ಹಾಸ್ಟೆಲ್ ಮೂಲಭೂತ ಸೌಕರ್ಯಗಳಿಂದ ವಂಚಿಸಿ, ಹಾಸ್ಟೆಲ್ ಅನ್ಯಾಯವನ್ನು ಪ್ರಶ್ನೆ ಮಾಡಿದ ವಿದ್ಯಾರ್ಥಿಗಳ ಟಾರ್ಗೆಟ್ ಖಂಡಿಸಿ, ವಾರ್ಡನ್ ಮಾಡಿದ ತಪ್ಪನ್ನು ಮುಚ್ಚಿಹಾಕಲು ಪಾಲಕರಿಗೆ ಇಲ್ಲಸಲ್ಲದ ಸುಳ್ಳು ಆರೋಪ ಮಾಡಿದ ವಾರ್ಡನ್ ಅಮಾನತು ಮಾಡಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ಧರಣೆ ನಡೆಸಿದರು.
ಹಾವೇರಿ ತಾಲೂಕಿನ ಗಾಂಧಿಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಸರಿಯಾದ ಉತ್ತಮ ಗುಣಮಟ್ಟದ ಆಹಾರ ನೀಡುವುದಿಲ್ಲ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಪುಸ್ತಕಗಳು, ಆಟದ ಸಲಕರಣೆಗಳು ಸೇರಿದಂತೆ ಹಾಸ್ಟೆಲ್ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ತಾಲೂಕು ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಪತ್ರ ಬರೆಯಲಾಗಿದೆ ಹಾಗೂ ಕಳೆದ ಡಿಸೆಂಬರ್ ತಿಂಗಳಲ್ಲಿ ಹೋರಾಟವನ್ನು ಕೂಡ ಮಾಡಿದ್ದಾರೆ. ಆದರೂ ಅಧಿಕಾರಿಗಳ ಯಾವುದೇ ರೀತಿಯ ಕ್ರಮಕೈಗೊಳದೆ ಕೇವಲ ಭರವಸೆ ನೀಡಿದ್ದಾರೆ.
ವಿದ್ಯಾರ್ಥಿಗಳು ನಡೆಸುತ್ತಿರುವ ನ್ಯಾಯಯುತ ಹೋರಾಟ ಧರಣಿಯನ್ನು ಬೆಂಬಲಿಸಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಹಾಸ್ಟೆಲ್ ಅವ್ಯವಸ್ಥೆ, ಅನ್ಯಾಯದ ವಿರುದ್ಧ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಅವರ ಪಾಲಕರಿಗೆ ಇಲ್ಲಸಲ್ಲದ ಆರೋಪಗಳನ್ನು ತಾವು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ಪಿತೂರಿ ಮಾಡುತ್ತಿರುವುದು ಸರಿಯಲ್ಲ ಖಂಡನೀಯ. ಕೋತಿ ತಾನು ತಿನ್ನುವುದು ಮೇಕೆ ಮೂತಿಗೆ ತೋರಿಸಿತ್ತು ಅನ್ನೊ ರೀತಿಯಲ್ಲಿ ವಾರ್ಡನ್ ತಾನು ಮಾಡಿದ ಭ್ರಷ್ಟಾಚಾರ, ಅವ್ಯವಸ್ಥೆ, ಅನ್ಯಾಯವನ್ನು ಮುಚ್ಚಿಕೊಳ್ಳಲು ವಿದ್ಯಾರ್ಥಿಗಳ ಮನೆಗೆ ಹೋಗಿ ಆರೋಪ ಮಾಡುತ್ತಿರುವುದು ಸೂಕ್ತ ತನಿಖೆ ನಡೆಸಬೇಕು ಸಂಬಂಧಿಸಿದ ವಾರ್ಡನ್ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಎಸ್ಎಫ್ಐ ಹಾಸ್ಟೆಲ್ ಘಟಕ ಅಧ್ಯಕ್ಷ ಪರಶುರಾಮ ಕೊಪ್ಪಳದ ಮಾತನಾಡಿ, ಊಟ, ವಸತಿ ಸಮಸ್ಯೆಗಳು, ಪುಸ್ತಕ, ಕಂಪ್ಯೂಟರ್ ಲ್ಯಾಬ್ ತೆರೆಯಿರಿ ಎಂದು ಕೇಳಿದರೆ ಸರಿಯಾಗಿ ಸ್ಪಂದಿಸದ ವಾರ್ಡನ್ ವರ್ಗಾವಣೆ ಮಾಡಿ ಎಂದು ತಾಲೂಕು ಅಧಿಕಾರಿಗಳಿಗೆ ದೂರ ನೀಡಿದರಿಂದ ವಿದ್ಯಾರ್ಥಿಗಳ ಮನೆಗೆ ವಾರ್ಡನ್ ಲಕ್ಷ್ಮಣ ಅವರು ಹೋಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಆತಂಕಕ್ಕೆ ಒಳಗಾದ ಪಾಲಕರು ವಿದ್ಯಾರ್ಥಿಗಳಿಗೆ ಬೈದಾಡಿ ಕಾಲೇಜಿಗೆ ಹೋಗಬೇಡಿ ಎಂದು ಗಲಾಟೆ ಮಾಡಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು ಎಂದರು.
ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಆಂಜನೇಯ ಅವರನ್ನು ಕಿರಾಣಿ, ತರಕಾರಿ ದಾಸ್ತಾನು ಕೊಠಡಿ ಪರಿಶೀಲನೆ ನಡೆಸಲು ಒತ್ತಾಯಿಸಿದರು. ಒತ್ತಡಕ್ಕೆ ಮಣಿದು ಪರಿಶೀಲನೆ ನಡೆದ ಅಧಿಕಾರಿಗಳು ಹುಳು ಬಿದ್ದಿದ್ದ ಕಾಳು ಕಡ್ಡಿ, ಕೊಳೆತ ತರಕಾರಿ ನೋಡಿ ಕೋಪಗೊಂಡು ವಾರ್ಡನ್ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಮಂಗಳೂರು | ಪ್ಯಾಲೆಸ್ತೀನ್ ಪರ ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರು!
‘ಭರವಸೆ ಬೇಡ. ಆದೇಶ ಬೇಕು. ಅಲ್ಲಿಯವರೆಗೂ ಕೊಳೆತ ತರಕಾರಿ, ಹುಳು ಬಿದ್ದ ಪದಾರ್ಥಗಳನ್ನು ಹಾಸ್ಟೆಲ್ ಮುಂದೆ ಇಟ್ಟು ಧರಣಿ ಮುಂದುವರೆಸುತ್ತೇವೆ’ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದರು.
ಈ ಸಂದರ್ಭದಲ್ಲಿ ಮಂಜುನಾಥ್ ಹುಲಮನಿ, ವಸಂತ್ ವಡ್ಡರ, ರಘುಪತಿ ಕರಮ್ಮನವರ, ಅರುಣ್ ಮಿನಕಟ್ಟಿ, ಕೃಷ್ಣ ಕೆಸರಹಳ್ಳಿ, ಕುಶಾಲ್ ಲಮಾಣಿ, ಸುನಿಲ್ ಲಮಾಣಿ, ನಾಗೇಂದ್ರ ಎಮ್, ಕಿರಣ್ ಲಮಾಣಿ, ನವೀನ ಬಡ್ಡೆಪ್ಪನವರ, ಅರುಣ್ ಕುಮಾರ್ ನಾಗವತ್, ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.