ಆರ್ಥಿಕ, ಸಾಮಾಜಿಕ ಸಂಕಟಗಳು ಎದುರಾದಾಗ ಅದಕ್ಕೆ ''ಆತ್ಮಹತ್ಯೆ ಪರಿಹಾರ'' ಎಂದು ಪರೋಕ್ಷವಾಗಿ ಬೊಟ್ಟುಮಾಡುವ ಇಂತಹ ಎಲ್ಲ ಡಿಯರ್ ಮೀಡಿಯಾಗಳೂ ಇಂದು ಸಾಮಾಜಿಕ ಪಿಡುಗುಗಳೇ. ಇಂತಹ ಪ್ರತೀ ಸಾವಿಗೂ ಅವರು ಕೂಡ ಕಾರಣ.
ಪ್ರತೀಬಾರಿ ಸೆಲೆಬ್ರಿಟಿ ಆತ್ಮಹತ್ಯೆಯೊಂದು ಸಂಭವಿಸಿದಾಗ, ಮಾಧ್ಯಮಗಳ ವರ್ತನೆ ಮತ್ತು ಆ ಸಾವನ್ನು ಕಂಡ/ಕೇಳಿದ ಜನಸಾಮಾನ್ಯರ ಸಾಮಾಜಿಕ ಮಾಧ್ಯಮಗಳಲ್ಲಿನ ವರ್ತನೆಗಳು – ಜನರ ನಡುವೆ ಮಾನಸಿಕ ಆರೋಗ್ಯದ ಕುರಿತು ಎಚ್ಚರ ಮೂಡಿಸುವಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು, ಅದರ ಮಿತಿಯನ್ನು ಬಟಾಬಯಲು ಮಾಡುತ್ತವೆ.
ಅದಕ್ಕಿಂತ ಕೆಡುಕಿನದೆಂದರೆ, ಒಂದು ಸಾವು ಸಂಭವಿಸಿದಾಗ, (ಅದೆಷ್ಟೇ ಘೋರ/ದುರಂತಮಯವಾಗಿರಲಿ) ಆ ಸಾವಿಗೆ ಒಂದು ಘನತೆಯನ್ನೂ, ಮೃತಪಟ್ಟ ಸಹಜೀವಿಗೆ ಒಂದು ಗೌರವಯುತ ವಿದಾಯವನ್ನೂ ಕೋರುವುದು ಕೂಡ ಸಾಧ್ಯವಾಗದ ”ಅತಿನಾಗರಿಕ” ಸ್ಥಿತಿಗೆ ನಾವು ತಲುಪಿರುವುದು.
ಆತ್ಮಹತ್ಯೆಯ ಯೋಚನೆಗಳು ಬರುವುದು (ಐಡಿಯೇಷನ್) ಮತ್ತು ಆತ್ಮಹತ್ಯೆಗೆ ತಯಾರಿಗಳು ನಡೆದಿರುವಾಗ ಅದರ ಅಡಿಪದರಗಳಲ್ಲಿರುವ, ಖಿನ್ನತೆಯಂತಹ ಹತ್ತಾರು ಮಾನಸಿಕ ಸಮಸ್ಯೆಗಳಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುತ್ತದೆ. ಅದನ್ನು ಒದಗಿಸದ ಸಮಾಜಕ್ಕೆ, ಆ ಸಾವನ್ನು ಹೀಯಾಳಿಸುವ, ಕಾಮೆಂಟ್ ಮಾಡುವ ನೈತಿಕ ಹಕ್ಕು ಉಳಿದಿರುವುದಿಲ್ಲ. ಸಾಮಾಜಿಕ ಜವಾಬ್ದಾರಿ ಹೊಂದಿರಬೇಕಾದ ನಮ್ಮ ಮಾಧ್ಯಮಗಳಂತೂ, ಆತ್ಮಹತ್ಯೆ ಪ್ರಕರಣಗಳನ್ನು (ಅದರಲ್ಲೂ ಸೆಲೆಬ್ರಿಟಿ ಆತ್ಮಹತ್ಯೆಗಳನ್ನು) ವರದಿ ಮಾಡುವಾಗ ತಮ್ಮ ಕಾನೂನು-ನೈತಿಕತೆಯ ಚೌಕಟ್ಟನ್ನೂ ಮೀರಿ ಕೆಡುಕರಂತೆ, ಸಮಾಜ ವಿರೋಧಿಗಳಂತೆ ವರ್ತಿಸುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿವೆ.
ಇದನ್ನು ಓದಿದ್ದೀರಾ?: ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ನಿಧನ; ಆತ್ಮಹತ್ಯೆ ಶಂಕೆ
ಆರ್ಥಿಕ, ಸಾಮಾಜಿಕ ಸಂಕಟಗಳು ಎದುರಾದಾಗ ಅದಕ್ಕೆ ”ಆತ್ಮಹತ್ಯೆ ಪರಿಹಾರ” ಎಂದು ಪರೋಕ್ಷವಾಗಿ ಬೊಟ್ಟುಮಾಡುವ ಇಂತಹ ಎಲ್ಲ ಡಿಯರ್ ಮೀಡಿಯಾಗಳೂ ಇಂದು ಸಾಮಾಜಿಕ ಪಿಡುಗುಗಳೇ. ಇಂತಹ ಪ್ರತೀ ಸಾವಿಗೂ ಅವರು ಕೂಡ ಕಾರಣ. ಅಂತಹ ಎಲ್ಲರ ಬಗ್ಗೆ ಹೇಸಿಗೆ ಪಡೋಣ. ನಮ್ಮ ಸುತ್ತ ಇಂತಹ ಆತ್ಮಹತ್ಯಾಕಾರಕ ಯೋಚನೆಗಳಿರುವ, ಖಿನ್ನತೆಯ ವ್ಯಕ್ತಿಗಳು ಕಾಣ/ಕೇಳ ಸಿಕ್ಕಿದರೆ, ಅವರಿಗೆ ತುರ್ತು ವೈದ್ಯಕೀಯ ಸಹಾಯ ಲಭ್ಯವಾಗುವಂತೆ ಪ್ರಯತ್ನಿಸೋಣ. ಸದ್ಯಕ್ಕೆ ಆರೋಗ್ಯವಂತ ಮನಸ್ಸುಗಳು ಮಾಡಬಹುದಾದದ್ದು ಇದೊಂದನ್ನೇ.

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).