ಕಳೆದರೂ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲು ಮೀನಮೇಷ ಎಣಿಸುತ್ತಿದೆ. ಈ ಕೂಡಲೇ ಸರ್ಕಾರ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ. ಒಳಮೀಸಲಾತಿ ಜಾರಿಗೊಳಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತರ ವಿಶ್ವಾಸ ಗಳಿಸುತ್ತಾರೆ. ಹಾಗಾಗಿ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಚನ್ನಗಿರಿಯ ಕೃಷ್ಣಪ್ಪ ಮಾತನಾಡಿ , ಹರಿಯಾಣದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಒಂದೇ ದಿನದಲ್ಲಿ ಮೀಸಲಾದ ಒಳಮೀಸಲಾತಿ ಅನುಷ್ಠಾನಗೊಳಿಸಿದೆ. ನಾವು ಬಡವರ ಎನ್ನುವ ಸಿದ್ದರಾಮಯ್ಯನವರು ಮೀನಮೇಷ ಎಣಿಸುತ್ತಿದ್ದಾರೆ. ನೀವು ಒಳಮೀಸಲಾತಿ ಜಾರಿಗೆ ತಂದು ಛಲವಾದಿ ಮತ್ತು ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿದಲ್ಲಿ ಜನ ನಿಮ್ಮನ್ನು ನೆನಪಿಟ್ಟುಕೊಳ್ಳುತ್ತಾರೆ. ಇಲ್ಲವಾದಲ್ಲಿ ನಿಮಗೆ ತಕ್ಕ ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಮುಖಂಡ ಶ್ರೀನಿವಾಸ್ ಹೆಣ್ಣೂರು ಮಾತನಾಡಿ, ರಾಚಯ್ಯ ಬಸವಲಿಂಗಪ್ಪ 50 ವರ್ಷದ ಹಿಂದೆಯೇ ಒಳಮೀಸಲಾತಿ ಜಾರಿಗೆ ಮನವಿ ಸಲ್ಲಿಸಿದ್ದರು. ಕಳೆದ 30 ವರ್ಷಗಳಿಂದ ಹೋರಾಟ ಮಾಡಿದ್ದರ ಪ್ರತಿಫಲವಾಗಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಕೂಡಲೇ ರಾಜ್ಯ ಸರ್ಕಾರ ಜಾರಿಗೆ ತರಬೇಕು. 2016ರಲ್ಲಿ ಒಳಮೀಸಲಾತಿಯನ್ನು ನಿರ್ಲಕ್ಷಿಸಿ 2018ರಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ . ಅದೇ ರೀತಿ ಬಿಜೆಪಿಯೂ ನಿರ್ಲಕ್ಷಿಸಿ ಸೋತಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಸರ್ಕಾರದ ಸೌಲಭ್ಯ, ನೇಮಕಾತಿ ನಿಲ್ಲಿಸಿ ಒಳಮೀಸಲಾತಿ ಜಾರಿಗೆ ತರಬೇಕು. ಇಲ್ಲವಾದಲ್ಲಿ ನಿಮಗೆ ಮುಂದಿನ ದಿನಗಳಲ್ಲಿ ಮಾದಿಗ ಮತ್ತು ಛಲವಾದಿ ಸಮುದಾಯಗಳು ಒಗ್ಗೂಡಿ ಬುದ್ಧಿ ಕಲಿಸುತ್ತಾರೆ ಎಂದು ತಿಳಿಸಿದರು.
ಮಾಜಿ ನಗರಸಭಾ ಸದಸ್ಯ ಹಾಲೇಶ್ ಮಾತನಾಡಿ, ಸಿದ್ದರಾಮಯ್ಯ ನಾವು ನಿಮ್ಮ ಆಸ್ತಿ ಕೇಳಲ್ಲ, ನಮ್ಮ ಹಕ್ಕು ಒಳಮೀಸಲಾತಿ, ಅದನ್ನು ಕೊಡಿ. ನಮ್ಮ ಜನಗಳು ಪದವಿ ಮುಗಿಸಿ ಕೂಲಿ ಕಾರ್ಮಿಕರಾಗಿದ್ದಾರೆ. ಮಾದಿಗ ಮತ್ತು ಛಲವಾದಿಗಳು ಎರಡು ಕೈಗಳಂತೆ ಅಣ್ಣ ತಮ್ಮಂದಿರು. ಒಳಮೀಸಲಾತಿ ಜಾರಿ ಮಾಡಿದರೆ ಜನ ನಿಮ್ಮನ್ನು ಸ್ಮರಿಸುತ್ತಾರೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ಕೆಡಬ್ಲ್ಯೂಜೆ ವಾಯ್ಸ್ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ
ಪ್ರತಿಭಟನೆಯಲ್ಲಿ ಮಾದಿಗ ಮತ್ತು ಛಲವಾದಿ ಒಳಮೀಸಲಾತಿ ಹೋರಾಟ ಒಕ್ಕೂಟದ ಸಮಿತಿಯ ರವಿನಾರಾಯಣ್, ರುದ್ರಮುನಿ, ಮಲ್ಲಿಕಾರ್ಜುನ ಹಲಸಂಗಿ, ಹನುಮಂತಪ್ಪ, ಮಲ್ಲಿಕಾರ್ಜುನ್, ಜಯಪ್ರಕಾಶ್, ಬಸವರಾಜ್, ಮಲ್ಲೇಶ್, ಎಚ್ ನಿಜಗುಣ, ದಲಿತ ಸಂಘರ್ಷ ಸಮಿತಿಯ ಮಂಜುನಾಥ ಕುಂದವಾಡ, ರವಿಕುಮಾರ್, ಮಹಾಂತೇಶ್, ಲಿಂಗರಾಜ್, ಮಲ್ಲೇಶ್, ಹನುಮಂತಪ್ಪ,
ಸಿ ಬಸವರಾಜ್, ವಿವಿಧ ದಲಿತ ಸಂಘಟನೆಗಳ ನೂರಾರು ಸದಸ್ಯರು ಸೇರಿದಂತೆ ಮಾದಿಗ ಸಮುದಾಯದ ಮತ್ತು ಛಲವಾದಿ ಸಮುದಾಯದ ಜನ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

