ಹಾವೇರಿ ನಗರದ ವಾಲ್ಮೀಕಿ ವೃತ್ತದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿನಿಯರನ್ನು ಹಾಸ್ಟೆಲ್ನಲ್ಲಿ ಹಗಲು-ರಾತ್ರಿ ಅಪಾಯಕಾರಿ ಕೆಲಸಗಳಿಗೆ ಬಳಕೆ ಮಾಡುತ್ತಿರುವ ಘಟನೆಯನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಲೇಂದು ತಮ್ಮ ಮನೆಯಿಂದ ವಸತಿ ನಿಲಯಕ್ಕೆ ಬಂದಿರುತ್ತಾರೆ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಸತಿಯುತ ಶಿಕ್ಷಣ ನೀಡಬೇಕು ಆದರ ಆದ್ಯ ಕರ್ತವ್ಯವಾಗಿರುತ್ತದೆ. ಸರ್ಕಾರವು ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಮೂಲಭೂತ ಸೌಕರ್ಯಗಳನ್ನು ನೀಡಿ ಜೊತೆಗೆ ಅಡುಗೆ ಸಿಬ್ಬಂದಿ, ರಾತ್ರಿ ಕಾವಲುಗಾರರು, ಹಾಸ್ಟೆಲ್ ಉಸ್ತುವಾರಿ ನೋಡಿಕೊಳ್ಳಲು ಲಕ್ಷಾಂತರ ಹಣ ಖರ್ಚು ಮಾಡಿರುತ್ತದೆ. ವಸತಿ ನಿಲಯವನ್ನು ನಿಭಾಯಿಸಲು ಸರ್ಕಾರ ವೇತನ ಕೊಟ್ಟು ಮೇಲ್ವಿಚಾರಕರನ್ನು ನೇಮಿಸುತ್ತದೆ. ಆದರೆ ಇಷ್ಟೆಲ್ಲಾ ಸೌಲಭ್ಯಗಳನ್ನು ನೀಡಿದರೂ ಕೂಡ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಸ್ಎಫ್ಐ ಆರೋಪಿಸಿದೆ.

ಉತ್ತಮ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿನಿಯರನ್ನು ಹಾಸ್ಟೆಲ್ ಸ್ವಚ್ಚತೆ ಕೆಲಸಗಳಿಗೆ ಹಚ್ಚಿರುವುದು ಎಷ್ಟರಮಟ್ಟಿಗೆ ಸರಿ? ಈ ರೀತಿ ಯಾಕೆ ವಿದ್ಯಾರ್ಥಿನಿಯರನ್ನು ದುರ್ಬಳಕೆಯ ಮಾಡಿಕೊಂಡಿದಿರಿ ಅಂತ ವಿದ್ಯಾರ್ಥಿ ಸಂಘಟನೆ ಮುಖಂಡರು ಪ್ರಶ್ನೆ ಮಾಡಿದ್ದಾರೆ.
ಶ್ರಮದಾನ ಎಂದು ಉಡಾಫೆಯ ಉತ್ತರ ನೀಡುತ್ತಿರುವುದು ಸರಿಯಲ್ಲ. ಶ್ರಮ ದಾನ ಮಾಡುವುದಕ್ಕೆ ಸಮಯದ ಹೊತ್ತುಗೊತ್ತು ಬೇಡವೇ? ಈ ರೀತಿಯಾಗಿ ವಿದ್ಯಾರ್ಥಿನಿಯರನ್ನು ದುರ್ಬಳಕೆ ಮಾಡಿಕೊಳ್ಳವುದು, ಅಪಾಯಕಾರಿ ಕೆಲಸಗಳನ್ನು ಮಾಡಿಸುವುದು ಕಾನೂನು ಬಾಹಿರ. ರಾತ್ರಿಹೊತ್ತು ಕೆಲಸ ಮಾಡಿಸುವ ಸಂದರ್ಭದಲ್ಲಿ ಅನಾಹುತವಾದರೆ ಯಾರು ಹೊಣೆ? ಎಂದು ಕೇಳಿದ್ದಾರೆ.
ಹಾಸ್ಟೆಲ್ ಪ್ರವೇಶ ದಾಖಲಾತಿ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಸತಿ ನಿಲಯದ ವಿರುದ್ಧ ಧ್ವನಿ ಎತ್ತಬಾರದು ಸೇರಿದಂತೆ ಅನೇಕ ನಿಯಮಗಳನ್ನು ಹಾಕಿ ಕಾನೂನು ಬಾಹಿರ ಬಾಂಡ್ ಬರೆಸಿಕೊಳ್ಳುತ್ತಾರೆ. ಯಾಕೆ ಅಂತಾ ಪ್ರಶ್ನೆ ಮಾಡಿದ್ದಾರೆ ವಿದ್ಯಾರ್ಥಿನಿಯರಿಗೆ ತೊಂದರೆ ಆದರೆ ಯಾರು ಜವಾಬ್ದಾರಿ ಎಂದು ಉತ್ತರ ನೀಡುತ್ತಾರೆ. ಹಾಸ್ಟೆಲ್ನಲ್ಲಿ ಜೀತದಾಳುಗಳನಾಗಿ ದುಡಿಸಿಕೊಳ್ಳಲು ಹೆತ್ತವರು ನಿಮಗೆ ಬಾಂಡ್ ಬರೆದುಕೊಡಬೇಕಾ? ಉತ್ತಮ ವಿದ್ಯಾಭ್ಯಾಸ ಮಾಡಬೇಕಾದ ವಿದ್ಯಾರ್ಥಿನಿಯರನ್ನು ದುರ್ಬಳಕೆ ಮಾಡಿಕೊಂಡ ವಾರ್ಡನ್ ಮೇಲೆ ಶಿಸ್ತು ಕ್ರಮ ಜರುಗಿಸಿ ಅಮಾನತು ಮಾಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಹೋರಾಟ ಮಾಡಲಾಗುವುದು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಜಿಲ್ಲಾ ಕಾರ್ಯದರ್ಶಿ ದುರುಗಪ್ಪ ಯಮ್ಮಿಯವರ, ಜಿಲ್ಲಾ ಉಪಾಧ್ಯಕ್ಷ ಮುತ್ತುರಾಜ್ ದೊಡ್ಡಮನಿ, ದೇವರಾಜ ಅಕ್ಕಸಾಲಿ, ಜಿಲ್ಲಾ ಸಹ ಕಾರ್ಯದರ್ಶಿ ಅಣ್ಣಪ್ಪ ಕೊರವರ್, ವಿಜಯ ಶಿರಹಟ್ಟಿ ಎಚ್ಚರಿಕೆ ನೀಡಿದ್ದಾರೆ.
