ಮೈಸೂರಿನ ಗಾಂಧಿನಗರದಲ್ಲಿರುವ ಉರಿಲಿಂಗ ಪೆದ್ದಿ ಮಹಾ ಸಂಸ್ಥಾನ ಶಾಖಾ ಮಠದಲ್ಲಿ ಪೂಜ್ಯ ಲಿಂಗೈಕ್ಯ ಶ್ರೀ ಸಿದ್ದಪ್ಪ ಮಹಾಸ್ವಾಮಿ ಸ್ಮರಣಾರ್ಥ “ಶರಣರ ಚಿಂತನೆ- ತತ್ವಪದಕಾರರ ಸಂಗಮ” ಕಾರ್ಯಕ್ರಮ ನಡೆಯಿತು.
ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರ ರಂಗದ ನಿರ್ದೇಶಕ ಪ್ರೊ. ಎಂ ನಂಜಯ್ಯ ಹೊಂಗನೂರು ಮಾತನಾಡಿ, ‘ದಿನನಿತ್ಯದ ಬದುಕಿನ ಸಂವೇದನೆಗಳನ್ನು ಪದಗಳನ್ನಾಗಿ ಕಟ್ಟಿ ಹಾಡಿ, ಗ್ರಾಮೀಣ ಪ್ರದೇಶದಲ್ಲಿ ಅಜ್ಞಾತವಾಗಿ ಉಳಿದಿರುವ ತತ್ವ ಪದಕಾರರ ಸಮೀಕ್ಷೆ ನಡೆಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.
ತತ್ವ ಪದಕಾರರಿಗೆ ಮಾಶಾಸನ ನೀಡಿ ಆರ್ಥಿಕ ಭದ್ರತೆ ಕಲ್ಪಿಸಬೇಕು. ತತ್ವ ಪದಕಾರರ ರಾಜ್ಯ ಮಟ್ಟದ ಸಮಾವೇಶ ಸಂಘಟಿಸಬೇಕು, ಕನ್ನಡ ತತ್ವ ಪದಕಾರರ ಕೊಡುಗೆ ಅನನ್ಯವಾಗಿದೆ. ತತ್ವ ಪದಕಾರರ ನೆಲಮೂಲ ಸಂಸ್ಕೃತಿಯ ಕಣಜ. ಅವರ ತತ್ವ ಪದಗಳಲ್ಲಿ ಜೀವ ವೈವಿಧ್ಯತೆಯ ಸಮೃದ್ಧತೆ ಇದೆ. ವಿಶ್ವಮಾನವ ಪ್ರಜ್ಞೆಯ ನೆಲೆ, ತತ್ವ ಪದ ಸಾಹಿತ್ಯಕ್ಕೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ತವರು ಮನೆಯಾಗಿದ್ದು, ಕಲಬುರ್ಗಿ, ಬಳ್ಳಾರಿ, ರಾಯಚೂರು, ಯಾದಗಿರಿ, ಬೀದರ್, ವಿಜಯನಗರ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಹಳೇ ಮೈಸೂರು ಭಾಗದ ಗ್ರಾಮೀಣ ಪ್ರದೇಶದಲ್ಲಿ ಗುರು ಮಕ್ಕಳು ಎಂದು ಕರೆಯುವ ವಾಡಿಕೆ ಇದೆ. ಇಂಥ ತತ್ವ ಪದಗಳಿಗೆ ಮೂಲವೇ 12 ನೇ ಶತಮಾನದ ಶರಣ ಸಂಸ್ಕೃತಿ ಎಂದು ತಿಳಿಸಿದರು.
ತತ್ವಪದ ಎಂದರೆ ತತ್ವದಲ್ಲಿ ಹಾಡಿದ ಪದ. ಪದದಲ್ಲಿ ಹೇಳಿದ ತತ್ವ. ನಿಜ ಸ್ಥಿತಿಯನ್ನ ಅಥವಾ ಜೀವನ ದರ್ಶನವನ್ನು ಹಾಡಿನ ಮೂಲಕ ಅಭಿವ್ಯಕ್ತಿಗೊಳಿಸುವ ಕ್ರಿಯೆಗೆ ತತ್ವಪದ ಎಂದರ್ಥ. ಒಟ್ಟಾರೆ ವಸ್ತು ಮತ್ತು ಅಭಿವ್ಯಕ್ತಿಯನ್ನು ಸಮನ್ವಯಗೊಳಿಸಿರುವುದೇ ತತ್ವಪದ. ಅನನ್ಯ ಸಂವೇದನೆ ಕಟ್ಟಿಕೊಡುವ ತತ್ವಪದಗಳು ಮೌಖಿಕ ಪರಂಪರೆಯಿಂದ ಹುಟ್ಟಿ ಬಂದವು ಎಂದರು.
ನಿಜಗುಣ ಶಿವಯೋಗಿ, ಕೈವಾರ ತಾತಯ್ಯ, ಸಂತ ಶಿಶುನಾಳ ಷರೀಫ, ಕಡಕೊಳ ಮಡಿವಾಳಪ್ಪ, ಜನ್ನೂರು ಜಲಾಲ ಸಾಹೇಬರು, ಬಿದನೂರ ಗಂಗಮ್ಮ, ಜತ್ತ ಶಿವಲಿಂಗಮ್ಮ, ಸೊಲ್ಲಾಪುರದ ಜಯದೇವಿ ಮುಂತಾದ ತತ್ವ ಪದಕಾರರು ಪ್ರಸಿದ್ಧರಾಗಿದ್ದಾರೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಭಾರತದ ಸಂತ ಸಂಪ್ರದಾಯವನ್ನು ಮರುಶೋಧಿಸಬೇಕಿದೆ
ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಉರಿಲಿಂಗಿ ಪೆದ್ದಿ ಮಠವು ಕಲೆ ಸಂಸ್ಕೃತಿ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತಿದೆ. ತತ್ವ ಪದಕಾರರ ಜೀವನ ಅನುಭವವನ್ನು ಜನರಿಗೆ ತಿಳಿಸಲು ಸಮ್ಮೇಳನ ಆಯೋಜಿಸಲಾಗುವುದು. ತತ್ವಪದಕಾರರ ಅಕಾಡೆಮಿ ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.
ಗುರು ಮಲ್ಲೇಶ್ವರ ಮಠದ ಜಯದೇವಿ ತಾಯಿ,ಮಹಾದೇವ ಸ್ವಾಮಿ, ಪರಮೇಶ್ವರ ಸೇರಿದಂತೆ ಹಲವರು ಇದ್ದರು.
