ಮರಕುಂಬಿ ಪ್ರಕರಣ | ಊರಿಗೆ ಊರೇ ನೀರವ ಮೌನ; ಮಾತನಾಡಲೂ ಹೆದರುತ್ತಿರುವ ಗ್ರಾಮಸ್ಥರು

Date:

Advertisements

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 98 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅವರೆಲ್ಲರೂ ಸೇರಿದಂತೆ ಗ್ರಾಮದ 101 ಮಂದಿ ಜೈಲು ಸೇರಿಸಿದ್ದಾರೆ. ಈಗ, ಇಡೀ ಊರಿಗೆ ಊರೇ ನೀರವ ಮೌನಕ್ಕೆ ಜಾರಿದ್ದು, ಯಾರೊಬ್ಬರೊಂದಿಗೂ ಮಾತನಾಡಲು ಭಯಪಡುತ್ತಿದ್ದಾರೆ. ಪ್ರತಿ ಬೀದಿಗಳಲ್ಲಿ ಮೌನ ಆವರಿಸಿದೆ. 10 ವರ್ಷಗಳ ಹಿಂದೆ ನಡೆದಿದ್ದ ಘಟನೆಗೆ ಈಗ ತೀರ್ಪು ಪ್ರಕಟವಾಗಿದ್ದು, ಬಚಾವಾದೆವೆಂದು ಭಾವಿಸಿದ್ದ ಅಪರಾಧಿಗಳು ದಂಗಾಗಿದ್ದಾರೆ. ಜೈಲು ಸೇರಿದ್ದಾರೆ.

ದಶಕದ ಮರಕುಂಬಿ ಗ್ರಾಮದಲ್ಲಿ ಜಾತಿ ಸಂಘರ್ಷ, ಅಸ್ಪೃಶ್ಯತೆ ಆಚರಣೆಯಿಂದ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಹ ಒಂದು ಪ್ರಕರಣ ನಡೆದಿತ್ತು. ಗ್ರಾಮದ ಅಸ್ಪೃಶ್ಯ ದಲಿತರು ʼನಾವೂ ಮನುಷ್ಯರು, ನಮಗೂ ಸಮಾನತೆಯಿಂದ ಬದುಕುವ ಹಕ್ಕು ಬೇಕು. ಚಹಾದಂಗಡಿ ಹಾಗೂ ಕ್ಷೌರದಂಗಡಿಯಲ್ಲಿ ಮುಕ್ತ ಅವಕಾಶಬೇಕುʼ ಎಂದು ತಮ್ಮನ್ನು ಕೀಳುದೃಷ್ಟಿಯಿಂದ ಕಾಣುವ ಇಂತಹ ಅನಿಷ್ಠ ಪದ್ಧತಿಯ ವಿರುದ್ಧ ದಲಿತರು ನ್ಯಾಯಯುತವಾಗಿ ಕೇಳಿದ್ದನ್ನೇ ಊರಿನ ಕೆಲವು ಪಟ್ಟಭದ್ರ ಜಾತಿಗ್ರಸ್ತರು, ಸವರ್ಣೀಯರಿಗೆ ಸಹಿಸಲಾಗಲಿಲ್ಲ. 2014ರಲ್ಲಿ ಸವರ್ಣೀಯರು ದಲಿತರ ಗುಡಿಸಲುಗಳಿಗೆ ಬೆಂಕಿಯಿಟ್ಟು ಅಮಾನುಷವಾಗಿ ವರ್ತಿಸಿ ಅಟ್ಟಹಾಸ ಮೆರೆದಿದ್ದರು.

ಮರಕುಂಬಿ ಗ್ರಾಮ 2 1

ಘಟನೆಗೂ ಮೊದಲು, ಕಳವು ಮಾಡಿದ್ದಾರೆಂದು ಸುಳ್ಳು ಆರೋಪ ಮಾಡಿ ಐದು ಮಂದಿ ದಲಿತ ಯುವಕರನ್ನು ಗ್ರಾಮದ ಸವರ್ಣೀಯರು ಕಂಬಕ್ಕೆ ಕಟ್ಟಿ ಥಳಿಸಿದ್ದರು. ಅಮಾನುಷ ಹಲ್ಲೆ ಮತ್ತು ತಮ್ಮ ಗುಡಿಸಲನ್ನು ಸುಟ್ಟು ಹಾಕಿ ದೌರ್ಜನ್ಯ ಎಸಗಿದ್ದ ಸವರ್ಣೀಯರ ಕ್ರೌರ್ಯದಿಂದ ಬೇಸತ್ತಿದ್ದ ದಲಿತ ಸಮುದಾಯವು ನ್ಯಾಯಾಲಯದ ಮೊರೆ ಹೋಗಿತ್ತು.

Advertisements

ಮೇಲ್ಜಾತಿಯವರು ನಮ್ಮ ಗುಡಿಸಲುಗಳಿಗೆ ಬೆಂಕಿಯಿಟ್ಟಿದ್ದಾರೆಂದು ಆರೋಪಿಸಿ 117 ಮಂದಿ ಸವರ್ಣೀಯರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿದ್ದ ಮುಖ್ಯ ಮುಖಂಡರೊಬ್ಬರು ಕಳೆದ ಒಂದು ವರ್ಷದ ಹಿಂದೆ ತೀರಿಕೊಂಡರು. ದೌರ್ಜನ್ಯಕ್ಕೆ ಒಳಗಾಗಿದ್ದವರಲ್ಲಿ ಒಬ್ಬ ಯುವಕ ಕೊಪ್ಪಳದ ರೈಲ್ವೇ ಹಳಿಯ ಬಳಿ ಶವವಾಗಿ ಬಿದ್ದಿದ್ದರು. 117 ಮಂದಿ ಆರೋಪಿಗಳಲ್ಲಿ 16 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಉಳಿದ 101 ಮಂದಿ ಆರೋಪಿಗಳನ್ನು ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ. ಅವರಲ್ಲಿ, 98 ಮಂದಿಗೆ ಜೀವಾವಧಿ ಶಿಕ್ಷೆ, ಐದು ಸಾವಿರ ದಂಡ ಹಾಗೂ ಮೂರು ಮಂದಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮರಕುಂಬಿ ಗ್ರಾಮ 1

ಮರಕುಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್ ಮರಕುಂಬಿ ಗ್ರಾಮಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಜನರ ಸ್ಥಿತಿಗತಿ, ಆಕ್ರೋಶ, ನೋವು, ಪ್ರಸ್ತುತತೆ ಇತ್ಯಾದಿಗಳು ಗಮನ ಸೆಳೆದಿವೆ. ದೌರ್ಜನ್ಯಕ್ಕೆ ಒಳಗಾಗಿದ್ದ ದಲಿತ ಸಮುದಾಯವನ್ನು ಭೇಟಿಯಾಗಿ ಮಾತನಾಡಿಸಿದಾಗ, ಅವರ ಮಾತುಗಳು ನಿಜವಾಗಿಯೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದವು.

“10 ವರ್ಷದ ಹಿಂದೆ ನಮ್ಮ ಗುಡಿಸಲುಗಳಿಗೆ ಮೇಲ್ಜಾತಿಯವರು ಬೆಂಕಿಯಿಟ್ಟರು. ಆದರೆ, ಅದೇ ಗುಡಿಸಲುಗಳು ಇದ್ದ ಜಾಗದಲ್ಲಿ ಈಗ ನಾವು ಮನೆಗಳನ್ನು ಕಟ್ಟಿಕೊಂಡಿದ್ದೇವೆ. ಈಗ ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು ಬದುಕುತ್ತಿದ್ದೇವೆ. ಕಾನೂನಿಗೆ ಯಾರೇ ಆಗಿರಲಿ ತಲೆಬಾಗಲೇಬೇಕು. ನಮಗೆ ನ್ಯಾಯ ಸಿಕ್ಕಿದೆ ಎನ್ನುವುದು ಒಂದು ಕಡೆ ಖುಷಿಯಾದರೆ, ಮತ್ತೊಬ್ಬರು ಶಿಕ್ಷೆಗೆ ಗುರಿಯಾಗಿದ್ದಾರೆ ಎನ್ನುವುದು ದುಃಖದ ಸಂಗತಿಯಾಗಿದೆ. ನಡೆದಿದ್ದು ಏನೋ ನಡೆದು ಹೋಯಿತು. ಈಗ ಜೀವಾವಧಿ ಶಿಕ್ಷೆಗೆ ಒಳಗಾದವರ ಕುಟುಂಬದ ಬಗ್ಗೆ ಯೋಚಿಸಿದರೆ, ನಮಗೂ ನೋವುಂಟಾಗುತ್ತಿದೆ” ಎಂದು ದಲಿತ ಸಮುದಾಯದ ಮುಖಂಡರು ಕಳವಳ ವ್ಯಕ್ತಪಡಿಸಿದರು.

ಮರಕುಂಬಿ ಗ್ರಾಮ 3

“ತಾವಾಯಿತು ತಮ್ಮ ದುಡಿಮೆಯಾಯಿತೆಂದು ಬದುಕುತ್ತಿದ್ದ ನಮ್ಮ ಮನೆಯ ಗಂಡಂದಿರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಅವರೇನು ತಪ್ಪು ಮಾಡಿಲ್ಲ. ತೀರ್ಪು ನೀಡುವ ಮುನ್ನ ಈ ಪ್ರಕರಣದ ಕುರಿತು ಯೋಚಿಸಬೇಕಿತ್ತು. ಮತ್ತೊಮ್ಮೆ ಸರಿಯಾಗಿ ತನಿಖೆಯಾಗಲಿ. ತಪ್ಪು ಮಾಡಿದವರು ಯಾರಿದ್ದಾರೋ ಅವರಿಗೆ ಮಾತ್ರ ಶಿಕ್ಷೆ ಆಗಬೇಕು. ಆದರೆ ಅಮಾಯಕರಿಗೂ ಜೀವಾವಧಿ ಶಿಕ್ಷೆಯಾಗಿದೆ. ಈಗ ನಮ್ಮ ಮನೆಯಲ್ಲಿ ಯಾರೂ ಗಂಡಸರಿಲ್ಲ. ಇದ್ದ ಗಂಡಸರೆಲ್ಲ ಬಳ್ಳಾರಿ ಜೈಲು ಸೇರಿದ್ದಾರೆ. ಇನ್ನು ನಮ್ಮ ಗತಿ ಏನು? ನಮ್ಮ ಮಕ್ಕಳ ಗತಿ ಏನೆಂಬುದು ನಮ್ಮ ಚಿಂತೆಯಾಗಿದೆ. ಒಬ್ಬರಿಗೆ ನ್ಯಾಯ ದೊರಕಿಸುವಾಗ ಮತ್ತೊಬ್ಬರ ಬದುಕು ಹಾಳಾಗಬಹುದು ಎಂಬುದನ್ನೂ ಯೋಚಿಸಬೇಕಿತ್ತು” ಎಂದು 98 ಮಂದಿ ಆಪರಾಧಿಗಳ ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ಮರಕುಂಬಿ ಪ್ರಕರಣದ ತೀರ್ಪು; ಸತ್ರ ನ್ಯಾ. ಸಿ ಚಂದ್ರಶೇಖರ್‌ರವರಿಗೆ ದಸಂಸ ಅಭಿನಂದನೆ

ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ದಲಿತರ ಮೇಲೆ ಅಸ್ಪೃಶ್ಯತೆ, ಜಾತಿ ನಿಂದನೆ ಹಾಗೂ ಹಲ್ಲೆಗಳು ನಡೆಯುತ್ತಲೇ ಇವೆ. ದಾಖಲಾಗಿರುವ ಪ್ರಕರಣಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ದಾಖಲಾದ ಒಟ್ಟು ಪ್ರಕರಣಗಳನ್ನು ಲೆಕ್ಕ ಹಾಕಿದರೆ ಸರಾಸರಿ ವಾರಕ್ಕೊಂದು ದೌರ್ಜನ್ಯ ಪ್ರಕರಣವು ಜಿಲ್ಲೆಯಲ್ಲಿ ನಡೆಯುತ್ತಿದೆ. ಆದರೂ ಜಿಲ್ಲಾಡಳಿತ ಮೂಕ ಪ್ರೇಕ್ಷಕರಂತಿದ್ದು, ಜಾಣ ಕುರುಡು ಪ್ರದರ್ಶಿಸಿದೆ.

ಕೊಪ್ಪಳ ಜಿಲ್ಲೆಯ ರಾಜಕಾರಣ ಉಳ್ಳವರ, ಮೇಲ್ಜಾತಿ ಪರವಾಗಿ ಕೆಲಸ ಮಾಡುತ್ತಿದ್ದು, ಅವರು ಹೇಳಿದ ಹಾಗೆ ಗೋನು ಅಲ್ಲಾಡಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ ಚಂದ್ರಶೇಖರ್‌ ಅವರು ನೀಡಿರುವ ಈ ತೀರ್ಪು ಮಹತ್ವದ್ದಾಗಿದ್ದು, ಐತಿಹಾಸಿಕ ತೀರ್ಪಾಗಿದೆ. ದಲಿತರ ಮೇಲೆ ಅಸ್ಪೃಶ್ಯತೆ, ಜಾತಿ ನಿಂದನೆ, ಹಲ್ಲೆ ಮಾಡುವ ಅಮಾನವೀಯ ಮನಸ್ಸುಳ್ಳವರಿಗೆ ಈ ತೀರ್ಪು ಎಚ್ಚರಿಕೆ ಗಂಟೆಯಾಗಿದೆ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

4 COMMENTS

    • ಈ ರೀತಿ ಎಲ್ಲಾ ಜಿಲ್ಲೆಗಳಲ್ಲೂ ದಲಿತರ ಮೇಲೆ ಹಲ್ಲೆ ನಡೆಯುತ್ತಲೆ ಇದಾವೆ ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಕ್ರಮ ತೆಗೆದುಕೊಳ್ಳಬೇಕು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X