’12ನೇ ಶತಮಾನದಲ್ಲಿ ಶರಣರು ತಮ್ಮ ವಚನಗಳ ಮೂಲಕ ಸನ್ನಡತೆಯಿಂದ ನಡೆಯಲು ಸಂದೇಶ ನೀಡಿದ್ದಾರೆ. ಅದರಲ್ಲಿ ಕಾಯಕ, ದಾಸೋಹ ನಮಗೆ ಮಾದರಿಯಾಗಿವೆ. ಬಸವಾದಿ ಶರಣರ ಚಿಂತನೆ ಮತ್ತು ಅನುಭವದ ನುಡಿಗಳೇ ಬದುಕಿನ ಸಮೃದ್ಧಿಯ ದಾರಿ’ ಎಂದು ಸಹಾಯಕ ಪ್ರಾಧ್ಯಾಪಕ ಎಂ.ಎಸ್.ಮಾಗಣಗೇರಿ ವಿಜಯಪುರದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಹೇಳಿದರು.
ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಚನ್ನಬಸವಣ್ಣನವರ ಮಾಸಿಕ ಶಿವಾನುಭವದ ಅಂಗವಾಗಿ ಅನುಭಾವವ ಕುರಿತು ಉಪನ್ಯಾಸ ನೀಡಿ ‘ಅಲ್ಲಮಪ್ರಭುವಿನ ನಂತರದ ಸ್ಥಾನ ಚನ್ನಬಸವಣ್ಣನವರದ್ದು, ವಚನ ಸಾಹಿತ್ಯವನ್ನು ರಕ್ಷಣೆ ಮಾಡಿದ ಕೆಲಸ ಅಮೋಘ, ಅವರು ರಚಿಸಿದ 1777 ವಚನಗಳು ಲಭ್ಯವಾಗಿವೆ’ ಎಂದರು.
ವಕೀಲ ವಿದ್ಯಾವತಿ ಅಂಕಲಗಿ ಮಾತನಾಡಿ, ‘ಶರಣರ ಅನುಭವದ ನುಡಿಗಳು, ಆಳ, ಅಗಲ. ನಿಲುಕಲು ಸಾಧ್ಯವಿಲ್ಲ. ಚನ್ನಬಸವಣ್ಣನವರ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ವಿ. ಸಿ.ನಾಗಠಾಣ ಮಾತನಾಡಿ, ಚನ್ನಬಸವಣ್ಣನವರು ಕೇವಲ 24 ವರ್ಷ ಮಾತ್ರ ಬದುಕಿದವರು. ವಚನ ಸಾಹಿತ್ಯದ ಮೂಲಕ ಜಲ, ತಪಗಳ ಪೂಜೆ ಬೇಕಾಗಿಲ್ಲ ಎಂದವರು’ ಎಂದು ಹೇಳಿದರು.
ಈ ವರದಿ ಓದಿದ್ದೀರಾ? ಸಮರ್ಪಕ ಬೆಲೆ ಸಿಗದೆ ಕಂಗಾಲಾಗುವ ಪರಿಸ್ಥಿತಿಯಲ್ಲಿ ರೈತರು
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ದ್ರಾಕ್ಷಾಯಣಿ ಬಿರಾದಾರ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಬುರ್ಲಿ, ವಿಠಲ ತೇಲಿ, ಸಹದೇವ ನಾಡಗೌಡರ, ಅಮರಣ್ಣವರ, ಎಸ್. ಎನ್. ಶಿವಣಗಿ,ಮಹಾದೇವ ಹಾಲಳ್ಳಿ, ಶಿವಪುತ್ರ ಪೋಳ, ಈಶ್ವರಗೊಂಡ ಬಸವರಾಜ ಒಂಟಗೂಡಿ, ಬಸವರಾಜ ಇಟ್ಟಂಗಿ, ಮ.ನು. ಪತ್ತಾರ, ಕಾಶಿನಾಥ ಅಣೆಪ್ಪನವರ, ವಿಠಲ ತೇಲಿ, ಎಂ.ಜಿ. ಯಾದವಾಡ, ಸಂಗಮೇಶ ಬದಾಮಿ ಉಪಸ್ಥಿತರಿದ್ದರು.