ಕ್ಷೌರಿಕರೊಬ್ಬರು ಜಾತಿ ತಾರತಮ್ಯ ಮಾಡಿ ದಲಿತರಿಗೆ ನಾನು ಕ್ಷೌರ ಮಾಡುವುದಿಲ್ಲ ಎಂದು ಜಾತಿನಿಂದನೆ ಮಾಡುವ ಮೂಲಕ ದಲಿತರಿಗೆ ಅಪಮಾನ ಮಾಡಿದ್ದಾರೆ ಎಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಹಶೀಲ್ದಾರ್ ಕಚೇರಿಗೆ ದಲಿತ ನಾಯಕರು ದೂರು ಸಲ್ಲಿಸಿದ್ದಾರೆ.
ಈ ಘಟನೆ ನಡೆದಿರುವುದು ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ. ಈ ಗ್ರಾಮದಲ್ಲಿ ದಲಿತರ ಮೇಲಿನ ದೌರ್ಜನ್ಯ ಸಂವಿಧಾನ, ಸ್ವಾತಂತ್ರ್ಯ ನಂತರವೂ ನೆಡೆಯುತ್ತಿದೆ ಎಂಬುದೇ ಅವಮಾನಕರ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಾಲುವೆ ಹಳ್ಳಿಯಲ್ಲಿ ಕ್ಷೌರದಂಗಡಿ ಇಟ್ಟುಕೊಂಡಿರುವ ನಾಗರಾಜ್ ಎಂಬ ವ್ಯಕ್ತಿ ಜಾತಿ ತಾರತಮ್ಯ ನಡೆಸಿ, ಸವರ್ಣೀಯರಿಗೆ ಮಾತ್ರ ಕ್ಷೌರ ಮಾಡಿ ದಲಿತರಿಗೆ ನಿರಾಕರಿಸಿರುವ ಬಗ್ಗೆ ಕಾಲುವೆ ಹಳ್ಳಿಯ ದಲಿತ ನಾಯಕರು ಮತ್ತು ದಲಿತ ಸಂಘರ್ಷ ಸಮಿತಿಯ ಮುಖಂಡರು ತಹಶೀಲ್ದಾರ್ ರೆಹಾನ್ ಪಾಶ ಅವರಿಗೆ ದೂರು ನೀಡಿದ್ದಾರೆ.
ಸ್ವಾತಂತ್ರ್ಯ ನಂತರ ಸಂವಿಧಾನವನ್ನು ಅಳವಡಿಸಿಕೊಂಡು ಹತ್ತು ವರ್ಷಗಳಾದರೂ ನಾಗರಿಕ ಸಮಾಜದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ನಿಲ್ಲುತ್ತಿಲ್ಲ. ಇದಕ್ಕೆ ಕಾಲುವೆ ಹಳ್ಳಿಯ ಘಟನೆಯ ಸಾಕ್ಷಿಯಾಗಿದ್ದು, ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ದಲಿತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ನಂತರ ಕಾಲುವೆಹಳ್ಳಿ ಗ್ರಾಮದ ಕೆಲ ಮೇಲ್ಜಾತಿಯ ಮುಖಂಡರು ದಲಿತ ಯುವಕರಿಗೆ ಈ ಬಗ್ಗೆ ಯಾಕೆ ದೂರು ನೀಡಿದ್ದೀರಿ ಎಂದು ಬೆದರಿಕೆ ಹಾಕಿ ಭಯದ ವಾತಾವರಣ ಸೃಷ್ಟಿಸುವ ಮತ್ತು ಅಸಂವಿಧಾನಿಕವಾಗಿ ಬೆದರಿಕೆ ಹಾಕಿರುವ ಧ್ವನಿ ಮುದ್ರಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಈ ಬಗ್ಗೆ ಈ ದಿನ.ಕಾಮ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ರೆಹಾನ್ ಪಾಷಾ, ಗ್ರಾಮದಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಲಿತ ಮುಖಂಡರು ದೂರು ನೀಡಿದ್ದರು. ಕಾಲುವೆಹಳ್ಳಿಯಲ್ಲಿ ದಲಿತ ಮುಖಂಡರು ಸೇರಿದಂತೆ ಎರಡು ಕಡೆಯ ಮುಖಂಡರ, ಗ್ರಾಮದ ಜನಗಳ ಮುಂದೆ ಪೊಲೀಸ್ ವರಿಷ್ಠಾಧಿಕಾರಿಗಳು, ಡಿ ವೈ ಎಸ್ ಪಿ ಗಳ ನೇತೃತ್ವದಲ್ಲಿ ಸಭೆ ನಡೆಸಿದ್ದು ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
“ಜಾತಿ ತಾರತಮ್ಯ, ನಿಂದನೆಗೆ ಅವಕಾಶವಿಲ್ಲ. ಇದು ಕಾನೂನು ಬಾಹಿರವಾಗಿದ್ದು, ಎಲ್ಲರೂ ಸರ್ವ ಸಮಾನರು ಮತ್ತು ಸಮಪಾಲು ಉಳ್ಳವರು ಎಂದು ಸಂವಿಧಾನದ ಮೂಲಕ ಸಮಾನತೆಯ ಹಕ್ಕು ನೀಡಲಾಗಿದೆ. ಯಾರಿಗೆ ಆಗಲಿ ಕ್ಷೌರ ಮತ್ತು ಇತರೆ ಸವಲತ್ತುಗಳನ್ನು ನಿರಾಕರಿಸುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ ಮತ್ತು ಶಾಂತಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗಿದೆ. ಇದಕ್ಕೆ ಗ್ರಾಮದ ಜನರು ಕೂಡ ಒಪ್ಪಿಕೊಂಡಿದ್ದಾರೆ” ಎಂದು ತಿಳಿಸಿದರು.
ಈ ಘಟನೆಯ ಬಗ್ಗೆ ಈ ದಿನ.ಕಾಮ್ಗೆ ಪ್ರತಿಕ್ರಿಯಿಸಿದ ಚಿತ್ರದುರ್ಗ ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು, “ಗ್ರಾಮದಲ್ಲಿ ಮೇಲ್ಜಾತಿಯ ಜನಗಳು ಸೇರಿದಂತೆ ಎಲ್ಲರನ್ನೂ ಸಭೆ ಸೇರಿಸಿ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ಇದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಎಷ್ಟೇ ಜನರಿದ್ದರೂ, ಎಷ್ಟೇ ದೊಡ್ಡವರಾದರೂ ಬಿಡುವುದಿಲ್ಲ. ತಕ್ಕ ಶಿಕ್ಷೆಯಾಗುತ್ತದೆ. ಆದಕಾರಣ ಈ ರೀತಿಯ ಪ್ರಕರಣಗಳು ಮುಂದೆ ನಡೆಯದಂತೆ ಎಲ್ಲರಿಗೂ ಸಮಾನ ರೀತಿಯಲ್ಲಿ ಕಾಣಬೇಕು ಎಂದು ಎಚ್ಚರಿಕೆ ನೀಡಿದ್ದೇವೆ. ಇದಕ್ಕೆ ಗ್ರಾಮದ ಜನ ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದರು.
ಇದಕ್ಕೆ ಕ್ಷೌರಿಕ ಕೂಡ ಒಪ್ಪಿಕೊಂಡಿದ್ದಾನೆಯೇ ಎಂದು ಪ್ರಶ್ನಿಸಿದಾಗ, ‘ಕ್ಷೌರಿಕನನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಸಭೆಗೆ ಕರೆಸಿರಲಿಲ್ಲ’ ಎಂದು ಮಾಹಿತಿ ನೀಡಿದರು.
ಇದನ್ನು ಓದಿದ್ದಿರಾ? 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಈ ಬಗ್ಗೆ ಪ್ರತಿಕ್ರಿಯಿಸಿದ ದಲಿತ ಸಂಘರ್ಷ ಸಮಿತಿ ಮುಖಂಡ ಹೊನ್ನೂರ್ ಸ್ವಾಮಿ, “ಗ್ರಾಮದಲ್ಲಿ ತಾರತಮ್ಯ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈ ಬಗ್ಗೆ ನಾವು ದೂರು ನೀಡಿದ್ದೇವೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಹಾಗೂ ಊರಿನ ಜನಗಳು ಮುಂದೆ ದಲಿತರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ, ಸಮಾನತೆ ಕಲ್ಪಿಸುತ್ತಾರೆಯೇ ಎಂಬುದು ಅವರಿಗೆ ಬಿಟ್ಟ ವಿಷಯ. ಸಮಾನತೆಯ ಹಕ್ಕುಗಳ ನಿರಾಕರಣೆ ಆದರೆ ಕಾನೂನು ಪ್ರಕಾರ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದರು.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು