ಕರ್ನಾಟಕದಲ್ಲಿ ಪ್ರತಿವರ್ಷ 900ಕ್ಕೂ ಹೆಚ್ಚು ಮಕ್ಕಳಲ್ಲಿ ಕ್ಯಾನ್ಸರ್ ಕಾಯಿಲೆ ಕಂಡು ಬರುತ್ತಿದೆ. ಅದರಲ್ಲೂ ರಕ್ತದ ಕ್ಯಾನ್ಸರ್ ಹೆಚ್ಚು ಎಂದು ವರದಿಯಾಗಿದೆ. ಕ್ಯಾನ್ಸರ್ ನೋಂದಣಿ ದತ್ತಾಂಶದ ವರದಿ ಪ್ರಕಾರ ದೇಶದಲ್ಲಿ ವಾರ್ಷಿಕ ಸುಮಾರು 18ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ. ಅದರಲ್ಲಿ 26 ಸಾವಿರ ಮಕ್ಕಳು ಇದ್ದಾರೆ. ಇದು ನಿಜಕ್ಕೂ ಆತಂಕಕಾರಿ.
ನವೆಂಬರ್ 7 ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ. ಈ ಸಂದರ್ಭದಲ್ಲಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಕರ್ನಾಟಕದಲ್ಲಿ ಪ್ರತಿವರ್ಷ 900ಕ್ಕೂ ಹೆಚ್ಚು ಮಕ್ಕಳಲ್ಲಿ ಕ್ಯಾನ್ಸರ್ ಕಾಯಿಲೆ ಕಂಡು ಬರುತ್ತಿದೆ. ಅದರಲ್ಲೂ ರಕ್ತದ ಕ್ಯಾನ್ಸರ್ ಹೆಚ್ಚು ಎಂದು ವರದಿಯಾಗಿದೆ. ಕ್ಯಾನ್ಸರ್ ನೋಂದಣಿ ದತ್ತಾಂಶದ ಪ್ರಕಾರ ದೇಶದಲ್ಲಿ ವಾರ್ಷಿಕ ಸುಮಾರು 18ಲಕ್ಷ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ, ಅದರಲ್ಲಿ 26 ಸಾವಿರ ಮಕ್ಕಳು ಇದ್ದಾರೆ! ರಾಜ್ಯದಲ್ಲಿ ಕಿದ್ವಾಯಿ ಆಸ್ಪತ್ರೆಯೊಂದರಲ್ಲಿಯೇ ವರ್ಷಕ್ಕೆ 400-500 ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಈ ವಿಷಯ ಯುವ ಭಾರತದ ಆರೋಗ್ಯದ ದೃಷ್ಟಿಯಿಂದ ಆಘಾತಕಾರಿ. ಅಷ್ಟೇ ಅಪಾಯಕಾರಿ ಕೂಡಾ.
ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಆರೋಗ್ಯವಂತ ಯುವ ಸಮುದಾಯ ಅಷ್ಟೇ ಮುಖ್ಯ. ಪ್ರಜೆಗಳು ಆರೋಗ್ಯವಂತರಾಗಿದ್ದ ದೇಶವೂ ಆರೋಗ್ಯವಂತವಾಗಿರುತ್ತದೆ. ದೇಶದ ಅಭಿವೃದ್ಧಿ, ಉತ್ಪಾದನೆ ಎಲ್ಲವೂ ಆರೋಗ್ಯವಂತ ಸಮಾಜವನ್ನು ಅವಲಂಬಿಸಿರುತ್ತದೆ. ಆದರೆ ಉತ್ಪಾದನಾ ಕಾರ್ಯದಲ್ಲಿ ತೊಡಗುವ ಸಾಮಾನ್ಯ ಮತ್ತು ಬಡ ಜನರ ಪಾಲಿಗೆ ಉತ್ತಮ ಆರೋಗ್ಯ, ಸೌಕರ್ಯಗಳು ಗಗನ ಕುಸುಮ. ಕಾಯಿಲೆಗಳು ಬಡವ- ಶ್ರೀಮಂತ ಎಂಬುದನ್ನು ನೋಡಿ ಬರಲ್ಲ. ಆದರೆ, ಆರೋಗ್ಯವಾಗಿರಲು ಬೇಕಿರುವ ಸೌಕರ್ಯ, ಉತ್ತಮವಾದ್ದನ್ನು ಕೊಳ್ಳುವ ಶಕ್ತಿ, ಚಿಕಿತ್ಸೆ ಪಡೆಯುವ ಶಕ್ತಿ, ಉತ್ತಮ ವಾತಾವರಣದಲ್ಲಿ ಬದುಕುವ ಅವಕಾಶ ಮಾತ್ರ ಎಲ್ಲರಿಗೂ ಸಮನಾಗಿರುವುದಿಲ್ಲ. ಉಳ್ಳವರು ಉತ್ತಮವಾದ್ದನ್ನೇ ಉಣ್ಣಲು, ಸಕಾಲದಲ್ಲಿ ಅತ್ಯುತ್ತಮ ಚಿಕಿತ್ಸೆ ಪಡೆಯಲು ಶಕ್ತರು. ಇಲ್ಲಿ ಅಲ್ಲದಿದ್ದರೆ ವಿದೇಶಕ್ಕೆ ಹೋಗಿ ಕಾಯಿಲೆ ಗುಣಪಡಿಸಿಕೊಂಡು ಬರುತ್ತಾರೆ. ಆದರೆ, ಆತನ ಕೈ ಕೆಳಗೆ ದುಡಿಯುವ ಜನಕ್ಕೆ ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆ ಬಂದರೆ ಇಡೀ ಕುಟುಂಬ ತತ್ತರಿಸಿ ಹೋಗುತ್ತದೆ. ಬಡ, ಕೂಲಿಕಾರ ಕುಟುಂಬಗಳಲ್ಲಿ ಬಹುತೇಕರು ಯಾವ ಕಾಯಿಲೆ ಎಂದು ಪರೀಕ್ಷೆಯನ್ನೇ ಮಾಡಿಸದೇ ಮರಣಿಸುತ್ತಾರೆ.
ಕ್ಯಾನ್ಸರ್ ಹೆಸರು ಕೇಳಿದರೆ ಎಂಥವರಿಗೂ ಮೈ ನಡುಕ ಬರುತ್ತದೆ. ಅದಕ್ಕೆ ಪಡೆಯುವ ಚಿಕಿತ್ಸೆ, ಆ ನೋವಿನ ಬಗ್ಗೆ ಅನುಭವಿಸಿಯೇ ಅರಿಯಬೇಕಿಲ್ಲ. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಆವರಣ ಪ್ರವೇಶಿಸಿದರೆ ಸಾಕು ನಮ್ಮೆಲ್ಲ ಅಹಂ ಒಂದೇ ಸರಿ ಇಳಿದುಬಿಡುತ್ತದೆ. ಕ್ಯಾನ್ಸರ್ಗೆ ಚಿಕಿತ್ಸೆ ಇಲ್ಲ ಎಂಬುದು ಸಾಮಾನ್ಯ ನಂಬಿಕೆ. ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ಚಿಕಿತ್ಸೆ ಪಡೆದು ಗುಣಮುಖರಾದವರೂ ನಮ್ಮ ನಡುವೆ ಇದ್ದಾರೆ. ಆದರೂ ಕ್ಯಾನ್ಸರ್ ಎಂಬ ಪದ ಹುಟ್ಟಿಸುವ ಭಯವೇ ಯಾತನಾಮಯ.
ಅಶಿಸ್ತಿನ ಜೀವನ ಶೈಲಿ, ಬದಲಾದ ದಿನಚರಿ, ಕಲಬೆರಕೆ ಆಹಾರ, ಅನಾರೋಗ್ಯಕರ ಹವ್ಯಾಸಗಳು, ಪರಿಸರ ಮಾಲಿನ್ಯ ಇವೆಲ್ಲವೂ ಸ್ವಯಂಕೃತ ಅಪರಾಧಗಳು. ನಾವು ತಿನ್ನುವ ಪ್ರತಿಯೊಂದು ವಸ್ತುವೂ ಕಲಬೆರಕೆಯಾಗಿದೆ. ಕುಡಿಯುವ ನೀರು, ಸೇವಿಸುವ ಗಾಳಿಯೂ ಕಲುಷಿತಗೊಂಡಿದೆ. ರೈತರು ಬೆಳೆಯುವ ಹಣ್ಣು, ಸೊಪ್ಪು, ತರಕಾರಿಗಳೂ ರಾಸಾಯನಿಕಗಳಿಂದ ಕೂಡಿವೆ. ಕೃಷಿ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರೈತರಿಗೂ ನಾಲ್ಕು ಕಾಸು ಹೆಚ್ಚು ಗಳಿಸುವ ಆಸೆ. ತಜ್ಞರು ಹೇಳುವುದಕ್ಕಿಂತ ಸ್ವಲ್ಪ ಹೆಚ್ಚೇ ಗೊಬ್ಬರ ಹಾಕಿದ್ರೆ ಬೆಳೆಯೂ ಹೆಚ್ಚು ಬರುತ್ತೆ ಎಂಬುದು ಅವರ ನಂಬಿಕೆ.
ಮಕ್ಕಳಿಗೆ ಕುರುಕಲು ತಿಂಡಿ ಇಷ್ಟ. ಹಾಗಂತ ಬೇಕರಿಯ ತಿಂಡಿ, ಎಂದೋ ತಯಾರಿಸಿದ ಪ್ಯಾಕೆಟ್ ತಿಂಡಿಗಳನ್ನು ಕೊಡುತ್ತೇವೆ. ತಂಪು ಪಾನೀಯ, ಕುರುಕಲು ತಿಂಡಿಗಳಿಗೆ ಬಳಸುವ ರುಚಿ ಹೆಚ್ಚಿಸುವ ಹಾಗೂ ದೀರ್ಘಕಾಲ ಕೆಡದಂತೆ ಇಡಲು ಬಳಸುವ ರಾಸಾಯನಿಕ… ಹೀಗೆ ತಿಂಡಿಯ ಜೊತೆಗೆ ರೋಗಗಳನ್ನೂ ಆ ಪೊಟ್ಟಣದಲ್ಲೇ ತುಂಬಲಾಗಿರುತ್ತದೆ. ನಗರಗಳಲ್ಲಿ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಒಂದು ಬಗೆಯ ಕಲಬೆರಕೆಯಾದರೆ, ಆಹಾರ ಬೀದಿ ಮತ್ತು ಗಾಡಿಗಳಲ್ಲಿ, ತೆರೆದ ಜಾಗಗಳಲ್ಲಿ ತಯಾರಿಸುವ ಆಹಾರಗಳು, ಬಳಸುವ ಎಣ್ಣೆ, ಕೃತಕ ಬಣ್ಣಗಳ ಬಳಕೆ ಎಲ್ಲವೂ ಆರೋಗ್ಯಕ್ಕೆ ಮಾರಕ. ಹಾಲು, ಬೆಣ್ಣೆ, ತುಪ್ಪ, ಜೇನಿಗೂ ತಪ್ಪಿಲ್ಲ ನಕಲಿಯ ಹಾವಳಿ. ಟೀಪುಡಿ, ಅರಿಶಿಣ ಪುಡಿಗೂ ಕೃತಕ ಬಣ್ಣದ ಹಂಗು. ಇವುಗಳನ್ನೆಲ್ಲ ನಿಯಂತ್ರಿಸಲು ಇಲಾಖೆ, ಅಧಿಕಾರಿಗಳು, ನಿಯಮ, ಕಾನೂನು ಎಲ್ಲವೂ ಇದೆ. ಆದರೆ, ಅವರೆಲ್ಲ ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಶುದ್ಧ ಕುಡಿಯುವ ನೀರು, ಗಾಳಿ ಕೂಡಾ ಅದೆಷ್ಟೋ ಮಂದಿಗೆ ಮರೀಚಿಕೆಯಾಗಿದೆ ಎಂಬುದು ಈ ಕಾಲದ ವ್ಯಂಗ್ಯ. ಕಾರ್ಖಾನೆಗಳ ತ್ಯಾಜ್ಯವನ್ನು ನದಿಗೆ ಬಿಡುವುದು, ವಿಷಕಾರಿ ಅನಿಲ ವಾತಾವರಣಕ್ಕೆ ಸೇರಿಸುವುದು, ಗಣಿಗಾರಿಕೆಯ ಧೂಳು, ಹೊಗೆ ಇವನ್ನೆಲ್ಲ ವರ್ಷಗಳ ಕಾಲ ಸೇವಿಸಿದ ಜನರು ಶ್ವಾಸಕೋಶದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗೆ ಬಲಿಯಾಗುತ್ತಿದ್ದಾರೆ.
ಆದರೆ, ಈ ಬಗ್ಗೆ ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರಗಳಾಗಲಿ ಯೋಚಿಸುತ್ತಿಲ್ಲ. ಆರೋಗ್ಯ – ಶಿಕ್ಷಣ ಸೇವೆಗಳನ್ನು ಸರ್ಕಾರಗಳು ಕಡೆಗಣಿಸಿ ದಶಕಗಳೇ ಕಳೆದಿವೆ. ಎಲ್ಲವೂ ಖಾಸಗೀಕರಣಗೊಂಡು ಬಡವರ ಕೈಗೆಟುಕದಂತಾಗಿದೆ. ಕ್ಯಾನ್ಸರ್ ಎಂದರೇನೇ ಭಯ. ಆ ಭಯಕ್ಕೇ ಕುಟುಂಬಗಳು ನೆಮ್ಮದಿ ಕಳೆದುಕೊಳ್ಳುತ್ತದೆ. ಇನ್ನು ಮಕ್ಕಳಿಗೆ ಕ್ಯಾನ್ಸರ್ ಬಂದರೆ ಆ ಕುಟುಂಬದ ಪಾಡು ಕೇಳಬೇಕೇ? ಈ ದೇಶದಲ್ಲಿ ಸರ್ಕಾರ ಬಡವರಿಗಾಗಿ ಜಾರಿಗೆ ತರುವ ಉಚಿತ ಯೋಜನೆಗಳು ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗಳನ್ನೂ ಒಳಗೊಳ್ಳದ ಹೊರತು ಅದಕ್ಕೆ ಅರ್ಥವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಗಂಭೀರ ಕಾಯಿಲೆಗಳಿಗೆ ಸಂಪೂರ್ಣ ಚಿಕಿತ್ಸೆ, ಅತ್ಯಾಧುನಿಕ ಸೌಲಭ್ಯ ಸಿಗುವಂತಾಗಬೇಕು. ಖಾಸಗಿ ಆಸ್ಪತ್ರೆಗಳು ಉಳ್ಳವರಿಗಷ್ಟೇ ಎಂಬಂತಾಗಿದೆ. ಯಾವುದೇ ರೋಗ ಬಂದ ಮೇಲೆ ಗುಣಪಡಿಸುವುದಕ್ಕಿಂತ ಬರದಂತೆ ನೋಡಿಕೊಳ್ಳುವುದು ಮುಖ್ಯ ಎಂಬುದು ಹಳೇ ಮಾತು. ಅದಕ್ಕಾಗಿ ಸರ್ಕಾರಗಳು ಏನು ಮಾಡಬೇಕು ಎಂಬ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.
2014ರಿಂದ ಕೇಂದ್ರ ಸರ್ಕಾರ ನವೆಂಬರ್ 7ರಂದು ಕ್ಯಾನ್ಸರ್ ಜಾಗೃತಿ ದಿನವನ್ನಾಗಿ ಆಚರಿಸುತ್ತಿದೆ. ಪ್ರತಿ ವರ್ಷವೂ ಕ್ಯಾನ್ಸರ್ ಪೀಡಿತರ ಅಂಕಿಅಂಶಗಳನ್ನು ಕೊಟ್ಟು ಸುಮ್ಮನಾಗುತ್ತಿದೆ. ಆದರೆ, ರೋಗ ಬರದಂತೆ ತಡೆಯುವ ಬಗ್ಗೆ ಜನ ಜಾಗೃತಿ ಮೂಡಿಸಲು ಯಾವ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ, ಅದು ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಕೂಡಾ ಆ ಅಂಕಿಅಂಶಗಳೇ ಹೇಳುತ್ತವೆ. ಕ್ಯಾನ್ಸರ್ ರೋಗಿಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
2023-2024ರಲ್ಲಿ ಮೋದಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ₹80, 517.62 ಕೋಟಿ ಹಣ ಮೀಸಲಿಟ್ಟಿತ್ತು, ಅದು ದೇಶದ ಜಿಡಿಪಿಯ 2.5%. 2024-25ರಲ್ಲಿ ₹90,658.63 ಕೋಟಿ ಮೀಸಲಿಟ್ಟಿದೆ. ಅಂದ್ರೆ ಜಿಡಿಪಿಯ 1.9%. ಆದರೆ, ಆರೋಗ್ಯ ಕ್ಷೇತ್ರಕ್ಕೆ ಬಜೆಟ್ನಲ್ಲಿ ಘೋಷಿಸುವ ಅನುದಾನ ಎಲ್ಲಿ ಹೋಗುತ್ತಿದೆ ಎಂಬುದು ಮಾತ್ರ ಲೆಕ್ಕಕ್ಕೆ ಸಿಗುತ್ತಿಲ್ಲ.
