ಮೈಸೂರು ದಸರಾ ವಿಶ್ವವಿಖ್ಯಾತ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪಾರಂಪರಿಕ ಹಾಗೂ ಐತಿಹಾಸಿಕ ದಸರಾ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ವೈಭವೋಪೇತವಾಗಿ ನಡೆದುಕೊಂಡು ಬಂದಿದೆ. ಈ ಬಾರಿ ದಸರಾಗೆ ದಾಖಲೆ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಹಲವು ನ್ಯೂನ್ಯತೆಗಳು, ವೈಫಲ್ಯಗಳಿಂದಾಗಿ ಜನರ ದಸರಾವಾಗಲು ಸಾಧ್ಯವಾಗಿಲ್ಲ,
ತರಾತುರಿಯ ಆಯೋಜನೆಯೇ ಇದಕ್ಕೆಲ್ಲಾ ಕಾರಣ. ಕೂಡಲೇ ದಸರಾ ಪ್ರಾಧಿಕಾರ ರಚನೆ ಮಾಡಬೇಕು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ.
ಮೈಸೂರು ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ 40-50 ಸಾವಿರ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಆರೂವರೆ ಸಾವಿರ ಪಾವತಿಸಿ ಗೋಲ್ಡ್ ಕಾರ್ಡ್ ಪಡೆದವರು, ಭಾರೀ ದರದ ಟಿಕೆಟ್ ಕೊಂಡುಕೊಂಡವರು, ಉಚಿತ ಪಾಸ್ಗಳು ದಕ್ಕಿದವರಷ್ಟೇ ಅರಮನೆ ಆವರಣಕ್ಕೆ ಪ್ರವೇಶ ಸಿಗುತ್ತದೆ. ಈ ವ್ಯವಸ್ಥೆಯಲ್ಲಿನ ಗೊಂದಲಗಳಿಗಂತೂ ಇನ್ನೂ ಪರಿಹಾರ ಸಿಕ್ಕಿಲ್ಲ. ಟಿಕೆಟ್, ಗೋಲ್ಡ್ ಕಾರ್ಡ್, ಪಾಸ್ ಇದ್ದವರಿಗೂ ಆಸನ ಸಿಗುವುದಿಲ್ಲ” ಎಂದರು.
“ಸ್ಥಳಾವಕಾಶಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಪಾಸ್ ವಿತರಣೆಯಾಗಿರುತ್ತದೆ. ಇಂತಹ ಹತ್ತಾರು ದೂರುಗಳು ಪ್ರತಿವರ್ಷ ಕೇಳಿ ಬರುತ್ತವೆ. ಇನ್ನು ಸಾಮಾನ್ಯರಿಗೆ ಅರಮನೆ ಆವರಣದಲ್ಲಿ ದಸರಾ ನೋಡುವುದು ಕಷ್ಟ. ಮೆರವಣಿಗೆ ಸಾಗುವ ಮಾರ್ಗದಲ್ಲಾದರೂ ಕುಳಿತು ನೆಮ್ಮದಿಯಿಂದ ಜಂಬೂಸವಾರಿ ನೋಡಲಾಗದು. ಅದರಲ್ಲೂ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವಿಶೇಷ ಚೇತನರು ನೂಕುನುಗ್ಗಲಲ್ಲಿ ಬೆಳಗ್ಗೆಯಿಂದ ಕಾದು ನಿಲ್ಲುತ್ತಾರೆ. ಕುಡಿಯಲು ನೀರಿಲ್ಲ, ಶೌಚಾಲಯಕ್ಕೂ ಹೋಗಲಾಗದೆ ಜಂಬೂ ಸವಾರಿ ಸಾಗುವವರೆಗೂ ನಿಂತಲ್ಲೇ ನಿಂತಿರುತ್ತಾರೆ” ಎಂದರು.
“ದಸರಾ ಅಂಬಾರಿ ಹತ್ತಿರ ಬರುತ್ತಿದ್ದಂತೆ ನೂಕುನುಗ್ಗಲು ಹೆಚ್ಚಾಗುತ್ತದೆ. ಒಬ್ಬರಮೇಲೊಬ್ಬರು ಬೀಳುತ್ತಾರೆ. ಇದರಿಂದ ಹೆಣ್ಣುಮಕ್ಕಳು ನರಕಯಾತನೆ ಅನುಭವಿಸುತ್ತಾರೆ. ಜನದಟ್ಟಣೆಯಲ್ಲಿ ಸಿಲುಕಿ ಮಕ್ಕಳು ನರಳುತ್ತಾರೆ. ಕಳ್ಳತನ, ಜಗಳ, ಹೊಡೆದಾಟಗಳಾಗುತ್ತವೆ. ಆ ವೇಳೆ ರಸ್ತೆ ಭಾಗದಲ್ಲಿರುವ ಪೊಲೀಸರೂ ಅಸಹಾಯಕರಾಗಿರುತ್ತಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಮುಗಿಯದ ಇಂದ್ರಾಳಿ ರೈಲ್ವೆ ಸೇತುವೆ ರಸ್ತೆ ಸಮಸ್ಯೆ; ಪ್ರತಿಭಟನೆಗೆ ಮುಂದಾದ ನಾಗರಿಕರು
“ನಮ್ಮ ನಾಡಹಬ್ಬ, ಪಾರಂಪರಿಕ ದಸರಾ ಮಹಾ ಉತ್ಸವದ ವೈಭವವನ್ನು ಕಾಪಾಡಿಕೊಳ್ಳುವುದರ ಜತೆಗೆ ಜನರಿಗೆ ಅಹಿತವಾಗುವ ವೈಫಲ್ಯಗಳನ್ನು ಸರಿಪಡಿಸಿಕೊಂಡು ಒಂದಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಾಗ ಮಾತ್ರ ಜನರಾ ದಸರಾವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸಿ, ಈಗಿನಿಂದಲೇ ಪರಿಹಾರ ಕ್ರಮಗಳಿಗೆ ಮುಂದಾಗಬೇಕು” ಎಂದರು.
“ಜಿಲ್ಲಾಧಿಕಾರಿ, ಜಿ ಪಂ, ಮುಡಾ, ಪಾಲಿಕೆ, ಜಿಲ್ಲಾಸಚಿವರು, ಪೊಲೀಸ್ ಸೇರಿದಂತೆ ದಸರಾದಲ್ಲಿ ಜವಾಬ್ದಾರಿ ನಿರ್ವಹಿಸುವ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಮಿಟಿ ರಚಿಸಿಕೊಂಡು ಈ ದಿನದಿಂದಲೇ ಸಿದ್ಧತೆ ನಡೆಸಬೇಕು. ದಸರಾವನ್ನು ಇನ್ನೂ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ, ಎಲ್ಲರೂ ಮೆಚ್ಚುವ ರೀತಿಯಲ್ಲಿ ಆಚರಿಸುವಂತಾಗಬೇಕು. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ದಸರಾ ಪ್ರಾಧಿಕಾರ ರಚಿಸಬೇಕು” ಎಂದು ಆಗ್ರಹಿಸಿದರು.