- ಬಿಜೆಪಿ ಸೋಲಿಗೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿದ ಕವಿರಾಜ್
- ಜನ ವಿರೋಧಿಗಳ ವಿರುದ್ಧ ಸದಾ ಧ್ವನಿ ಎತ್ತುವ ಚಿತ್ರಸಾಹಿತಿ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಗೆದ್ದು ಸರ್ಕಾರ ರಚನೆಗೆ ಮುಂದಾಗಿದೆ. ಇದೇ ಹೊತ್ತಿನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಾಹಿತಿ ಕವಿರಾಜ್ ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾದ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿದ್ದಾರೆ.
ಕವಿರಾಜ್ ಪ್ರಕಾರ ಬಿಜೆಪಿ ಸೋಲಿಗೆ ಕಾರಣವಾದ ಪ್ರಮುಖ ಅಂಶಗಳು
“ಪದೇ ಪದೇ ನಾಡಿನ ಶಾಂತಿ ಕದಡಿದ್ದು, ಶಾಲೆ-ಪಠ್ಯಪುಸ್ತಕಗಳಲ್ಲೂ ರಾಜಕೀಯ ತಂದು ಮಲೀನಗೊಳಿಸಿದ್ದು, ಕುವೆಂಪು, ಬಸವಣ್ಣ, ಅಂಬೇಡ್ಕರ್ ಅವರಂತಹ ಮಹನೀಯರನ್ನು ಅವಮಾನಿಸಿದ್ದು, ಧರ್ಮ-ದೇವರು ಎಲ್ಲವನ್ನೂ ರಾಜಕೀಯ ಅಸ್ತ್ರವಾಗಿಸಿಕೊಂಡಿದ್ದು, ಕನ್ನಡತನ, ಕನ್ನಡದ ಅಸ್ಮಿತೆಗಳ ವಿರುದ್ಧ ನಿಂತು ಹಿಂದಿ ಹೇರಿಕೆ ಬೆಂಬಲಿಸಿದ್ದು, ಈ ಮಣ್ಣಿನ ಹೋರಾಟಗಾರರನ್ನು ಕಡೆಗಣಿಸಿ ಶಿವಾಜಿ, ಸಾವರ್ಕರ್ ಅಂಥವರನ್ನು ಮೆರೆಸಿದ್ದು, ಹಿಂದೆಂದು ಕಂಡಿರದ ಭ್ರಷ್ಟಾಚಾರ -ಅಹಂಕಾರದ ಆಡಳಿತ, ಬೆಲೆ ಏರಿಕೆಯಿಂದ ಬಡವರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದು, ಪದೇ ಪದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಜನ ಉಗಿದ ನಂತರ ಯೂ ಟರ್ನ್ ಹೊಡೆದಿದ್ದು, ಕರೋನಾದಂತಹ ವಿಕೋಪದ ಸಮಯದಲ್ಲಿ ಜೀವಗಳನ್ನು ರಕ್ಷಿಸುವಲ್ಲಿ ಹೊಣೆಗೇಡಿತನ ತೋರಿದ್ದು”
“ಅಮಾಯಕ ಯುವಕರ ಹೆಣಗಳನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದು, ನಾಗಪುರ ನಿರ್ದೇಶಿತ ಮೂಲಭೂತವಾದದ ಪ್ರಯೋಗಗಳಿಗೆ ಕರ್ನಾಟಕವನ್ನು ಪ್ರಯೋಗಶಾಲೆಯಾಗಿಸಿದ್ದು, ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯದಂತಹ ಅನೈತಿಕ ರಾಜಕಾರಣದಿಂದ ರಾಷ್ಟ್ರಮಟ್ಟದಲ್ಲಿ ನಾಡಿನ ಗೌರವ ಹಾಳುಮಾಡಿದ್ದು, ವಿರೋಧಿಸಿದವರನ್ನು ಹೆದರಿಸಲು ಆಡಳಿತ ವ್ಯವಸ್ಥೆಯನ್ನು ಬಳಸಿಕೊಂಡಿದ್ದು, ಇವೆಲ್ಲವುಗಳ ವಿರುದ್ಧ ಕರ್ನಾಟಕದ ಮತದಾರರು ಜಾಗೃತನಾಗಿ ತೀರ್ಪು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಜಾಕೀಯದ ಸೋಲು : ಜನ ಅಸಾಮಾನ್ಯರು ಎಂದ ಉಪೇಂದ್ರಗೆ ನೆಟ್ಟಿಗರ ತರಾಟೆ
“ಕೇಂದ್ರ ನಾಯಕರ ಅಬ್ಬರದ ರ್ಯಾಲಿಯಿಂದ ಅಲೆ ಸೃಷ್ಟಿಯಾಗಿಬಿಡುತ್ತೆ ಎಂಬ ಭ್ರಮೆ, ಹಣ ಬಲದ ಧಿಮಾಕು, ಜಾತಿ ರಾಜಕೀಯ, ದ್ವೇಷ ಭಾಷಣ ಇವಕ್ಕೆಲ್ಲ ಸೊಪ್ಪು ಹಾಕದ ಕರುನಾಡಿನ ಮತದಾರರ ಪ್ರಜ್ಞಾವಂತಿಕೆ ಬಗ್ಗೆ ಹೆಮ್ಮೆ ಎನ್ನಿಸುತ್ತದೆ. ಅತಂತ್ರ ಫಲಿತಾಂಶ ಕೊಟ್ಟರೆ ಅನೈತಿಕ ರಾಜಕಾರಣದ ರೂವಾರಿಗಳು ಅದನ್ನು ಹೇಗೆಲ್ಲ ದುರುಪಯೋಗ ಪಡಿಸಿಕೊಂಡು ಹಣಬಲ, ಅಧಿಕಾರ ಬಲದಿಂದ ರಾಜ್ಯದಲ್ಲಿ ಸರ್ಕಾರ ಸ್ಥಾಪಿಸುತ್ತಾರೆ ಎಂಬ ಸ್ಪಷ್ಟ ಅರಿವು ಮತದಾರ ಪ್ರಭುಗಳಿಗೆ ಇದೆ. ಹಾಗಾಗಿಯೇ ನಿರ್ಣಾಯಕ ಫಲಿತಾಂಶ ನೀಡಿ ಯಾರು ಎಲ್ಲಿರಬೇಕು ಎಂದು ಖಚಿತವಾಗಿ ತೋರಿಸಿರುವ ಮತದಾರರು ಅಭಿನಂದನಾರ್ಹರು. ಮತದಾರರ ಪ್ರಜ್ಞಾವಂತಿಕೆ ಮತ್ತು ಪ್ರಜಾಪ್ರಭುತ್ವ ಹೀಗೆ ಪ್ರಬುದ್ಧವಾಗುತ್ತಾ ಚಿರಾಯುವಾಗಲಿ” ಎಂದು ದೀರ್ಘ ಲೇಖನವನ್ನು ಹಂಚಿಕೊಂಡಿದ್ದಾರೆ.