ಪೊಲೀಸ್ ಕಸ್ಟಡಿಯಲ್ಲೇ ದರೋಡೆಕೋರ, ಕೊಲೆ ಪಾತಕಿ ಲಾರೆನ್ಸ್ ಬಿಷ್ಣೋಯ್ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾನೆ. ಅಲ್ಲದೆ, ಆತನನ್ನು ಸನ್ಮಾನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆ, ಇಬ್ಬರು ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಗಳು (ಡಿಎಸ್ಪಿ) ಸೇರಿದಂತೆ ಏಳು ಮಂದಿ ಪೊಲೀಸ್ ಅಧಿಕಾರಿಗಳನ್ನು ಪಂಜಾಬ್ ಸರ್ಕಾರ ಅಮಾನತುಗೊಳಿಸಿದೆ.
ಪಂಜಾಬ್ ಗೃಹ ಕಾರ್ಯದರ್ಶಿ ಗುರುಕಿರತ್ ಕಿರ್ಪಾಲ್ ಸಿಂಗ್ ಅವರು ಹೊರಡಿಸಿದ ಆದೇಶದ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದಾನೆ. ಆ ಸಂದರ್ಶನವು ಸುದ್ದಿ ವಾಹಿನಿಯಲ್ಲಿ ಪ್ರಸಾರ ಮಾಡಿರುವುದನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಪತ್ತೆಹಚ್ಚಿದ್ದು, ಅಧಿಕಾರಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.
ಲಾರೆನ್ಸ್ ಸಿಐಎ ವಶದಲ್ಲಿದ್ದಾಗ 2022ರ ಸೆಪ್ಟೆಂಬರ್ 3 ಮತ್ತು 4ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದರ್ಶನ ನೀಡಿದ್ಧಾನೆ ಎಂದು ವರದಿಯಾಗಿದೆ.
ಲಾರೆನ್ಸ್ ವಿರುದ್ದ ಪ್ರಕರಣಗಳನ್ನು ವಿಶೇಷ ಡಿಜಿಪಿ (ಮಾನವ ಹಕ್ಕುಗಳು) ಪ್ರಬೋಧ್ ಕುಮಾರ್ ನೇತೃತ್ವದ ಎಸ್ಐಟಿ ತನಿಖೆ ನಡೆಸುತ್ತಿದೆ. ಪ್ರಕರಣದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಮತ್ತು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಡಿಎಸ್ಪಿಗಳಾದ ಗುರ್ಶರ್ ಸಿಂಗ್ ಸಂಧು ಮತ್ತು ಸಮ್ಮರ್ ವನೀತ್ ಹಾಗೂ ಸಬ್ ಇನ್ಸ್ಪೆಕ್ಟರ್ಗಳಾದ ರೀನಾ, ಜಗತ್ಪಾಲ್ ಜಂಗು, ಶಗಂಜಿತ್ ಸಿಂಗ್ ಹಾಗೂ ಸಹಾಯಕ ಸಬ್ ಇನ್ಸ್ಪೆಕ್ಟರ್ ಮುಖ್ತಿಯಾರ್ ಸಿಂಗ್ ಮತ್ತು ಹೆಡ್ ಕಾನ್ಸ್ಟೆಬಲ್ ಓಂ ಪ್ರಕಾಶ್ ಅವರು ಅಮಾನತಾದ ಅಧಿಕಾರಿಗಳು.
ಲಾರೆನ್ಸ್ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಅಲ್ಲದೆ, ಇತ್ತೀಚೆಗೆ ಮುಂಬೈನಲ್ಲಿ ನಡೆದ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದಲ್ಲಿ ಈತನೇ ಸಂಚುಕೋರ ಎಂದು ಶಂಕಿಸಲಾಗಿದೆ. ಈತನ ವಿರುದ್ಧ ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಕಳೆದ ವರ್ಷ ಕೆನಡಾದಲ್ಲಿ ನಡೆದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯನ್ನು ಲಾರೆನ್ಸ್ ಗ್ಯಾಂಗ್ ಮಾಡಿದ್ದು, ಇದಕ್ಕೆ ಭಾರತ ಸರ್ಕಾರ ಕುಮ್ಮಕ್ಕು ನೀಡಿದೆ. ಲಾರೆನ್ಸ್ ಭಾರತದ ಸರ್ಕಾರ ಏಜೆಂಟ್ ಆಗಿದ್ದಾನೆ ಎಂದು ಕೆನಡಾ ಸರ್ಕಾರ ಆರೋಪಿಸಿದೆ.
ಕಳೆದ ವರ್ಷ ಮಾರ್ಚ್ನಲ್ಲಿ ಲಾರೆನ್ಸ್ನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಆ ವೇಳೆ, ಲಾರೆನ್ಸ್ನ ಎರಡು ಸಂದರ್ಶನಗಳನ್ನು ಟಿವಿ ಚಾನೆಲ್ ಪ್ರಸಾರ ಮಾಡಿತ್ತು. ಪೊಲೀಸರು ಲಾರೆನ್ಸ್ನೊಂದಿಗೆ ಕೈಜೋಡಿಸಿದ್ದಾರೆ ಎಂದು ಮೃತ ಗಾಯಕ ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಸಿಧು ಆರೋಪಿಸಿದ್ದರು. ನಂತರ, ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಲಾಗಿತ್ತು. ತನಿಖೆ ಆರಂಭಿಸಿದ ಎಸ್ಐಟಿ ಸಿಧು ಅವರ ಆರೋಪ ನಿಜವೆಂದು ಕಂಡುಹಿಡಿದಿದೆ.