ಶಿವಮೊಗ್ಗ ನಗರದ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಹೆಚ್ ಸಿ ಯೋಗೇಶ್ರವರು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ನಗರದಲ್ಲಿ ನಿರ್ಮಾಣವಾಗಿದ್ದ ನೂತನ ಪೊಲೀಸ್ ಭವನ ಉದ್ಘಾಟನೆಗೆ ಗೃಹ ಸಚಿವರು ಆಗಮಿಸಿದ್ದ ವೇಳೆ ಮನವಿ ಸಲ್ಲಸಿ ಮಾತನಾಡಿ, “ಶಿವಮೊಗ್ಗ ನಗರವು ಬೃಹದಾಕಾರವಾಗಿ ಬೆಳೆದಿದೆ. ಜನಸಂಖ್ಯೆ ಕೂಡಾ ಅಧಿಕವಾಗಿದ್ದು, ಸುಮಾರು ನಾಲ್ಕು ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಪೊಲೀಸ್ ಇಲಾಖೆಯವರು ಹಾಗೂ ಅಧಿಕಾರಿಗಳು ಶಿವಮೊಗ್ಗ ನಗರದ ಸಾರ್ವಜನಿಕರೊಂದಿಗೆ ಸಹಕರಿಸುತ್ತ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲವು ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಮನವಿ ಮಾಡಿದರು.
“ಶಿವಮೊಗ್ಗದಲ್ಲಿ ಕಮಿಷನರ್ ಕಚೇರಿ ನಿರ್ಮಾಣ ಮಾಡಿಕೊಡಬೇಕು. ನಗರದ ಗೋಪಾಲ ಭಾಗದಲ್ಲಿ ಪೊಲೀಸ್ ಸ್ಟೇಷನ್ ನಿರ್ಮಾಣ ಮಾಡಿಕೊಡಬೇಕು. ಏರ್ಪೋರ್ಟ್ಗೆ ನಿರ್ದಿಷ್ಟ ಪೊಲೀಸ್ ಸ್ಟೇಷನ್ ನಿರ್ಮಾಣ ಮಾಡಬೇಕು. ಹೆಚ್ಚಿನ ವಾಹನ ದಟ್ಟಣೆಯಿರುವುದರಿಂದ ಗ್ರಾಮಾಂತರ ಭಾಗಕ್ಕೆ ಹಾಗೂ ನಗರ ಭಾಗದಲ್ಲಿ ಪ್ರತ್ಯೇಕವಾಗಿ ಮತ್ತೊಂದು ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣ ಮಾಡಿಕೊಡಬೇಕು. ಪೊಲೀಸ್ ಇಲಾಖೆಯವರ ಆರೋಗ್ಯ ದೃಷ್ಟಿಯಿಂದ ಪೊಲೀಸ್ ವ್ಯಾಯಾಮ ಶಾಲೆ ಹಾಗೂ ಕ್ರೀಡಾಂಗಣ ನಿರ್ಮಾಣ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವಕ್ಫ್ ಆಸ್ತಿಯ ಬಗ್ಗೆ ರೈತರಲ್ಲಿ ತಪ್ಪು ವದಂತಿ; ಆತಂಕಪಡುವ ಅವಶ್ಯಕತೆ ಇಲ್ಲ; ಜಿಲ್ಲಾಧಿಕಾರಿ ಸ್ಪಷ್ಟನೆ
ರಾಜ್ಯ ಭೋವಿ ನಿಗಮ ಮಂಡಳಿ ಅಧ್ಯಕ್ಷ ರವಿಕುಮಾರ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಎಸ್ ಶಿವಕುಮಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಪಾಷಾ, ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಶ್ವನಾಥ್ ಕಾಶಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ರಂಗೇಗೌಡ, ಚಿನ್ನಪ್ಪ ಸೇರಿದಂತೆ ಕಾರ್ಯಕರ್ತರು ಇದ್ದರು.