ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗಪಡಿಸಿಕೊಂಡು ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಸರ್ಕಾರ ದುರ್ಬಲಗೊಳಿಸಲು, ಚುನಾಯಿತ ಸರ್ಕಾರ ಪತನಗೊಳಿಸಲು ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿ ರಾಜ್ಯ ದಲಿತ ಸಂಘರ್ಷ ಸಮಿತಿಯು ಬಾಗಲಕೋಟೆ ಜಿಲ್ಲಾ ನವನಗರದಲ್ಲಿ ನವೆಂಬರ್ 6ರಂದು ಬೆಳಿಗ್ಗೆ 11.30ಕ್ಕೆ ಅರೆಬೆತ್ತಲೆ ಮೆರವಣಿಗೆ ನಡೆಸಲಾಗುವುದು ಎಂದು ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನವನಗರದ ತಹಶೀಲ್ದಾರ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಲಾಗುತ್ತದೆ. ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಗುವುದು” ಎಂದರು.
“ಎಫ್ಐಆರ್ ಆಗಿರುವ ಕಾರಣಕ್ಕೆ ರಾಜೀನಾಮೆ ನೀಡಬೇಕೆಂದು ಮಾನದಂಡ ನಿಗದಿಪಡಿಸಿದರೆ ಸಿದ್ದರಾಮಯ್ಯ ಮಾತ್ರವಲ್ಲ, ನರೇಂದ್ರ ಮೋದಿಯವರ ಸಂಪುಟದ 23ರಿಂದ 24 ಮಂದಿ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ, ರಾಜಭವನಗಳ ಮೂಲಕ ಮಟ್ಟಹಾಕಲು ಫ್ಯೂಡಲ್ ರಾಜಕಾರಣ ದೇಶದಲ್ಲಿ ನಡೆದಿದೆ. ಆದರೆ ಮುಡಾ ಪ್ರಕರಣ ಕೃತಕ ಕಾರಣಕ್ಕೆ ಹೆದರಿ ಸಿದ್ದರಾಮಯ್ಯನವರ ಸರ್ಕಾರ ನಿರ್ಗಮಿಸುವುದು ಎಂದರೆ ಈ ಸಮಾಜದ ಬಹುಜನರ ವಿಚಾರಧಾರೆಗೆ ಸೋಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಮುಸ್ಲಿಂ ಯುವಕನ ದೀಪಾವಳಿ ಸಂಭ್ರಮ; ಗೂಡುದೀಪ ತಯಾರಿಸಿ ಹಂಚಿದ ಅಶ್ಫಾಕ್
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಬಸವರಾಜ ಹಳ್ಳದಮನಿ, ರವಿ ಕಾಂಬಳಿ, ಕಾಶಿಂಜಲಿ ಗೋರೆ, ಮಹಾಲಿಂಗಪ್ಪ ಅಲಬಾಳ, ಸದಾಶಿವ ಐನಾಪೂರ, ಬಸವರಾಜ ದೊಡ್ಡಮನಿ, ಮಾರುತಿ ಚಿಕ್ಕಾಲಗುಂಡಿ, ಹುಲ್ಲಪ್ಪ ಅಂಟರಟಾನ, ಆಪಾಸಿ ಕಾಂಬಳೆ, ಶ್ರಾವಣ ನಿಡೋಣಿ, ಯಾಸಿನ್ ಲೋದಿ ಸೇರಿದಂತೆ ಇತರರು ಇದ್ದರು.